ಶ್ರೀರಾಮನ ಬದುಕು ಯಾರಿಗೂ ಬೇಡ, ಆದರೆ ರಾಮನನ್ನು ಪೂಜಿಸೋದೇಕೆ?
‘ಮಜಾ ಟಾಕೀಸ್’ನಲ್ಲೊಂದು ಅಚ್ಚರಿ ಸಿರೀಸ್-3: ಸದ್ಗುರು ಜಗದೀಶ ವಾಸುದೇವ ಗುರೂಜಿ ಹೇಳಿದ್ದು…
ರಾಮನು ನಮ್ಮ ದೇಶದಲ್ಲಿ ಅತ್ಯಂತ ಪೂಜಿಸಲ್ಪಡುವ ದೇವರು. ಆದರೆ ರಾಮನು ಅಯೋಧ್ಯೆಯಲ್ಲಿ ಜನಿಸಿದನು. ಈ ಲಂಕೆಯವರು ಬಂದು ಆತನ ಹೆಂಡತಿಯನ್ನು ಅಪಹರಿಸಿದರು. ನಾನು ನಿಮಗೆ ಇದನ್ನು ಹೇಳಬೇಕು: ಒಮ್ಮೆ ನಾನು ಆಂಧ್ರಪ್ರದೇಶದ ನಲ್ಲೂರಿನಲ್ಲಿದ್ದೆ. ನಾನು ದೊಡ್ಡ ಶಾಲಾ ಮಕ್ಕಳ ಗುಂಪಿನೊಡನೆ ಮಾತನಾಡಬೇಕಿತ್ತು. ಅಂದರೆ, 15-16ವರ್ಷದ 8-10ಸಾವಿರ ಶಾಲಾ ಮಕ್ಕಳ ಗುಂಪು. ಅವರಲ್ಲಿ 14ವರ್ಷದ
ಪುಟ್ಟ ಬಾಲಕಿಯೊಬ್ಬಳು ಹೀಗೆ ಕೇಳುತ್ತಾಳೆ. ಸದ್ಗುರು.. ರಾಮನು ತನ್ನ ಅಯೋಧ್ಯೆಯಿಂದ ಶ್ರೀಲಂಕೆಯವರೆಗೆ ನಡೆದು ಹೋದನೆಂದು ಹೇಳುತ್ತಾರೆ. ಇದು ಸತ್ಯವೇ ಅಥವಾ ಕಟ್ಟು ಕಥೆಯೇ? ನಾನು ಹೇಳಿದೆ ಹೋ, ಹೋ, ಹೋ, ಈಗ ನಿನಗಿನ್ನೂ ಹದಿನಾಲ್ಕು ವರ್ಷವಷ್ಟೇ. ಮುಂದೊಂದು ದಿನ ನೀನು ಬೆಳೆದು ದೊಡ್ಡವಳಾಗಿ, ಒಬ್ಬ ಗಂಡನ್ನು ಆಯ್ಕೆ ಮಾಡುತ್ತಿಯಾ, ನೀನು ಒಂದು ವೇಳೆ ಕಳೆದು ಹೋದಲ್ಲಿ, ನಿನ್ನ ಗಂಡ ನೀನು ಎಲ್ಲೇ ಇದ್ದರೂ ನಿನ್ನನ್ನು ಖಂಡಿತವಾಗಿ ಹುಡುಕಿಕೊಂಡು ಬರಬೇಕು ಮತ್ತು ಇದು ಸಾಧ್ಯ ಎಂದು ಭಾವಿಸಬೇಕೆ ಅಥವಾ ಅವನು ನಿನ್ನನ್ನು ಹುಡುಕುವುದು ವಾಸ್ತವಿಕ ಪರಿಹಾರವಲ್ಲವೆಂದು ತಿಳಿದು ಹುಡುಕುವುದನ್ನು ನಿಲ್ಲಿಸಬೇಕೆಂದು ಯೋಚಿಸುತ್ತೀಯಾ? ಓ, ಆ ಸಣ್ಣ ಬಾಲಕಿಗೂ ತನಗೆ ಏನು ಬೇಕೆಂಬುದು ಗೊತ್ತು. ಆದರೆ, ಅವಳು ರಾಮನು ನಡೆದಿರಲಾರ ಎಂದು ಭಾವಿಸುತ್ತಾಳೆ.
ಈಗ ರಾಮನು ನಡೆದುಕೊಂಡೇ ಬಂದನು, ಯುದ್ಧದಲ್ಲಿ ಹೋರಾಡಿದನು, ಆಕೆಯನ್ನು ಪುನ: ಜೊತೆ ಕರೆದುಕೊಂಡು ಹೋದನು. ಮತ್ತೆ ಆಕೆಯನ್ನು ಕಳೆದುಕೊಂಡನು. ಹೀಗೆ ಅವನ ಜೀವನವೇ ಒಂದು ಅವಘಡಗಳ ಸರಣಿಯಾಗಿ ಹೋಯಿತು. ಅವನು ಪಟ್ಟಾಭಿಷಿಕ್ತ ರಾಜನೇ ಆದರೂ ರಾಜ್ಯವನ್ನೇ ತೊರೆದು ಕಾಡಿಗೆ ಹೋಗುತ್ತಾನೆ. ನೀವು ಅರ್ಥಮಾಡಿಕೊಳ್ಳಬೇಕು. ಕಾಡಿಗೆ ಹೋಗುವುದು ಭಾವನಾತ್ಮಕ ಅನುಭವವಲ್ಲ. ಹೌದು, ನಾನು ಕಾಡುಗಳಲ್ಲಿ ವಾಸಿಸಿದ್ದೇನೆ, ಅಲ್ಲಿ ಸಿಕ್ಕಿದ್ದನ್ನೇ ತಿಂದುಕೊಂಡು, ಕಾಡಿನಿಂದ ಆಚೆ ಬಂದಾಗ ಯಾರೊಬ್ಬರೂ ನಿಮ್ಮನ್ನು ಗುರುತಿಸಲೂ ಆಗುವುದಿಲ್ಲ. ನಿಮ್ಮ ಮುಖವೆಲ್ಲಾ ಕ್ರಿಮಿಕೀಟಗಳ ಕಡಿತದಿಂದ ಉದಿಕೊಂಡು, ಎರಡೇ ವಾರಗಳಲ್ಲಿ 8-10ಕೆಜಿ ತೂಕವನ್ನೂ ಕಳೆದುಕೊಂಡು ಬಿಟ್ಟಿರುತ್ತೀರಿ. ಅದು ಬೇರೆ ವಿಷಯ.
ನಂತರ ರಾಮನು ತನ್ನ ಹೆಂಡತಿಯೊಡನೆ ಕಾಡಿಗೆ ತೆರಳುತ್ತಾನೆ. ಅವಳೇನೂ ಕಾಡಿನ ಬುಡಕಟ್ಟು ಮಹಿಳೆಯಲ್ಲ. ಅವಳು ರಾಜಕುಮಾರಿ. ನೀವು ಇಲ್ಲಿರುವ ಯಾವುದೇ ಹೆಣ್ಣು ಮಕ್ಕಳನ್ನು ಮೂರು ವಾರ ಕಾಡಿಗೆ ಕರೆದುಕೊಂಡು ಹೋಗಿ ಬಂದರೆ, ಅವರನ್ನು ಖಂಡಿತ ನೀವು ಗುರುತಿಸಲು ಸಾಧ್ಯವಿಲ್ಲ. ಆದ್ದರಿಂದ ಟಿವಿ ಧಾರವಾಹಿಗಳಲ್ಲಿ ತೋರಿಸುವಂತೆ, ಕಾಡಿನೊಳಗೆ ಹೋಗುವುದು, ಹಾಡುಗಳನ್ನು ಹಾಡುತ್ತಾ, ತೇಲುತ್ತಾ ಕುಲುಕುತ್ತಾ ಸಾಗುವುದಲ್ಲ. ಅವನು ಹೊಸದಾಗಿ ಮದುವೆಯಾದ ತನ್ನ ಹೆಂಡತಿಯೊಂದಿಗೆ ಕಾಡಿಗೆ ತೆರಳುತ್ತಾನೆ. ಅದರ ಕಷ್ಟ ತಿಳಿದ ತಮ್ಮನೂ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಅವರ ಜತೆಗೆ ತೆರಳುತ್ತಾನೆ. ಇದು ಸಾಲದೆಂದು ಅಲ್ಲಿಗೆ ಹೋದ ನಂತರ ಆತನ ಹೆಂಡತಿಯೂ ಅಪಹರಿಸಲ್ಪಡುತ್ತಾಳೆ. ನಂತರ ದಕ್ಷಿಣಕ್ಕೆ ಪಯಣಿಸಿ, ಯುದ್ಧ ಮಾಡಬೇಕಾಗುತ್ತದೆ. ಒಂದು ಸುಂದರವಾದ ನಗರವನ್ನು ಸುಟ್ಟು, ತನ್ನ ಹೆಂಡತಿಯನ್ನು ಮತ್ತೆ ಕರೆತರುತ್ತಾನೆ.
ಪುನ: ರಾಜಕೀಯ ಕಾರಣಗಳಿಂದ ಆಕೆಯನ್ನು ಕಾಡಿಗಟ್ಟುತ್ತಾನೆ. ಅದೂ ಆಗ ಆಕೆ ತುಂಬು ಗರ್ಭಿಣಿಯಾಗಿರುತ್ತಾಳೆ. ಅಲ್ಲಿ ಹೋಗಿ ಆಕೆ ಮಕ್ಕಳಿಗೆ ಜನ್ಮ ನೀಡುತ್ತಾಳೆ. ಆಗ ಸೋನೋಗ್ರಾಮ್ ಇರಲಿಲ್ಲ. ಹೆಣ್ಣೋ-ಗಂಡೋ ಅವಳಿ -ಜವಳಿಯೋ ಏನೂ ತಿಳಿಯುತ್ತಿರಲಿಲ್ಲ. ನಾನು ಇದನ್ನೇಕೆ ಹೇಳುತ್ತಿದ್ದೇನೆಂದರೆ, ಅವನು ರಾಜನಾಗಿದ್ದ! ಅವನಿಗೆ ಪುತ್ರನನ್ನು ಪಡೆಯುವುದು ಮುಖ್ಯವಾದ ವಿಷಯ. ಆದರೂ ಏನನ್ನೂ ತಿಳಿಯದೆ, ತನ್ನ ಗರ್ಭಿಣಿ ಪತ್ನಿಯನ್ನು ಕಾಡಿಗಟ್ಟುತ್ತಾನೆ. ಆಕೆಗೇನಾಗಬಹುದೆಂಬ ಅರಿವೂ ಆತನಿಗಿಲ್ಲ. ಆಕೆ ಇಬ್ಬರು ಗಂಡುಮಕ್ಕಳಿಗೆ ಜನ್ಮ ನೀಡುತ್ತಾಳೆ. ನಮ್ಮ ಜೀವನದಲ್ಲಿ ಅತಿ ಕೆಡುಕಾಗಬಹುದಾದರೆ, ತಿಳಿದೋ ತಿಳಿಯದೆಯೋ ನಮ್ಮ ಮಕ್ಕಳನ್ನೇ ಕೊಂದು ಕೊಳ್ಳುವುದಕ್ಕಿಂತ ಘೋರವಾದ ಕೆಡುಕು ಬೇರೊಂದಿರುವುದಿಲ್ಲ.
ಆದರೆ, ಶ್ರೀರಾಮನ ಜೀವನದಲ್ಲಿ ಆತನು ತನ್ನ ಮಕ್ಕಳನ್ನು ತಾನೇ ಕೈಯಾರೇ ಕೊಂದೇ ಬಿಡುವ ಹಂತದಲ್ಲಿರುತ್ತಾನೆ. ಅದೃಷ್ಠವಶಾತ್ ಹಾಗಾಗುವುದಿಲ್ಲ. ಆದರೆ, ಸೀತೆಯು ಕಾಡಿನಲ್ಲಿ ಸಾವನ್ನಪ್ಪುತ್ತಾಳೆ. ಅವನು ಆಕೆಯನ್ನೆಂದೂ ಮತ್ತೆ ನೋಡುವುದೇ ಇಲ್ಲ. ಇದೇನು ನಾನು ಹೇಳುತ್ತಿರುವ ಯಶೋಗಾಥೆಯೇ? ನಿಮಗೆ ರಾಮನ ಬದುಕು ಬೇಕೆ? ಖಂಡಿತ ಇಲ್ಲ ಅಲ್ಲವೇ? ಆದರೆ, ನಾವು ಆತನನ್ನು ಪೂಜಿಸುತ್ತೇವೆ. ಏಕೆಂದರೆ ಇಷ್ಟೆಲ್ಲಾ ಘಟನೆಗಳಲ್ಲಿ ಒಂದೇ ಒಂದು ಯಾರ ಬಾಳಲ್ಲಾದರೂ ಘಟಿಸಿದರೆ, ಅವರು ಒಡೆದೇ ಹೋಗುತ್ತಾರೆ. ಸರಣಿ ಅವಘಡಗಳು, ಆದರೆ ಆತನು ಎಲ್ಲೂ ತನ್ನ ನೀತಿವಂತಿಕೆಯನ್ನು ತೊರೆಯುವುದಿಲ್ಲ. ಸಮತೋಲನ ಕಳೆದುಕೊಳ್ಳುವುದಿಲ್ಲ. ಒಳಿತು ಕೆಡುಕುಗಳ ವಿಶ್ಲೇಷಣೆಯನ್ನು ಕಳೆದುಕೊಳ್ಳುವುದಿಲ್ಲ. ಯಾವುದೇ ಪರಿಸ್ಥಿತಿಗೂ ರಾಜಿಯಾಗದೆ, ಜೀವನವನ್ನು ಸಮಸ್ಥಿತಿಯಿಂದ ಸ್ವೀಕರಿಸುತ್ತಾನೆ.
ಇದರಿಂದ ತಿಳಿಯುವುದೇನೆಂದರೆ ಪ್ರಪಂಚ ನಿಮಗೆ ಏನನ್ನೂ ನೀಡುವುದು ಎನ್ನುವುದು ನಿಮ್ಮ ಆಯ್ಕೆಯಲ್ಲ. ಆದರೆ, ಅವರಿಂದ ನಾವೇನು ಮಾಡುತ್ತೇವೆಂಬುದು ಶೇ100ರಷ್ಟು ನಮ್ಮ ಆಯ್ಕೆ. ಆದ್ದರಿಂದ ಈತನು ಇದಕ್ಕೆ ಒಂದು ಒಳ್ಳೆಯ ಉದಾಹರಣೆ. ಮನುಷ್ಯ ಪ್ರಗ್ನೆಯೆಂದರೇನು, ಯಾರು ನಿಮಗೇನು ಮಾಡುತ್ತಾರೆ, ನೀವು ಯಾರು, ಇವೆಲ್ಲವೂ ನೀವು ಜಾಗರೂಕರಾಗಿದ್ದರೆ ಮಾತ್ರ ನೀವೇ ನಿರ್ಣಯಿಸಬಹುದು. ನೀವು ಒತ್ತಡದ ನಿರ್ಣಯಕ್ಕೆ ವಾಲಿದರೆ ಬೇರೆಯವರು ನಿಮ್ಮ ಬಗ್ಗೆ ನಿರ್ಣಯಗಳನ್ನು ಮಾಡುತ್ತಾರೆ. ಇದನ್ನು ರಾಮನು ತನ್ನ ಬದುಕಿನಲ್ಲಿ ನಡೆದ ಸರಣಿ ಅವಘಡಗಳ ಉದಾಹರಣೆಗಳಿಂದ ತಿಳಿಸುತ್ತಾನೆ. ಆದ್ದರಿಂದ ನಾವು ಅವನಿಗೆ ಶಿರಬಾಗುತ್ತೇವೆ, ಹೊರತು ಯಶಸ್ಸು ಮುಂತಾದವುಕ್ಕಲ್ಲ.
ಅಂದರೆ, ನಾವು ನೀವೆಲ್ಲಾ ಪೂಜಿಸುವ ಈ ದೇವತೆಗಳು ಮನುಷ್ಯರೇ ಆದರೆ ಅವರು ತಮ್ಮ ವಿಶಿಷ್ಟ ಗುಣಗಳಿಂದ ದೇವರ ಸ್ಥಾನಕ್ಕೇರಿ ದೇವತೆಗಳೆಂದು ಕರೆಯಿಸಿಕೊಳ್ಳುತ್ತಾರೆ. ಇಂದಿನ ದಿನಗಳಲ್ಲಿ ಸಚಿನ್ ತಂಡೂಲ್ಕರ್ ನನ್ನು ಕ್ರಿಕೆಟ್ಟಿನ ದೇವರೆನ್ನುತ್ತೇವೆ. ಅಂದರೆ ನಮ್ಮ ಸಂಸ್ಕೃತಿಯಲ್ಲಿ ಯಾರಾದರೂ ಒಂದು ವಿಷಯದಲ್ಲಿ ಪರಿಣತಿ ಹೊಂದಿದ್ದರೆ ಅವರನ್ನು ದೇವರನ್ನುತ್ತೇವೆ. ಆದರೆ, ನಾವು ಯಾವತ್ತೂ ನಿಮಗೆ ನಿಮ್ಮ ಬದುಕನ್ನು ನಡೆಸುವವನ್ನೊಬ್ಬ ಮೇಲಿದ್ದಾನೆಂದು ಹೇಳಿಲ್ಲ. ನೀವು ಬೇರೆಯವರನ್ನು ಅನುಸರಿಸಿ ಎಲ್ಲದಕ್ಕೂ ಮೇಲೆ ನೋಡುತ್ತೀರಿ.
ನಾವು ನಿಮಗೆ ಹೇಳುವುದೇನೆಂದರೆ ನಿಮ್ಮ ಬದುಕು ನಿಮ್ಮ ಕರ್ಮ. ಅಂದರೆ, ಈ ಬುದುಕು ನೀವು ರೂಪಿಸಿಕೊಂಡದ್ದು, ನೀವು ಅದನ್ನು ನಿಮಗೆ ಬೇಕಾದಂತೆ ರೂಪಿಸಿಕೊಳ್ಳಿ. ನಿಮ್ಮ ಬದುಕನ್ನು ನೀವು ಸುಂದರವಾಗಿಸಿಕೊಳ್ಳಬಹುದು. ಕಠೋರವೂ ಆಗಿಸಿಕೊಳ್ಳಬಹುದು. ಇದು ಸಂಪೂರ್ಣವಾಗಿ ನೀವು ರೂಪಿಸಿದಂತಾಗುವುದು. ಕರ್ಮವೆಂದರೆ ಇದೆ. ಕರ್ಮ ಎಂದರೆ ಅಯ್ಯೋ ಕರ್ಮ ಎನ್ನುವುದಲ್ಲ. ನೀವು ನಿಮ್ಮ ಬದುಕಿನ ಪ್ರತಿಯೊಂದು ಕ್ಷಣವನ್ನೂ ರೂಪಿಸಿದ್ದೀರಿ. ಹೇಗೆ ನಿಮ್ಮ ಬದುಕನ್ನು ಈ ಕ್ಷಣ ಅನುಭವಿಸುತ್ತೀದ್ದೀರಿ. ನೀವು ಯಾರು, ಏನು, ಎಲ್ಲವೂ ನಿಮ್ಮಿಂದ ರೂಪುಗೊಂಡಿದ್ದು. ಇದು ನಮ್ಮ ಸಂಸ್ಕೃತಿ, ನಾವು ಎಂದೂ ಮೇಲಿರುವ ದೇವರ ಬಗ್ಗೆ ಹೇಳಿಲ್ಲ. ನಾವು ಸೃಷ್ಟಿಯ ಮೂಲವು ಹೇಗೆ ನಿಮ್ಮಲ್ಲೇ ಇದೆ ಎಂಬುದನ್ನು ತಿಳಿಸಲು ಪ್ರಯತ್ನಿಸುತ್ತಿದ್ದೇವೆ, ಮನಸ್ಸಿದ್ದಲ್ಲಿ ಮಾತ್ರ ನೀವು ಇದನ್ನು ಅನುಭವಿಸಬಹುದು.
– ಮಲ್ಲಿಕಾರ್ಜುನ ಮುದನೂರ್