ವಿನಯ ವಿಶೇಷ

ಕೋಟೆನಾಡಿನಲ್ಲಿ ಡಾ.ಮುರುಘಾಶ್ರೀ ನೇತೃತ್ವದಲ್ಲಿ ವಿಭಿನ್ನ ಮೌಢ್ಯ ವಿರೋಧಿ ಆಚರಣೆ!

ಚಿತ್ರದುರ್ಗ : ಬ್ರಿಟಿಷರು ಬಂದರು, ಹೋದರು. ಆದರೆ, ಭಾರತದಲ್ಲಿ ಪಂಚಾಂಗದ ದಾಸ್ಯದಿಂದ ಮಾತ್ರ ಮುಕ್ತಿ ಸಿಕ್ಕಿಲ್ಲ. ಪಂಚಾಂಗದ ಹೆಸರಿನಲ್ಲಿ ಜೋತಿಷಿಗಳು ಭಯ, ಭೀತಿ ಬಿತ್ತುತ್ತಿದ್ದಾರೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಚಂದ್ರಗ್ರಹಣದಿಂದಾಗಿ ಅಪಾಯ ಸಂಭವಿಸುತ್ತದೆ ಎಂದು ಕೆಲವರು ವಾಹಿನಿಗಳಲ್ಲಿ ಕುಳಿತು ಆತಂಕ ಹುಟ್ಟಿಸುತ್ತಿದ್ದಾರೆ. ಅಂತವರ ಮಾತುಗಳಿಂದ ಧೃತಿಗೆಡುವ ಅಗತ್ಯವಿಲ್ಲ. ಗ್ರಹಣ ಎಂಬುದು ಗ್ರಹಗಳ ಸಹಜ ಕ್ರಿಯೆ ಎಂಬುದನ್ನು ಅರಿಯಬೇಕು. ಪ್ರಕೃತಿಯ ಅದ್ಭುತವನ್ನು ಕಣ್ತುಂಬಿಕೊಂಡು ಖುಷಿ ಪಡಬೇಕು ಎಂದರು.

ನಗರದ ಮುರುಘಾಮಠದ ಅಲ್ಲಮಪ್ರಭು ಸಭಾಂಗಣದಲ್ಲಿ ಆಯೋಜಿಸಿದ್ದ ಚಂದ್ರಗ್ರಹಣ ಪ್ರಯುಕ್ತ ಮೌಢ್ಯ ವಿರೋಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮೌಢ್ಯದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿಯೇ ಇಂದು ಸಾಂಕೇತಿಕ ಲಿಂಗಧೀಕ್ಷೆ, ವಿವಾಹ ಹಾಗೂ ಪ್ರಸಾದ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು. ಇದೇ ವೇಳೆ ಐವರಿಗೆ ಸಾಂಕೇತಿಕವಾಗಿ ಲಿಂಗಧೀಕ್ಷೆ ನೀಡಲಾಯಿತು. ಬಳಿಕ ರಂಗಪ್ಪ ನಾಯಕ ಹಾಗೂ ವಸಂತಕುಮಾರಿ ಖುಷಿಯಿಂದಲೇ ಹಾರ ಬದಲಾಯಿಸಿ ನವದಾಂಪತ್ಯಕ್ಕೆ ಪಾದಾರ್ಪಣೆ ಮಾಡಿದರು.

ಡಾ.ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲ ಮಠಾಧೀಶರು, ಪ್ರಗತಿಪರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹುಗ್ಗಿ ಪಾಯಸ, ಅನ್ನ , ಸಾರು ಸವಿಯುವ ಮೂಲಕ ಸಂಭ್ರಮದಿಂದಲೇ ಚಂದ್ರಗ್ರಹಣ ವೀಕ್ಷಿಸಿದರು. ಆ ಮೂಲಕ ಚಂದ್ರಗ್ರಹಣ ಎಂಬುದು ಅಶುಭವಲ್ಲ. ಗ್ರಹಗಳ ಸಹಜ ಕ್ರಿಯೆ ಅಷ್ಟೇ ಆಗಿದೆ. ಎಲ್ಲಾ ಕಾಲವೂ ಶುಭವಾದುದೇ ಆಗಿದೆ ಎಂಬ ಸಂದೇಶವನ್ನು ಸಾರಲಾಯಿತು.

Related Articles

Leave a Reply

Your email address will not be published. Required fields are marked *

Back to top button