ಮೊಬೈಲ್ ಬ್ಯಾಟರಿ ಮೂಲಕ ಬಲ್ಬ್ ಉರಿಸಲು ಹೋಗಿ ಕಣ್ಣು ಕಳೆದುಕೊಂಡನಾ ಬಾಲಕ.?
ಕಲಬುರ್ಗಿ: ಮೊಬೈಲ್ ಬ್ಯಾಟರಿ ಸ್ಪೋಟ ಸಹೋದರರಿಗೆ ಗಂಭೀರ ಗಾಯ
ಕಲಬುರ್ಗಿಃ ಮೊಬೈಲ್ ದುರಸ್ತಿಗೊಳಿಸುವಾಗ ಬ್ಯಾಟರಿ ಸ್ಪೋಟಗೊಂಡ ಪರಿಣಾಮ ಸಹೋದರರಿಬ್ಬರು ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೊನಗುಂಟ ಗ್ರಾಮದಲ್ಲಿ ನಡೆದಿದೆ. ಕಾರ್ಬನ್ ಕೆ6 ಮೊಬೈಲ್ನ ಬ್ಯಾಟರಿಗೆ ಚಿಕ್ಕ ಬಲ್ಬ್ ಕನೆಕ್ಷನ್ ಕೊಡುವಾಗ ಬ್ಯಾಟರಿ ಸ್ಪೋಟ ಗೊಂಡಿದ್ದು ಮಲ್ಲು (15) ಮತ್ತು ನಾಗರಾಜ (12) ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಲ್ಲು ಎಂಬ ಹುಡುಗ ಮೊಬೈಲ್ನಿಂದ ಬ್ಯಾಟರಿ ಹೊರತೆಗೆದು ಚಿಕ್ಕ ಬಲ್ಬ್ ಕನೆಕ್ಷನ್ ಕೊಡುವಾಗ ಬ್ಲಾಸ್ಟ್ ಆಗಿದೆ. ಈ ಸಂದರ್ಭದಲ್ಲಿ ಸಹೋದರ ನಾಗರಾಜು ಮಲ್ಲು ಜೊತೆಗೆ ಕುಳಿತಿದ್ದ ಪರಿಣಾಮ ನಾಗರಾಜನ ಎಡ ಭಾಗದ ಕಣ್ಣಿಗೆ ಬ್ಯಾಟರಿ ಸಿಡಿದು ಗಾಯವಾಗಿದೆ.
ಪರಿಣಾಮ ನಾಗರಾಜ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಗಾಯಾಳು ನಾಗರಾಜನನ್ನು ಕಲಬುರ್ಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಲ್ಲು ಎಂಬಾತನಿಗೆ ಶಹಬಾದ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಳ ಕಿರಿಕಿರಿಗೆ ಬೇಸತ್ತು ಯಾವುದೋ ಒಂದು ಮೊಬೈಲ್ ಕೊಡಿಸಿ ಸುಮ್ಮನೆ ಕುಳಿತುಕೊಳ್ಳವ ಪಾಲಕರು ಈ ಸುದ್ದಿ ತಿಳಿದು ಎಚ್ಚರಗೊಳ್ಳುವ ಅಗತ್ಯವಿದೆ.
ಮಕ್ಕಳು ಮೊಬೈಲ್ ನ್ನು ಯಾವ ರೀತಿ ಸದುಪಯೋಗ ಪಡೆಯುತ್ತಿದ್ದಾರೆ. ಅದರಿಂದ ಏನೇನ್ ಮಹಾ ಕೆಲಸ ಮಾಡುತ್ತಿದ್ದಾರೆ, ಓದುತ್ತಿದ್ದಾರೆ ಇಲ್ಲ ಯಾವಾಗಲೂ ಮೊಬೈಲ್ ನಲ್ಲಿಯೇ ಮುಳುಗಿರುತ್ತಾರಾ ಎಲ್ಲವನ್ನು ಗಮನಿಸಬೇಕಾದ ಜವಬ್ದಾರಿ ಪಾಲಕರ ಮೇಲಿದೆ. ಅಲ್ಲದೆ ಮೊಬೈಲ್ ಕೊಡಿಸುವಾಗ ಉತ್ತಮ ಗುಣಮಟ್ಟದ ಕಂಪನಿ ಯಾವುದು ಎಂಬುದನ್ನು ಅರಿಯುವ ಅಗತ್ಯವಿದೆ. ಮೊಬೈಲ್ ಮಕ್ಕಳ ಕೈಗೆ ನೀಡುವದರಿಂದ ಒಳಿತಿಗಿಂತ ಕೆಡಕುಗಳೇ ಜಾಸ್ತಿಯಾಗುತ್ತಿದೆ ಎಂಬ ಮಾತು ಸಾಮಾನ್ಯವಾಗಿ ಬಿಟ್ಟಿದೆ. ಹಾಗಂತ ಮಕ್ಕಳಿಗೆ ಮೊಬೈಲ್ ಕೊಡಿಸಬೇಡಿ ಅಂತ ಅಲ್ಲ . ಮೊಬೈಲ್ ಬಳಸುವ ಮಕ್ಕಳ ನಡೆ ನುಡಿ ಗಮನಿಸುವ ಹೊಣೆ ಪೋಷಕರದ್ದಾಗಿರಲಿ ಎಂಬುದು “ವಿನಯವಾಣಿ” ಆಶಯ.