ರೈತನ ಕರೆಗೆ ಯಾದಗಿರಿ ಶಾಸಕ ಮಾಲಕರೆಡ್ಡಿ ಪ್ರತಿಕ್ರಿಯೆ ಹೇಗಿದೆ ಗೊತ್ತಾ?
ಸಂಕಷ್ಟಕ್ಕೆ ಸಿಲುಕಿರುವ ರೈತರ ಕಷ್ಟ ಕೇಳದ ಅಧಿಕಾರಿಗಳು
ಯಾದಗಿರಿ: ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅಲ್ಲದೆ ಅನೇಕ ಕಡೆ ಬೆಳೆಹಾನಿಯಾಗಿದೆ. ವಿವಿಧ ಬೆಳಗಳು ಕೀಟಬಾಧೆಯಿಂದಾಗಿ ಹಾಳಾಗಿವೆ. ಪರಿಣಾಮ ರೈತಾಪಿ ವರ್ಗ ಮತ್ತೊಮ್ಮೆ ಸಂಕಷ್ಟಕ್ಕೆ ಗುರಿಯಾಗಿದೆ. ಆದರೆ, ಸಂಭಂದಿತ ಅಧಿಕಾರಿಗಳು ಮಾತ್ರ ಈವರೆಗೆ ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಅನ್ನೋದು ರೈತರ ಅಳಲಾಗಿದೆ.
ಹೀಗಾಗಿ, ಅಬ್ಬೇತುಮಕೂರು ಗ್ರಾಮದ ಮಲ್ಲಿಕಾರ್ಜುನ ಎಂಬ ರೈತ ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಭೇಟಿಮಾಡಿ ಪರಿಶೀಲನೆ ಮಾಡಿ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾನೆ. ಆದರೆ, ಶಾಸಕರು ಮಾತ್ರ ನಾನು ಬೆಂಗಳೂರಿನಲ್ಲಿದ್ದೇನೆ ಅಂದಿದ್ದಾರೆ. ಅಲ್ಲದೆ ಸ್ಥಳಕ್ಕೆ ಭೇಟಿ ಮಾಡಲು ನಾನೇನು ರೆವಿನ್ಯೂ ಇನ್ಸ್ಪೆಕ್ಟರ್ ಏನು ಎಂದು ಮರುಪ್ರಶ್ನೆ ಹಾಕಿ ಕರೆ ಕಟ್ ಮಾಡಿದ್ದಾರೆ. ಇದೀಗ ರೈತ ಮಲ್ಲಿಕಾರ್ಜುನ ಮತ್ತು ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಅವರ ಫೋನ್ ಸಂಭಾಷಣೆ ವೈರಲ್ ಆಗಿದೆ.
ಮಾಲಕರೆಡ್ಡಿ ಅವರು ಹಿರಿಯ ಶಾಸಕರಾಗಿದ್ದು ಸಂಕಷ್ಟದಲ್ಲಿರುವ ರೈತನ ಕರೆಗೆ ಸ್ಪಂದಿಸಿ ಕನಿಷ್ಟ ಸೌಜನ್ಯದಿಂದ ಸಮಾಧಾನ ಹೇಳಬೇಕಿತ್ತು. ಅದರ ಬದಲು ನಿರ್ಲಕ್ಷ ವಹಿಸಿದ್ದಾರೆ. ರೈತ ವಿರೋಧಿ ಧೋರಣೆಯ ಮಾತುಗಳನ್ನಾಡಿದ್ದಾರೆ ಎಂದು ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.