ಅರಮನೆ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಫೀಸ್!
ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಮದ್ಯಾನ 4ಗಂಟೆಗೆ ಸರಿಯಾಗಿ ಮೋದಿ ವೇದಿಕೆ ಬರಲಿದ್ದಾರೆ. ಹೀಗಾಗಿ, ಅರಮನೆ ಮೈದಾನ ಸಜ್ಜಾಗಿದ್ದು ವರ್ಣರಂಜಿತ ಬೃಹತ್ ವೇದಿಕೆ ಸಿದ್ಧಗೊಂಡಿದೆ. ಕಳೆದ ಲೋಕಸಭೆ ಚುನಾವಣೆ ವೇಳೆ ‘ಭಾರತ ಗೆಲ್ಲಿಸಿ’ ಸಮಾವೇಶ ಆಯೋಜಿಸಿದ್ದ ಮಾದರಿಯಲ್ಲೇ ಪರಿವರ್ತನಾ ಯಾತ್ರೆ ಸಮಾವೇಶ ವೇದಿಕೆ ಸಿದ್ಧಗೊಳಿಸಲಾಗಿದೆ. ಎರಡು ಲಕ್ಷಕ್ಕೂ ಅಧಿಕ ಕುರ್ಚಿಗಳನ್ನು ಹಾಕಲಾಗಿದ್ದು ಸುಮಾರು 5ಲಕ್ಷ ಜನರ ಸೇರುವ ನಿರೀಕ್ಷೆಯಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. 250 ಊಟದ ಕೌಂಟರ್ ಗಳನ್ನು ಸಿದ್ಧಪಡಿಸಲಾಗಿದ್ದು 1 ಸಾವಿರ ಬಾಣಸಿಗರು ಉಪಹಾರ, ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.
ಇನ್ನು ಮತ್ತೊಂದು ವಿಶೇಷ ಅಂದರೆ ವೇದಿಕೆಯ ಹಿಂಭಾಗದಲ್ಲೇ ತಾತ್ಕಾಲಿಕ ಪ್ರಧಾನಿ ಕಚೇರಿ ನಿರ್ಮಾಣ ಮಾಡಲಾಗಿದೆ. ದೆಹಲಿಯ ಪ್ರಧಾನಿ ಕಚೇರಿಯಲ್ಲಿರುವ ಬಹುತೇಕ ವ್ಯವಸ್ಥೆಯನ್ನು ತಾತ್ಕಾಲಿಕ ಕಚೇರಿಯಲ್ಲಿ ಒದಗಿಸಲಾಗಿದೆ. ವಿಶ್ರಾಂತಿ ಗೃಹ, ದೇಶ ವಿದೇಶಿ ನಾಯಕರೊಂದಿಗೆ ಸಂಪರ್ಕಿಸಬಹುದಾದ ಫೋನ್, ಸ್ಪೀಡ್ ಇಂಟರ್ನೆಟ್ ಹಾಗೂ ಸೂಕ್ತ ಸಿಬ್ಬಂದಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮೋದಿ ಅವರ ಸೂಚನೆ ಮೇರೆಗೆ ಈ ವಿಶೇಷ ಕಚೇರಿ ನಿರ್ಮಾಣ ಮಾಡಲಾಗಿದೆ. ಹೀಗಾಗಿ, ವಿಶೇಷ ಪಿಎಮ್ಓ ಎಲ್ಲರ ಗಮನ ಸೆಳೆಯುತ್ತಿದ್ದು ಪ್ರಧಾನಿ ಮೋದಿ ಕೆಲಹೊತ್ತು ಈ ಕಚೇರಿಯಲ್ಲಿ ಕಳೆಯಲಿದ್ದಾರೆ. ತಾತ್ಕಾಲಿಕ ಕಚೇರಿಯಲ್ಲಿ ಪ್ರಧಾನಿ ಏನೆಲ್ಲಾ ಕೆಲಸ ಮಾಡಲಿದ್ದಾರೆಂವ ಸಹಜ ಕುತೂಹಲ ಕೆರಳಿಸಿದೆ.