ಅಲೆಮಾರಿಗಳಿಗೆ ನಿವೇಶನ ನೀಡಲು ಆಗ್ರಹ
ಯಾದಗಿರಿ, ಶಹಾಪುರಃ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ನಿರಾಶ್ರಿತರಿಗೆ ಕೂಡಲೇ ನಿವೇಶನ ವಿತರಿಸಬೇಕೆಂದು ಆಗ್ರಹಿಸಿ ಅಲೆಮಾರಿ ಸಮಾಜ ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಹೊನ್ನಪ್ಪ ಮಾನ್ಪಡೆ, ಅಲೆಮಾರಿ ಸಮುದಾಯದವರು ನಗರದಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿದ್ದು, ಇದುವರೆಗೂ ಸೂಕ್ತ ನೆಲೆ ಕಾಣದ ಸ್ಥಿತಿಯಲ್ಲಿ ಖಾಸಗಿ ಮತ್ತು ಸರ್ಕಾರಿ ಪ್ರದೇಶಗಳಲ್ಲಿ ಗುಡಿಸಲುಗಳು ಹಾಕಿಕೊಂಡು ವಾಸಿಸುತ್ತಿದ್ದಾರೆ.
ಅಂತವರನ್ನು ನಗರಸಭೆ ಗುರುತಿಸಿ ಕೂಡಲೇ ನಿವೇಶನ ಒದಗಿಸುವ ಕಾರ್ಯ ಮಾಡಬೇಕು. ಅಲೆಮಾರಿಗಳಾದ ಘಿಸಾಡಿ (ಬೈಲು ಕಮ್ಮಾರ), ಬೈಲ್ ಪತ್ತಾರ, ಪರಿಶಿಷ್ಟ ಜಾತಿಯ ಸಿಂದೊಳ್ಳು (ಮರಗಮ್ಮ ಆಡಿಸುವವರು), ಕೊರಮ, ಶಿಳ್ಳೆಕ್ಯಾತ, ಬುಡ್ಡ ಜಂಗಮ, ಚೆನ್ನದಾಸರ್ ಸೇರಿದಂತೆ ಇತರೆ ಸಮುದಾಯಗಳು ಇಂದಿಗೂ ವಾಸಿಸಲು ಮನೆಯಿಲ್ಲದೆ, ಯಾರದೋ ಜಾಗದಲ್ಲಿ ಟೆಂಟ್, ಗುಡಿಸಲು ನಿರ್ಮಿಸಿಕೊಂಡು ಜೀವಿಸುತ್ತಿದ್ದಾರೆ.
ಅಲೆಮಾರಿಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಿದೆ. ಆ ನಿಟ್ಟಿನಲ್ಲಿ
ನಗರದಲ್ಲಿ ವಾಸಿಸುವ ಎಲ್ಲಾ ಅಲೆಮಾರಿ ಸಮುದಾಯಗಳಿಗೆ ನೆಲೆ ಕಲ್ಪಿಸಬೇಕು. ನಗರಸಭೆ ವತಿಯಿಂದ ನಿವೇಶನ ಮತ್ತು ವಸತಿ ಒದಗಿಸುವ ಮೂಲಕ ಅರ್ಹ ಅಲೆಮಾರಿ ಸಮುದಾಯದವರಿಗೆ ಸೌಲಭ್ಯ ಕಲ್ಪಿಸುವ ಮೂಲಕ ಸರ್ಕಾರದ ನಿರ್ಧಾರದಂತೆ ಗುಡಿಸಲು ಮುಕ್ತ ನಗರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭಾಗೇಶ ರಸ್ತಾಪುರ, ಹಣಮಂತ ಶಿರವಾಳ, ಶಾಂತಪ್ಪ , ಭೀಮರಾಯ ಸಗರ, ಮುರುಳಿ, ಯಲ್ಲಪ್ಪ ಸಿಂದೊಳ್ಳಿ, ಸಂತೋಷ ಭಜಂತ್ರಿ, ಬಸವರಾಜ ಎಸ್. ಭಜಂತ್ರಿ, ಮಹಾದೇವ ಕೇಶವ, ಲಕ್ಷ್ಮಣ, ಮಂಗಲ ಸೋಲಂಕಿ, ಶಿವದಾಸ್ ರಮೇಶ, ಉತ್ತಮ, ಬಾಹುದಾಸ್, ರಮೇಶ ಚವ್ಹಾಣ ಘಿಸಾಡಿ, ಲಖನ್ ಸೋಲಂಕಿ, ಭಾಗ್ಯಶ್ರೀ ಸೋಲಂಕಿ, ಮೀನಾಕ್ಷಿ ಇತರರಿದ್ದರು.