ಪ್ರಮುಖ ಸುದ್ದಿ

ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ಹೊಸ ಆಶಾಭಾವನೆ

371(ಜೆ) ಅಡಿಯಲ್ಲಿ ಸವಲತ್ತು ಕೊಡಿಸುವ ಪ್ರಯತ್ನ: ಅಂಬಲಗಿ

ಯಾದಗಿರಿ,ಶಹಾಪುರ: ಕಲ್ಯಾಣ ಕರ್ನಾಟಕ ಭಾಗದಲ್ಲಿನ ಪ್ರತಿಯೊಂದು ಅನುದಾನ ರಹಿತ ಶಾಲಾ-ಕಾಲೇಜುಗಳಿಗೆ ಸರ್ಕಾರದಲ್ಲಿರುವ ಪ್ರತಿಯೊಂದು ಸವಲತ್ತು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕ.ಕ.ಭಾಗದ ಖಾಸಗಿ ಶಾಲಾ ಕಾಲೇಜುಗಳ ಒಕ್ಕೂಟ ಅಧ್ಯಕ್ಷ ಎಂ.ಬಿ.ಅಂಬಲಗಿ ತಿಳಿಸಿದರು.

ನಗರದ ಹಳೆಪೇಟೆಯಲ್ಲಿನ ಜ್ಞಾನ ಗಂಗೋತ್ರಿ.ಹಿ.ಪ್ರಾ ಶಾಲೆಯಲ್ಲಿ ತಾಲೂಕಾ ಖಾಸಗಿ ಶಾಲಾ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 371(ಜೆ) ಕಲ್ಯಾಣ ಕರ್ನಾಟಕ ಭಾಗಕ್ಕೆ ವರದಾನವಾಗಿದ್ದು, ಅದರ ಅಡಿಯಲ್ಲಿ ಸಿಗಬೇಕಾದ ಸೌಲಭ್ಯಗಳಿಗಾಗಿ ಎಲ್ಲಾ ರೀತಿಯ ಶ್ರಮ ಹಾಕಿ ಈ ಭಾಗದ ಶಾಲಾ-ಕಾಲೇಜುಗಳಿಗೆ ನ್ಯಾಯ ದೊರಕಿಸುವ ಕಾರ್ಯಕ್ಕೆ ಎಲ್ಲರ ಬೆಂಬಲ ಅಗತ್ಯವಾಗಿದೆ ಎಂದರು.

ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣ ಸಚಿವರು ಈ ಭಾಗದ ಶೈಕ್ಷಣಿಕ ವ್ಯವಸ್ಥೆಗೆ ಸ್ಪಂಧಿಸುವ ಮನೋಭಾವನೆ ಉಳ್ಳವರಾಗಿದ್ದು, ಶಾಲೆಗಳಿಗೆ ಬಿಸಿಯೂಟ ಯೋಜನೆ ತಲುಪಿಸುವ ಉದ್ದೇಶ ಹೊಂದಿದ್ದು, ಶಿಕ್ಷಕರ ವೇತನ ಅವಕಾಶ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವ ಕಾರ್ಯ ನಡೆಯಬೇಕಿದೆ. ಪ್ರತಿಯೊಂದು ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಯುವ ಅನಿವಾರ್ಯತೆ ಎದುರಾದಲ್ಲಿ ಎಲ್ಲರ ಬೆಂಬಲಿಸಿ ಹೋರಾಟಕ್ಕೆ ಇಳಿಯಬೇಕು ಎಂದು ಮನವಿ ಮಾಡಿದರು.

ತಾಲೂಕಾ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಆರ್.ಚನ್ನಬಸ್ಸು ವಕೀಲರು ಮಾತನಾಡಿ, ಖಾಸಗಿ ಅನುದಾನ ರಹಿತ ಶಾಲೆಗಳು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರದಿಂದ ದೊರಕುವ ಸೌಲಭ್ಯಗಳಿಗಾಗಿ ನಡೆಯುವ ಹೋರಾಟಕ್ಕೆ ಸದಾ ನಮ್ಮ ಬೆಂಬಲ ಇರಲಿದೆ ಅಲ್ಲದೆ ಪ್ರತಿಯೊಬ್ಬರು ಹೋರಾಟದಲ್ಲಿ ಭಾಗಿಯಾಗಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಖಾಸಗಿ ಶಾಲೆಗಳ ಅಶೋಕ ಘನಾತೆ, ರಾಮು ಸಗರ, ಅನಂತರಾವ ದೇಶಪಾಂಡೆ, ಸುಧಾಕರ ಕುಲ್ಕರ್ಣಿ, ಇದ್ದರು, ಸಮಾಲೋಚನ ಸಭೆಯಲ್ಲಿ ಶರಣಪ್ಪ, ಶರಣಗೌಡ, ಹಣಮಂತ್ರಾಯದೊರಿ, ಭೀಮನಗೌಡ, ತಿಪ್ಪಣ್ಣ ಕ್ಯಾತನಾಳ, ಹೊನ್ನಪ್ಪ ಗಂಗನಾಳ, ಹಿರಿಯರಾದ ಮೃತ್ಯುಂಜಯ ಚಿಕ್ಕಮಠ, ಡಾ. ಫರೀದುದ್ದೀನ, ಪರೇಮಶ್ವರ ಮೂರ್ತಿ ಮುದುಗಲ್, ಪ್ರವೀಣ ಫೀರಂಗಿ, ಮಲ್ಲಿಕಾರ್ಜುನ ಪಾಟೀಲ, ವಾಯ್.ಎಂ.ಪಾಟೀಲ, ಗುರುರಾಜ, ಬಸವರಾಜ, ಗುರುಬಸಯ್ಯ, ಸುರೇಶ ಇತರರು ಇದ್ದರು, ವೀರೇಶ ಉಳ್ಳಿ ಕಾರ್ಯಕ್ರಮ ನಿರ್ವಹಿಸಿದರು, ಹಲವಾರು ಶಾಲೆಗಳಿಂದ ಖಾಸಗಿ ಶಾಲೆಯ ಆಡಳಿತ ಮಂಡಳಿಯವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button