ಸಿಎಂ ಮಾತಿಗೆ ಮಣಿಲಿಲ್ವಂತೆ ಹಿರಿಯ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ!
ಬೆಳಗಾವಿ: ಕಾಂಗ್ರೆಸ್ ಪಕ್ಷ ಹಿರಿಯ ಶಾಸಕರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ. ಪಕ್ಷದಲ್ಲಿ ಸ್ವಾರ್ಥತನ ಹೆಚ್ಚಿದೆ ಎಂದು ಈಗಾಗಲೇ ಸ್ವ ಪಕ್ಷದ ವಿರುದ್ಧ ಯಾದಗಿರಿ ಮತಕ್ಷೇತ್ರದ ಹಿರಿಯ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಕಿಡಿಕಾರಿದ್ದಾರೆ. ಮುಂದೊಂದು ದಿನ ಪಕ್ಷ ತ್ಯಜಿಸುತ್ತೇನೆ ಎನ್ನುವ ಮೂಲಕ ಪಕ್ಷ ತ್ಯಜಿಸುವ ಮುನ್ಸೂಚನೆ ನೀಡಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಿರಿಯ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಅವರ ಮನವೊಲಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಸುವರ್ಣಸೌಧದ ಕೊಠಡಿಯೊಂದರಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಯಾದಗಿರಿ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ. ನಿಮಗೆ ಅಸಮಾಧಾನ ಇರುವ ಬಗ್ಗೆ ನನಗೆ ಗೊತ್ತಿದೆ. ನೀವಿನ್ನೂ ಎರಡು ಬಾರಿ ಶಾಸಕರಾಗಬಲ್ಲಿರಿ. ಅಷ್ಟೊಂದು ಶಕ್ತಿ ಮತ್ತು ಜನರ ವಿಶ್ವಾಸ ನಿಮ್ಮ ಬಳಿಯಿದೆ ಎಂದಿದ್ದಾರೆ. ಅಲ್ಲದೆ ನಿಮ್ಮಂತ ಹಿರಿಯರು ಕಾಂಗ್ರೆಸ್ ಪಕ್ಷದ ಆಸ್ತಿ. ನೀವು ಪಕ್ಷ ಬಿಡಬಾರದು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಆದರೆ, ಮುಖ್ಯಮಂತ್ರಿಗಳ ಮಾತಿಗೆ ಮಣಿಯದ ಹಿರಿಯ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಹಿರಿತನಕ್ಕೆ ಬೆಲೆ ನೀಡದ ಕಾಂಗ್ರೆಸ್ ಪಕ್ಷ ತ್ಯಜಿಸಿಯೇ ಸಿದ್ಧ ಎಂದು ಕಡ್ಡಿ ತುಂಡು ಮಾಡಿದಂತೆ ಸಿಎಂಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ಸಿನ ಉನ್ನತ ಮೂಲಗಳಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಶಾಸಕ ಮಾಲಕರೆಡ್ಡಿ ಅವರ ಮದ್ಯೆ ನಡೆದ ಮಾತುಕತೆಯ ವಿವರ ಮಾಧ್ಯಮಗಳಿಗೆ ತಿಳಿದು ಬಂದಿದೆ. ಆದರೆ, ನಿಜವಾಗಿಯೂ ಸಿಎಂ ಮತ್ತು ಮಾಲಕರೆಡ್ಡಿ ಮಧ್ಯೆ ನಡೆದ ಮಾತುಕತೆ ಏನು ಎಂಬುದನ್ನು ಹಿರಿಯ ಶಾಸಕ ಡಾ.ಮಾಲಕರೆಡ್ಡಿ ಅವರೇ ಬಿಚ್ಚಿಡಬೇಕಿದೆ.