MP ಪ್ರತಾಪ ಸಿಂಹ vs SP ರವಿ ಚನ್ನಣ್ಣನವರ್
ಮೈಸೂರು: ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹುಣಸೂರು ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹೀಗಾಗಿ, ಹನುಮ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ಮೆರವಣಿಗೆಗೆ ಎಸ್ಪಿ ರವಿ ಚನ್ನಣ್ಣನವರ್ ನೇತೃತ್ವದಲ್ಲಿ ಪೊಲೀಸರು ಬ್ರೇಕ್ ಹಾಕಿದ್ದಾರೆ. ಅಲ್ಲದೆ ಮುಂಜಾಗೃತ ಕ್ರಮವಾಗಿ ಸಂಸದ ಪ್ರತಾಪಸಿಂಹ ಸೇರಿದಂತೆ 50ಜನ ಹನುಮ ಭಕ್ತರನ್ನು ವಶಕ್ಕೆ ಪಡೆದಿದ್ದಾರೆ.
ಹನುಮ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ಮೆರವಣಿಗೆಗೆ ಬ್ರೇಕ್ ಹಾಕಿದ್ದಕ್ಕೆ ಸಂಸದ ಪ್ರತಾಪ ಸಿಂಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರು ಎಸ್ಪಿ ರವಿ ಚನ್ನಣ್ಣನವರ್ ಹಿಂದೂಗಳಿಗೊಂದು ನ್ಯಾಯ, ಮುಸ್ಲಿಂರಿಗೊಂದು ನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಿಮ್ಮ ಬುದ್ಧಿವಂತಿಕೆಯನ್ನು ಅಪರಾಧಿಗಳನ್ನು ಬಂಧಿಸಲು ಉಪಯೋಗಿಸಿ. ಹನುಮ ಭಕ್ತರ ಮೇಲೆಕೆ ಉಪಯೋಗಿಸಿ ವ್ಯರ್ಥ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ನಮ್ಮನ್ನು ಅದೆಷ್ಟು ದಿನ ಬಂಧಿಸುತ್ತೀರಿ ಬಂಧಿಸಿ. ಆದರೆ, ಹನುಮ ಭಕ್ತರು ಪ್ರತಿಷ್ಠಾಪಿಸಿರುವ ಆಂಜನೇಯ ಮೂರ್ತಿ ಟಚ್ ಮಾಡಿದರೆ ಪರಿಸ್ಥಿತಿ ಚನ್ನಾಗಿರಲ್ಲ ಎಂದು ಸಂಸದ ಪ್ರತಾಪ ಸಿಂಹ ಆವಾಜ್ ಹಾಕಿದ್ದಾರೆ. ಬಳಿಕ ಹನುಮ ಭಕ್ತರು ಸಂಸದ ಪ್ರತಾಪ ಸಿಂಹ ಬಿಡುಗಡೆಗೆ ಆಗ್ರಹಿಸಿ ಧರಣಿ ಕುಳಿತಿದ್ದಾರೆ. ಆದರೆ, ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದ ಎಸ್ಪಿ ರವಿ ಚನ್ನಣ್ಣನವರ್ ಮಾತ್ರ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅನೇಕರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಹನುಮ ಭಕ್ತರ ಧರಣಿ ವೇಳೆ ಕೆಲ ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ.