ಪ್ರಮುಖ ಸುದ್ದಿ

ಸಂತ್ರಸ್ಥರ ಪರಿಹಾರ ಯೋಜನೆಯ ಬಗ್ಗೆ ಜನರಲ್ಲಿ ಅರಿವು ಅಗತ್ಯಃ ನ್ಯಾ.ಬನಸೋಡೆ

ಹಳ್ಳಿ ಜನರಿಗೆ ಕಾನೂನು ನೆರವು ಅಗತ್ಯ

ಯಾದಗಿರಿಃ ನೈಸರ್ಗಿಕ ವಿಕೋಪದಂತಹ ಘಟನೆಗಳಿಂದ ಸಾರ್ವಜನಿಕರು ತಮ್ಮ ವೈಯಕ್ತಿಕ ಆಸ್ತಿಗೆ ಧಕ್ಕೆ ಉಂಟಾದರೆ ಸಂತ್ರಸ್ಥರ ಪರಿಹಾರ ಯೋಜನೆಯಡಿ ಲಭ್ಯವಾಗುವ ಸವಲತ್ತುಗಳು ಹಾಗೂ ಹಾನಿಯುಂಟಾದರೆ ಅದಕ್ಕೆ ಪರಿಹಾರ ಪಡೆದುಕೊಳ್ಳುವ ಬಗ್ಗೆ ಹಳ್ಳಿಯ ಜನರಲ್ಲಿ ತಿಳುವಳಿಕೆ ಇರುವುದಿಲ್ಲ. ಹಾಗಾಗಿ ಅವರಲ್ಲಿ ಕಾನೂನಿನ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ  ಪ್ರಕಾಶ ಅರ್ಜುನ ಬನಸೋಡೆ ಅವರು ಪ್ರತಿಪಾದಿಸಿದ್ದಾರೆ.

ಶುಕ್ರವಾರ ನಗರದ ತಹಸೀಲ್ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಯಾದಗಿರಿ ಜಿಲ್ಲಾ ವಕೀಲರ ಸಂಘ, ತಾಲ್ಲೂಕ ಪಂಚಾಯಿತಿ ಹಾಗೂ ಕಂದಾಯ ಇಲಾಖೆ, ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂತ್ರಸ್ಥರ ಪರಿಹಾರ ಯೋಜನೆ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಘಟನೆ ನಡೆದ ಒಂದು ವರ್ಷದೊಳಗೆ ಸಂತ್ರಸ್ಥರು ತಮಗಾದ ಹಾನಿಯ ಬಗ್ಗೆ ನಿಗದಿತ ನಮೂನೆಯ ಅರ್ಜಿಯಲ್ಲಿ ಕೈಬರಹದಲ್ಲಿಯೇ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ವ್ಯಕ್ತಿಯ ಮೇಲೆ ನಡೆದ ಅನ್ಯಾಯದ ಪ್ರಮಾಣದ ಆಧಾರದ ಮೇಲೆ ಪರಿಹಾರವನ್ನು ನಿರ್ಧರಿಸುವ ಅಧಿಕಾರ ಕಾನೂನಿನಲ್ಲಿದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರವು ಪ್ರತಿವರ್ಷ ಹಿಂದಿನ ವರ್ಷ ಈ ಯೋಜನೆಗೆ ತಗುಲಿದ ವೆಚ್ಚ ಅಥವಾ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಕೋರಿಕೊಂಡ ವೆಚ್ಚದ ಹಣವನ್ನು ಮಂಜೂರು ಮಾಡುತ್ತದೆ. ಈ ಯೋಜನೆಯಡಿ ಸಂತ್ರಸ್ಥನು ಅಪರಾಧಿಯು ಎಸಗಿದ ಅಪರಾಧದಿಂದಾಗಿ ಹಾನಿ ಅನುಭವಿಸಿದ ವ್ಯಕ್ತಿ ಇಲ್ಲವೆ ಆತನ ಅವಲಂಬಿತರು ಯೋಜನೆಯಡಿ ಪರಿಹಾರ ಪಡೆದು ಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

ವಕೀಲರಾದ ಶ್ರೀ ಶರಣಗೌಡ ಎಸ್ ಪಾಟೀಲ್ ಅವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿ, ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಕಲಂ 357ಎ,ಬಿ.ಸಿ ಅಡಿಯಲ್ಲಿ ಅಪರಾಧದಿಂದ ವೈಯಕ್ತಿಕವಾಗಿ ಹಾಗೂ ಆಸ್ತಿಗೆ ಸಂಬಂಧಿಸಿದಂತೆ ಹಾನಿಯನ್ನು ಅನುಭವಿಸಿದ ಸಂತ್ರಸ್ತರು ಮತ್ತು ಅದರ ಅವಲಂಬಿತರಿಗೆ ಪರಿಹಾರ ಮತ್ತು ಪುನರ್ ವಸತಿ ಒದಗಿಸುವ ಸಲುವಾಗಿ ಕರ್ನಾಟಕ ಸಂತ್ರಸ್ಥರ ಪರಿಹಾರ ಯೋಜನೆ 2011 ನ್ನು ಕರ್ನಾಟಕ ಸರಕಾರ ಜಾರಿಗೆ ತಂದಿದೆ ಎಂದು ಅವರು ಹೇಳಿದರು.

ಆಸಿಡ್ ದಾಳಿ, ಕಳ್ಳತನ, ಮನೆಸುಟ್ಟಿರುವುದು ಹಾಗೂ ಕೊಲೆ ಮುಂತಾದ ಪ್ರಕರಣಗಳಲ್ಲಿ ಕಾನೂನು ಮುಖಾಂತರ ಪರಿಹಾರ ಪಡೆದುಕೊಳ್ಳಬಹುದು. ಪರಿಹಾರದ ಹಣವು ನೇರವಾಗಿ ಸಂತ್ರಸ್ಥರ ಖಾತೆಗೆ ಜಮೆಯಾಗುತ್ತದೆ. ಇದು ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಜಾರಿಯಲ್ಲಿದೆ ಎಂದು ಅವರು ತಿಳಿಸಿದರು.

ಯಾದಗಿರಿ ತಾಲ್ಲೂಕ ಗ್ರೇಡ್ 2 ತಹಸೀಲ್ದಾರ್ ಮಲ್ಲಿಕಾರ್ಜುನ ತಂಗಡಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಶ್ರೀನಿವಾಸರಾವ್ ಕುಲ್ಕರ್ಣಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಹಾಗೂ ವಕೀಲರಾದ ಶ್ರೀ ಸಿ.ಎಸ್ ಮಾಲಿಪಾಟೀಲ್, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಶ್ರೀ ಸುರೇಶ ಬಾಬು ಕಲಾಲ್, ಯಾದಗಿರಿ ಉಪನೋಂದಣಾಧಿಕಾರಿ ಪ್ರವೀಣ, ವಕೀಲರಾ ಶ್ರೀ ಶಾಂತಪ್ಪ ಕಾನಳ್ಳಿ, ವಕೀಲರು ಹಾಗೂ ತಹಸೀಲ್ ಕಾರ್ಯಾಲಯದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಕೀಲರಾದ ದೇವಿಂದ್ರಪ್ಪ ಎಚ್. ಯರಗೋಳ ವಂದಿಸಿದರು. ಶಾಂತಪ್ಪ ಡಿ ಜಾದವ್ ಅವರು ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button