ಬಸವಭಕ್ತಿ

2030ರ ಹೊತ್ತಿಗೆ ಭಾರತದಲ್ಲಿ ಕುಡಿಯಲು ನೀರೂ ಸಿಗಲ್ಲ ಎಚ್ಚರಿಕೆ!

‘ಮಜಾ ಟಾಕೀಸ್’ನಲ್ಲೊಂದು ಅಚ್ಚರಿ ಸಿರೀಸ್-5: ಸದ್ಗುರು ಜಗದೀಶ ವಾಸುದೇವಶ್ರೀ ಹೇಳಿದ್ದು…

RALLY FOR RIVERS ಚಳುವಳಿಗೆ ಕೈಜೋಡಿಸೋಣ ಬನ್ನಿ, ಇದು ವಿನಯವಾಣಿ ಕಳಕಳಿ

ನಾನೂ ಸುಮಾರು 4ವರ್ಷಗಳಿಂದಲೂ ಏನು ಮಾಡಿದರೆ ಪ್ರಕೃತಿಯ ವಿನಾಶವನ್ನು ತಡೆಗಟ್ಟಬಹುದು ಅಂತ ಯೋಚನೆ ಮಾಡುತ್ತಾ ಬಂದೆ. ಬೇರೆ ದೇಶಗಳು ಈ ಬಗ್ಗೆ ಏನು ಮಾಡುತ್ತಿವೆ ಎಂಬುದನ್ನೂ ಗಮನಿಸಿದೆ. ಆದರೆ ಬೇರೆ ದೇಶಗಳು ಅನುಸರಿಸುವ ವಿಧಾನಗಳನ್ನು ನಮ್ಮ ದೇಶದಲ್ಲಿ ಅನುಸರಿಸಲು ಬರುವುದಿಲ್ಲ. ಅವರ ಪರಿಸ್ಥಿತಿಯೇ ಬೇರೆ, ನಮ್ಮದೇ ಬೇರೆ ಹಾಗಾಗಿ, ಬೇರೆಯವರನ್ನು ಅನುಕರಿಸದೆಯೇ ನಮ್ಮ ದೇಶಕ್ಕೆ ಹೊಂದುವ ಕಾರ್ಯ ವಿಧಾನವೇನು ಎಂದು ಚಿಂತಿಸಿದೆ.

ನಮ್ಮ ದೇಶದ ನದಿಗಳ ಪೈಕಿ 100ಕ್ಕೆ 4ಭಾಗದಷ್ಟು ನದಿಗಳು ಮಾತ್ರವೇ ಹಿಮಪೋಷಿತ ನದಿಗಳು. ಉಳಿದ 96ಭಾಗದಷ್ಟು ನದಿಗಳು ಅರಣ್ಯಪೋಷಿತ ನದಿಗಳು. ಮತ್ತೂ ಸರಳವಾಗಿ ಹೇಳುತ್ತೇನೆ. ಸರಾಸರಿ ಲೆಕ್ಕದಲ್ಲಿ ನೋಡಿದರೆ ನಮ್ಮ ದೇಶದಲ್ಲಿ ವರ್ಷಕ್ಕೆ ಕೇವಲ 45 ದಿನಗಳಷ್ಟೇ ಮಳೆಯ ದಿನಗಳು. ನೆನ್ನೆ ನಾನು ಬೆಂಗಳೂರಿಗೆ ಬಂದಾಗ ಯಾರೋ ಹೇಳುತ್ತಿದ್ದರು. ಜಾಸ್ತಿ ಮಳೆ ಬರುತ್ತಾ ಇದೆ ಅಂತ. ಆದರೆ ಜಾಸ್ತಿ ಎಲ್ಲಿ ಬಂತು? ಹಾಗೆ ಹೇಳುವವರು ಇಂಗ್ಲಿಷ್ ಜನಗಳು. ಅದು ಅವರ ದೇಶದ ಮಟ್ಟಿಗೆ ಸಮಂಜಸ, ಯಾಕೆಂದರೆ ಅವರ ದೇಶದಲ್ಲಿ ವರ್ಷಕ್ಕೆ 250 ದಿನಗಳು ಮಳೆಯ ದಿನಗಳು.

ಆದರೆ, ನಮಗೆ ಇರುವುದು ಸರಾಸರಿ 45ದಿನಗಳು ಮಾತ್ರ. ಆ ಮಳೆ ಒಂದು ಕಾಡಿನ ಮೇಲೆ ಬಿದ್ದರೆ ಆ ನೆಲದಲ್ಲಿ ಹಬ್ಬಿದ ಬೇರುಗಳು ಜಾಲದಿಂದಲೂ ಆ ಜಾಗದಲ್ಲಿರುವ ಜೈವಿಕ ಮತ್ತು ಸಾವಯವ ಪ್ರತಿಕ್ರಿಯೆಗಳಿಂದಲೂ ಮಳೆಯ ನೀರು ನೆಲದಲ್ಲಿ ಇಂಗುವುದು. ಆದರೆ, ಕಾಡನ್ನು ತೆಗೆದುಬಿಟ್ಟರೆ ಮಳೆಯ ನೀರು ನೆಲದ ಮೇಲೆ ಹರಿದು ಹೋಗಿ ನೆಲದ ಒಳಗೆ ಇಂಗಲಾರದು. ಹಾಗಾಗಿಯೇ ನಮ್ಮ ದೇಶದಲ್ಲಿ ಪ್ರವಾಹ, ಬರಗಾಲಗಳು ಸಾಲಾಗಿ ಆಗುತ್ತಿರುವುದು. ನೀರು ಇಂಗುವಂತೆ ಮಾಡಲು ಬೇಕಾದ ಮರಗಿಡ ಕಾಡುಗಳ ಅಭಾವವೇ ಇದಕ್ಕೆ ಕಾರಣ. ಕೆಲವರು ಹೇಳುತ್ತಾರೆ. ನಮ್ಮ ಮನೆಯಲ್ಲ ಮಳೆ ನೀರಿನ ಕೊಯ್ಲು ಮಾಡುತ್ತಿದ್ದೇವೆ ಅಂತ.

ಆದರೆ, ಮನೆಯಮೇಲೆ ಬಿದ್ದ ನೀರಿನಿಂದ ಮನೆಯ ತೊಟ್ಟಿಗೆ ನೀರು ದೊರಕೀತೇ ವಿನಹ ಹೆಚ್ಚಿನ ಪ್ರಯೋಜನವೇನಾದೀತು? ಇದು ಕೆಟ್ಟದ್ದೇನೂ ಅಲ್ಲ, ಆದರೆ, ಪ್ರಯೋಜನ ಸೀಮಿತ. ನನಗಿನ್ನೂ ಗ್ನಾಪಕವಿದೆ. ಒಂದು ಕಾಲದಲ್ಲಿ ನಾನು ಕಟ್ಟಡಗಳನ್ನು ಕಟ್ಟುವ ಬಿಸಿನೆಸ್ ಮಾಡುತ್ತಿದ್ದೆ. ಮೆಜೆಸ್ಟಿಕ್ ನಲ್ಲಿ ಒಂದು ಕೆಲಸ ನಡೆಯುತ್ತಿತ್ತು. ಪಾಯ ಹಾಕಲು 5ಅಡಿ ಆಳದ ಹಳ್ಳ ತೋಡಿದರೆ ಅದು ನೀರಿನಿಂದ ತುಂಬಿ, ಕಾಂಕ್ರೀಟ್ ಹಾಕುವುದೇ ಕಷ್ಟವಾಯ್ತು. ಈಗ 2000ಅಡಿ ತೋಡಿದರೂ ನೀರು ಸಿಗಲಾರದು. ವಿಗ್ನಾನಿಗಳು ಹೇಳುವುದೆಂದರೆ ಯಾವ ನೀರು 1000 ಅಡಿಗಳಷ್ಟು ಒಳಗೆ ಇರುವುದೋ ಅದು ಲಕ್ಷಾಂತರ ವರ್ಷಗಳಿಂದ ಅಲ್ಲೇ ಇರುವ ನೀರು. ಶಕ್ತಿಶಾಲಿ ಪಂಪುಗಳನ್ನು ಉಪಯೋಗಿಸಿ ಆಳದಲ್ಲೆಲ್ಲೋ ಇರುವ ನೀರನ್ನು ಬೆಂಗಳೂರಿನಲ್ಲಿರಬಹುದಾದ 10ಲಕ್ಷ ಬೋರ್ ಗಳು ದಿನಕ್ಕೆ 4ರಿಂದ 8ಗಂಟೆಗಳ ಕಾಲ ಎಳೆದು ಎಳೆದು ಹೊರಗೆ ಹಾಕಿದ ಮೇಲೆ ಆಳದಲ್ಲಿ ನೀವುಗಳು ಹೊಸದಾಗಿ ಉಂಟು ಮಾಡುವ ಖಾಲಿಜಾಗದ ಪರಿಣಾಮವೇನಾದೀತು ಅಂತ ಯೋಚಿಸಿದ್ದೀರಾ?

ನೀವೆಲ್ಲರೂ ಮಕ್ಕಳು ಮರಿ ಇರುವವರು. ನಿಮ್ಮ ಮುಂದಿನ ತಲೆಮಾರಿನ ಗತಿಯೇನೆಂಬ ಪರಿವೇ ನಿಮಗಿದೆಯೇ? ನಾವು ಹೇಗೆ ಜೀವನ ನಡೆಸುತ್ತಿದ್ದೇವೆಂದರೆ ನಾವೇ ಇಲ್ಲಿ ಇರುವ ಕಟ್ಟ ಕಡೆಯ ತಲೆಮಾರಿನವರು. ನಮ್ಮ ನಂತರ ಬರುವವರು ಯಾರೂ ಇಲ್ಲ. ಏನಿದೆಯೋ ಅದೆಲ್ಲ ನಮಗೆ ಮಾತ್ರ ಸೇರಿದ್ದು ಎನ್ನುವ ರೀತಿ ನಾವು ಪ್ರಾಕೃತಿಕ ಸಂಪತ್ತನ್ನು ಖಾಲಿ ಮಾಡುತ್ತಿರುವ ರೀತಿ ನೋಡಿದರೆ ಮುಂದಿನ ತಲೆಮಾರಿನವರಿಗೆ ಏನೇನೂ ಉಳಿಯುವ ಹಾಗೆ ಕಾಣುತ್ತಿಲ್ಲ.

ಇಂದಿನ ಸ್ಥಿತಿಗೆ ಜನಸಂಖ್ಯಾ ಸ್ಪೊಟವೂ ಕಾರಣ. 1947ರಲ್ಲಿ 33ಕೋಟಿ ಮಾತ್ರವೇ ಇದ್ದ ನಾವು ಈಗ 126 ಕೋಟಿಗಳಷ್ಟಾಗಿದ್ದೇವೆ 70 ವರ್ಷಗಳಲ್ಲಿ 4ಪಟ್ಟು ಬೇಜವಬ್ದಾರಿಯಿಂದ ಆಗಿರುವ ಪ್ರಜನನ. ಅದಲ್ಲದೆ ಈಗ ಭಾರತೀಯರ ಸರಾಸರಿ ಜೀವಿತಾವಧಿಯೂ ಕೂಡ ಹೆಚ್ಚಾಗಿದೆ. 1947ರಲ್ಲಿ ಸರಾಸರಿ 28 ವರ್ಷಗಳಷ್ಟಿದ್ದ ಸರಾಸರಿ ಜೀವಿತಾವಧಿ ಈಗ 65ವರ್ಷಗಳಾಗಿವೆ. ಇದು ಸಂತೋಷಕರವೇ ಆದರೂ, ಸಾವನ್ನು ಮುಂದೂಡಿದ ನಾವು ಜನನವನ್ನು ಮುಂದೂಡಲಿಲ್ಲ. ಅದೇ ನಾವು ಮಾಡಿದ ತಪ್ಪು. ಇದನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಬುದ್ಧಿಶಕ್ತಿಯ ಅವಶ್ಯಕತೆಯೇನೂ ಇಲ್ಲ. ಇದೇನೂ ಗಾಢಗಹನ ತತ್ವಶಾಸ್ತ್ರವಲ್ಲ. ಸರಳವಾದ ಅಂಕಗಣಿತ ಅಷ್ಟೇ.

ನಾನೂ ನೋಡಿದ್ದೇನೆ, ಎಲ್ಲ ನಗರಗಳಲ್ಲೂ ಮಕ್ಕಳಾಗುವಂತೆ ಮಾಡುವ ಆಸ್ಪತ್ರೆಗಳು ಹೆಚ್ಚುತ್ತಿವೆ. ಈಗ ಆಗುತ್ತಿರುವ ಮಕ್ಕಳು ಸಾಕಾಗುತ್ತಿಲ್ಲವೇ? ಒಟ್ಟಿನಲ್ಲಿ ಹೇಳುವುದಾದರೆ ನದಿಗಳ ಗತಿ ಅಧೋಗತಿಯಾಗಿದೆ. ಅದೂ ಕಳೆದ 7-8 ವರ್ಷಗಳಲ್ಲಿ ಬೇಗ ಬೇಗನೆ ನದಿಗಳು ಬತ್ತಿಹೋಗುತ್ತಿವೆ. ಈ ಎಚ್ಚರಿಕೆಯೂ ಸುಳ್ಳೂ ಅಲ್ಲ. ಈ ಮಾತಿನಲ್ಲಿ ಕಪಟವೂ ಇಲ್ಲ. ಸ್ಪಷ್ಟವಾಗಿಯೇ ತಗ್ನರು ಹೇಳುವುದೆಂದರೆ 1947ರಲ್ಲಿ ಪ್ರತಿಯೊಬ್ಬರಿಗೂ ಎಷ್ಟು ನೀರು ಸಿಗುತ್ತಿತ್ತೋ ಅದರಲ್ಲಿ ಬರೀ ಶೇಕಡಾ 21-22ರಷ್ಟು ಮಾತ್ರವೇ ನೀರು ಈಗ ಸಿಗುತ್ತಿದೆ. ಹೀಗೆ ಮುಂದುವರೆದರೆ 2025ನೇ ಇಸವಿಯ ಹೊತ್ತಿಗೆ ಬರೀ ಶೇಕಡಾ 7ರಷ್ಟು ಮಾತ್ರ ಸಿಕ್ಕಲಿದೆ. ಇನ್ನೂ ಮುಂದುವರೆದು ಹೋದರೆ 2030ನೇ ಇಸವಿಗೆ ಒಬ್ಬೊಬ್ಬರಿಗೆ ಬದುಕಲು ಎಷ್ಟು ನೀರು ಬೇಕಾಗುವುದೋ ಅದರ ಅರ್ಧದಷ್ಟು ಮಾತ್ರವೇ ನೀರು ದೊರೆಯುವುದು. ಸ್ವಲ್ಪ ಯೋಚಿಸಿ ನೋಡಿ, 125 ಕೋಟಿ ಜನರಿಗೆ ಬದುಕಲು ಬೇಕಾಗುವಷ್ಟು ನೀರು ಸಿಕ್ಕದೆ ಹೋದರೆ ಏನಾದೀತು ಅಂತ ಚನ್ನಾಗಿ ಯೋಚಿಸಿ.

ಮುಂದುವರೆಯುವುದು…

-ಮಲ್ಲಿಕಾರ್ಜುನ ಮುದನೂರ್

Related Articles

Leave a Reply

Your email address will not be published. Required fields are marked *

Back to top button