ಪ್ರಮುಖ ಸುದ್ದಿ

ಸಚಿವ ಜಾರ್ಜ್ ರಾಜೀನಾಮೆ ಇಲ್ಲ : ಸಿಎಂ ನೀಡಿದ ಸಮರ್ಥನೆಗಳೇನು?

ಬೆಂಗಳೂರು: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಕೋರ್ಟ್ ಸೂಚನೆಯಂತೆ ಸಿಬಿಐ FIR ದಾಖಲಿಸಿದೆ. ಹೀಗಾಗಿ, A1 ಆರೋಪಿ ಆಗಿರುವ ಜಾರ್ಜ್ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿದೆ. ರಾಜೀನಾಮೆ ನೀಡದಿದ್ದಲ್ಲಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದೆ. ಮಾಜಿ ಸಿಎಂ, ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಪತ್ರಿಕಾಗೋಷ್ಠಿ ಮೂಲಕ ಸಚಿವ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಸಿಐಡಿ ತನಿಖೆಯಲ್ಲಿ ರಾಜ್ಯ ಸರ್ಕಾರ ತನ್ನ ಪ್ರಭಾವ ಬಳಸಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದೆ. ಪರಿಣಾಮ ಸಚಿವ ಜಾರ್ಜ್ ಗೆ ಕ್ಲೀನ್ ಚಿಟ್ ನೀಡಲಾಗಿತ್ತು. ಆದರೆ, ಇದೀಗ ಕೋರ್ಟ್ ಸೂಚನೆಯಂತೆ ಸಿಬಿಐ ಸಚಿವ ಜಾರ್ಜ್ ವಿರುುದ್ಧ FIR ದಾಖಲಿಸಿದ್ದು ತನಿಖೆ ನಡೆಯಲಿದೆ. ಹೀಗಾಗಿ, ಸಚಿವರಾಗಿದ್ದುಕೊಂಡು ಮತ್ತೆ ಪ್ರಭಾವ ಬಳಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಜಾರ್ಜ್ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿದ್ದಾರೆ.

ಆದರೆ, ಬಿಜೆಪಿ ಒತ್ತಡಕ್ಕೆ ಮಣಿಯದ ಸಿಎಂ ಸಿದ್ಧರಾಮಯ್ಯ, ಸಚಿವ ಕೆ‌.ಜೆ‌.ಜಾರ್ಜ್ ರಾಜೀನಾಮೆ ಪ್ರಶ್ನೆಯೇ ಇಲ್ಲ ಅಂದಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ಧರಾಮಯ್ಯ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಾಗಲೂ ನಾನು ರಾಜೀನಾಮೆ ಅಗತ್ಯವಿಲ್ಲ ಎಂದು ಹೇಳಿದ್ದೆ. ಆದರೆ, ಸ್ವಯಂಪ್ರೇರಣೆಯಿಂದ ಸಚಿವ ಸ್ಥಾನಕ್ಕೆ ಜಾರ್ಜ್ ರಾಜೀನಾಮೆ ನೀಡಿದ್ದರು. ಬಳಿಕ ಆರೋಪ ಸಾಬೀತಾಗದ ಕಾರಣ ಮತ್ತೆ ನನ್ನ ಸಂಪುಟ ಸೇರಿದ್ದಾರೆ. ಇದೀಗ ಸಿಬಿಐ ತನಿಖೆ ನಡೆಯಲಿದೆ. ಆದರೆ, ಸಿಬಿಐ ಕೇಂದ್ರದ ಅಧೀನದಲ್ಲಿದೆ. ಹೀಗಾಗಿ, ಸಚಿವ ಜಾರ್ಜ್ ಪ್ರಭಾವ ಬೀರುವ ಪ್ರಶ್ನೆ ಬರೋದಿಲ್ಲ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ದ ಕಿಡಿ ಕಾರಿರುವ ಸಿಎಂ ಸಿದ್ಧರಾಮಯ್ಯ ಅವರು ಕೇಂದ್ರ ಸಚಿವ ಸಂಪುಟದಲ್ಲಿರುವ 20 ಸಚಿವರ ವಿರುದ್ಧ ವಿವಿಧ ಪ್ರಕರಣಗಳ ತನಿಖೆ ನಡೆಯುತ್ತಿದೆ. ರಾಜ್ಯದಲ್ಲಿರುವ ಕೇಂದ್ರ ಸಚಿವರಾದ ರಮೇಶ ಜಿಗಜಿಣಗಿ, ಅನಂತ ಕುಮಾರ್ ಹೆಗಡೆ, ಸಂಸದರಾದ ಶ್ರೀರಾಮುಲು, ನಳಿನಕುಮಾರ್ ಕಟೀಲ್ ಸೇರಿದಂತೆ ಅನೇಕರ ಮೇಲೆ ವಿವಿಧ ಪ್ರಕರಣಗಳಿವೆ. ಖುದ್ದು ಬಿ‌.ಎಸ್.ಯಡಿಯೂರಪ್ಪ ವಿರುದ್ಧವೇ ಕೇಸುಗಳಿವೆ. ಇವರೆಲ್ಲಾ ರಾಜೀನಾಮೆ ಕೊಡುತ್ತಾರೆಯೇ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಆ ಮೂಲಕ ಸಚಿವ ಜಾರ್ಜ್ ಪರ ಸಿಎಂ ಬ್ಯಾಟ್ ಮಾಡಿದ್ದು ಬಿಜೆಪಿ ಒತ್ತಡಕ್ಕೆ‌ ಮಣಿಯದಿರಲು ನಿರ್ಧರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button