ಆ. 27 ರಂದು ಶಹಾಪುರ ನಗರಕ್ಕೆ ಬಿಜೆಪಿ ಅಧ್ಯಕ್ಷ ಕಟೀಲು ಆಗಮನ
ಆ. 27 ರಂದು ಬಿಜೆಪಿ ಜಿಲ್ಲಾ ಮಟ್ಟದ ಸಭೆ
yadgiri, ಶಹಾಪುರಃ ನಗರಕ್ಕೆ ಆ.27 ರಂದು ಬಿಜೆಪಿಯ ರಾಜ್ಯಧ್ಯಕ್ಷ ನಳೀನಕುಮಾರ ಕಟೀಲು ಅವರು ಆಗಮಿಸಿಲಿದ್ದು, ಜಿಲ್ಲಾ ಮಟ್ಟದ ಸಭೆಯನ್ನು ಇಲ್ಲಿನ ಮೋಟಗಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಶರಣಭೂಪಾಲರಡ್ಡಿ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಆ.27 ರಂದು ನಡೆಯುವ ಸಭೆ ಸಂಘಟನಾತ್ಮಕತೆ ಕುರಿತು ನಡೆಯಲಿದೆ. ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಪದಾಧಿಕಾರಿಗಳು ಎಲ್ಲಾ ಮೋರ್ಚಾ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಇದು ಕೇವಲ ಬಿಜೆಪಿ ಪದಾಧಿಕಾರಿಗಳ ಸಂಘಟನೆ ಕುರಿತು ಸಭೆಯಾಗಿದ್ದು, ಯಾವ ರೀತಿ ಸಂಘಟನೆ ನಡೆಸಬೇಕು ಮತ್ತು ಮುಖ್ಯವಾಗಿ ಯಾದಗಿರಿ ಜಿಲ್ಲೆಯಲ್ಲಿ ಇರುವ ಸಮಸ್ಯೆಗಳೇನು ಆ ಕುರಿತು ಪರಿಹಾರಕ್ಕೆ ಕೈಗೊಳ್ಳುವ ಸಲಹೆ ಸೂಚನೆಗಳನ್ನು ಪಡೆಯಲಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಕುರಿತು ಚರ್ಚೆಯೂ ನಡೆಯಲಿದೆ ಎಂದರು.
ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಮಾತನಾಡಿ, ಇದು ಬಿಜೆಪಿ ಸಂಘಟನೆ ಕುರಿತು ನಡೆಯುವ ಸಭೆಯಾಗಿದ್ದು, ಇದು ಆಹ್ವಾನಿತ ಪಕ್ಷದ ಜವಬ್ದಾರಿ ಹೊಂದಿದವರು ಮಾತ್ರ ಭಾಗವಹಿಸಲಿದ್ದಾರೆ. ಇಲ್ಲಿ ಕೊರೊನಾ ಕುರಿತ ಸಮಸ್ಯೆ ಬಗ್ಗೆಯೂ ಚರ್ಚೆ ನಡೆಯಲಿದೆ. ಕೊರೊನಾ ತಡೆಗೆ ಪಕ್ಷ ಏನು ಕೆಲಸ ಮಾಡಿದೆ. ಮುಂದೆ ಮಾಡಬೇಕಾಗಿರುವದೇನು ಕಾರ್ಯಕರ್ತರು ಯಾವ ರೀತಿ ಕೊರೊನಾ ಕುರಿತು ಕೆಲಸ ಮಾಡಬೇಕಿದೆ ಎಂಬುದನ್ನು ಸಹ ಚರ್ಚೆ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರನಾಥ ನಾದ, ಗುರು ಕಾಮಾ, ನಗರ ಅಧ್ಯಕ್ಷ ದೇವು ಕೋನೇರ ಇತರರು ಉಪಸ್ಥಿತರಿದ್ದರು.