ಶಹಾಪುರಃ ಕುಂಬಾರಿಕೆ ಸಾಮಗ್ರಿಗಳ ಮಾರಾಟಕ್ಕೆ ಸ್ಥಳವಕಾಶ ಕಲ್ಪಿಸಲು ಆಗ್ರಹ
ನಶಿಸುತ್ತಿರುವ ಮಣ್ಣಿನ ಸಾಮಗ್ರಿ ತಯಾರಿಕೆಗೆ ಪ್ರೋತ್ಸಾಹ ಅಗತ್ಯ
ಶಹಾಪುರ: ಕುಂಬಾರಿಕೆ ಮಾಡಿ ಮಾರಾಟ ಮಾಡುವ ಸಾಮಾಗ್ರಿಗಳ ಮಾರಾಟಕ್ಕೆ ನಗರ ಸಭೆ ಅಧಿಕಾರಿಗಳು ಸೂಕ್ತ ಸ್ಥಳ ಸೌಲಭ್ಯ ಒದಗಿಸಬೇಕು ಎಂದು ರಾಜ್ಯ ಕುಂಬಾರರ ಯುವ ಸೈನ್ಯ ತಾಲೂಕು ಘಟಕ ಆಗ್ರಹಿಸಿದೆ.
ಮದುವೆಗೆ ಬೇಕಾಗುವ ಹೈರಾಣಿ ಕೊಡ ಸೇರಿದಂತೆ ಬೇಸಿಗೆಯಲ್ಲಿ ತಂಪನೆಯ ಆರೋಗ್ಯಯುತ ನೀರಿಗಾಗಿ ಬಳಸುವ ಮಣ್ಣಿನ ಗಡಿಗೆ ಮತ್ತು ದೀಪಾವಳಿ ಹಬ್ಬ ಸೇರಿದಂತೆ ಇತರೆ ಹಬ್ಬ ಹರಿದಿನಗಳಲ್ಲಿ ಬೇಕಾಗುವ ಪ್ರಣತಿಗಳು, ಇತರೆ ಸಾಮಾಗ್ರಿಗಳ ಮಾರಾಟಕ್ಕೆ ನಗರದಲ್ಲಿ ಸೂಕ್ತ ಸ್ಥಳವಕಾಶ ಕಲ್ಪಿಸಬೇಕೆಂದು ಸೈನ್ಯದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ದೀಪಾವಳಿ ನಿಮಿತ್ತ ನಗರದ ಮಾರ್ಕೇಟ್ ಮಾರುತಿ ರಸ್ತೆ ಮೇಲೆ ಕುಂಬಾರ ಸಮಾಜದವರು ಪ್ರಣತಿ ಸೇರಿದಂತೆ ಇತರೆ ಸಾಮಾಗ್ರಿಗಳ ಮಾರಾಟಕ್ಕೆ ಪಡುತ್ತಿರುವ ಕಷ್ಟ ಕಾರ್ಪಣ್ಯಗಳ ಕುರಿತು ಅಧ್ಯಯನ ನಡೆಸಿದರು.
ಈ ಕುರಿತು ತಾಲೂಕು ಆಡಳಿತ ಮತ್ತು ನಗರಸಭೆ ಅಧಿಕಾರಿಗಳಿಗೆ ವರದಿ ಒಪ್ಪಿಸಲಾಗುವುದು ಎಂದು ತಿಳಿಸಿದ ಸೈನ್ಯದ ಪದಾಧಿಕಾರಿಗಳು, ಸಮಾಜದ ಜನರು ಸ್ತಃ ತಯಾರಿಸಿದ ಮನ್ಣಿನ ಸಾಮಾಗ್ರಿಗಳ ಮಾರಾಟಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಬದಿ ಕುಳಿತು ಮಾರಾಟ ಮಾಡಲು ವಿವಿಧ ಅಂಗಡಿ ಮಾಲೀಕರು ಅವರ ಅಂಗಡಿ ಬಳಿ ಕುಳಿತುಕೊಳ್ಳದಿರುವಂತೆ ಕಿರುಕುಳ ನೀಡುತ್ತಾರೆ. ಹೀಗಾಗಿ ಕುಂಬಾರರಿಗೆ ತುಂಬಾ ತೊಂದರೆಯಾಗಿದೆ.
ಅನಾದಿ ಕಾಲದಿಂದ ಕುಲ ಕಸುಬು ಮಾಡುತ್ತಾ ಬಂದಿರುವ ಸಮಾಜದ ಸಣ್ಣ ವ್ಯಾಪರಸ್ಥರು ಶ್ರಮವಹಿಸಿ ಹಬ್ಬ ಹರಿದಿನಗಳಿಗೆ ಸರ್ವ ಸಮಾಜದವರಿಗೂ ಬೇಕಾಗುವ ಪೂಜಾ ಸಾಮಾಗ್ರಿ, ಧೂಪ ಪಣತಿ, ದೀಪ ಪ್ರಣತಿ, ಇತರೆ ವಸ್ತುಗಳ ಅಗತ್ಯವಿದೆ. ಕಾರಣ ಸಮಾಜ ವ್ಯಾಪಾರಸ್ಥರಿಗೆ ಸೂಕ್ತ ಸ್ಥಳ ಅವಕಾಶ ಕಲ್ಪಸಬೇಕು. ಜನಪ್ರತಿನಿಧಿಗಳ ಅಧಿಕಾರಿಗಳು ಮುತುವರ್ಜಿವಹಿಸಿ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗೌರವ ಅದ್ಯಕ್ಷ ಬಸವರಾಜ ಕುಂಬಾರ, ಉಪಧ್ಯಾಕ್ಷ ರಾಘವೇಂದ್ರ ಕುಂಬಾರ, ಪ್ರಧಾನ ಕಾರ್ಯದರ್ಶಿ ಶಿವು ಕುಂಬಾರ, ಕಾರ್ಯದರ್ಶಿ ಸದಾಶಿವ ಕುಂಬಾರ, ಸಂಘಟನಾ ಕಾರ್ಯದರ್ಶಿ ಬಸವರಾಜ ಕುಂಬಾರ, ಪ್ರಚಾರ ಸಮಿತಿ ಕಾರ್ಯದರ್ಶಿ ಸಂಗಮೇಶ ಕುಂಬಾರ, ಖಜಾಂಚಿ ಉಮೇಶ ಕುಂಬಾರ, ಸಹ ಕಾರ್ಯದರ್ಶಿ ಶರಣು ಕುಂಬಾರ ಇತರರಿದ್ದರು.
ವೃತ್ತಿ ಬಾಂಧವರಿಗೆ ಸೌಲಭ್ಯ ಕಲ್ಪಿಸಿ
ಕುಂಬಾರಿಕೆ ವೃತ್ತಿ ಸಮರ್ಪಕ ಸೌಲಭ್ಯವಿಲ್ಲದ ಕಾರಣ ಸೊರಗುತ್ತಿದೆ. ಸರ್ಕಾರ ಕುಂಬಾರಿಕೆಗೆ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು. ಅಲ್ಲದೆ ತಯಾರಿಸಿದ ಸಾಮಾಗ್ರಿಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಒದಗಿಸಬೇಕು. ವೃತ್ತಿ ಬಾಂಧವರಿಗೆ ವಿಶೇಷ ಸಹಾಯ ಧನ, ಮಾರಾಟಕ್ಕಾಗಿ ಸೂಕ್ತ ಸ್ಥಳವಕಾಶ ಕಲ್ಪಿಸಬೇಕು ಎಂದು ತಾಲೂಕು ಅಧ್ಯಕ್ಷ ರಾಜು ಕುಂಬಾರ ಮನವಿ ಮಾಡಿದ್ದಾರೆ.