ಪ್ರತಿಯೊಬ್ಬರಲ್ಲೂ ಒಂದು ಕಲೆ ಇರಲಿದೆ-ವೀರಯ್ಯ ಹಿರೇಮಠ
ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ಕವಿಗೋಷ್ಠಿ
ಯಾದಗಿರಿ, ಶಹಾಪುರಃ ಪ್ರತಿಯೊಬ್ಬರಲ್ಲಿ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅಂತವುಗಳಿಗೆ ಸೂಕ್ತ ಅವಕಾಶ ಕಲ್ಪಿಸುವ ಮೂಲಕ ಕಾವ್ಯಗಳಾಗಿ ಬರಲು ಸಹಕರಿಸಬೇಕಿದೆ ಎಂದು ಡಿಗ್ರಿ ಕಾಲೇಜು ಪ್ರಾಚಾರ್ಯ ವೀರಯ್ಯ ಹಿರೇಮಠ ಹೇಳಿದರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿವರ್ತನಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆವತಿಯಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸದ್ದ ಯುವ ಕವಿ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಒಂದು ಕಲೆ ಇರುತ್ತದೆ. ಅದನ್ನು ಗುರುತಿಸಿ ಹೊರ ತೆಗೆಯಬೇಕಿದೆ.
ಆ ನಿಟ್ಟಿನಲ್ಲಿ ಶಿಕ್ಷಕರ ಆದವರ ಕರ್ತವ್ಯ ಬಹು ಮುಖ್ಯವಾಗಿದೆ. ಅಲ್ಲದೆ ಸಂಘ ಸಂಸ್ಥೆಗಳು ಅದಕ್ಕೆ ಬೇಕಾದ ವೇದಿಕೆ ಕಲ್ಪಿಸಿದಾಗ ಯುವಕರಿಗೆ ಸೂಕ್ತ ಅವಕಾಶ ಕಲ್ಪಿಸಿದಂತಾಗುತ್ತದೆ. ಯುವ ಪ್ರತಿಭೆಗಳನ್ನು ಹೊರತರಲು ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥ ಚೆನ್ನಾರಡ್ಡಿ ತೂನ್ನೂರ ಮಾತನಾಡಿ, ಕವಿತೆ, ಕಾವ್ಯಗಳು, ಕಥೆಗಳು ಹೀಗೆ ಬರವಣಿಗೆಯಲ್ಲಿ ಮೂಡಿ ಬರುವ ಪ್ರತಿಯೊಂದು ಲೇಖನಗಳು ಇಂದಿನ ಸಮಾಜದ ಜಾಗೃತಿಗೆ ಪೂರಕವಾಗಿಬೇಕು.
ಸಮಾಜದ ಅಸಹ್ಯ, ಅನ್ಯಾಯವನ್ನು ಪ್ರತಿಭಟಿಸುವಂತದ್ದಾಗಿರಬೇಕು. ಅತ್ಯವನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಇತಿಹಾಸ ಕುರಹು ತಿಳಿದು ಕಾವ್ಯ ಕವಿತೆ ರಚನೆಯಾಗಲಿ.
ದೇಶದ ಅಭಿವೃದ್ಧಿ ದೇಶ ರಕ್ಷಣೆಗೆ ಸ್ವಚ್ಛ ಭಾರತ ನಿರ್ಮಾಣಕ್ಕೆ ಉತ್ತಮ ಸಂದೇಶ ನೀಡುವಂತ ಕವಿತೆಗಳು ಪ್ರಸ್ತುತ ದಿನಗಳಲ್ಲಿ ಅಗತ್ಯವಿದ್ದು, ಅಂತವುಗಳ ರಚನೆಗೆ ಕವಿ ಹೃದಯ ಮಿಡಿಯಲಿ. ನಾವುಗಳು ಅನುಭವಿಸಿದ ನೋವು, ಬಡತನ, ದೌರ್ಜನ್ಯಗಳ ವಿರುದ್ಧ ಕಾವ್ಯದ ಧ್ವನಿಯಾಗಿ ಹೊರಹೊಮ್ಮಲಿ. ಕಾವ್ಯ ಕಥೆ, ಲೇಖನಗಳು ಸಮಾಜಕ್ಕೆ ನ್ಯಾಯ ದೊರಕಿಸುವಂತಾಗಿರಬೇಕು ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಡಾ.ದಯಾನಂದ ಕಾಂಬಳೆ, ಸಾಹಿತ್ಯವು ಸೃಜನಶೀಲತೆ ಹಾಗೂ ವ್ಯಕ್ತಿತ್ವವನ್ನು ರೂಪಿಸುತ್ತದೆ. ಕಾವ್ಯವು ಸಮಾಜಮುಖಿಯಾಗಿರಬೇಕು ಎಂದು ತಿಳಿಸಿದರು.
ಆಂಗ್ಲ ಭಾಷೆಯ ಮುಖ್ಯಸ್ಥ ಆನಂದಕುಮಾರ ಸಾಸನೂರ ತಾವೂ ರಚಿಸಿದ ಕವನವನ್ನ ವಾಚನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿದರು. ಉಪನ್ಯಾಸಕಿ ಕಾಳಮ್ಮ, ಸಂಸ್ಥೆಯ ಅಧ್ಯಕ್ಷೆ ಹಣಮಂತಿ ಗುತ್ತೇದಾರ, ಬಸವಂತ ಸಾಗರ, ನಾಗಪ್ಪ ಚೌಲಕರ್ ಡಾ.ಹಯ್ಯಾಳಪ್ಪ ಸುರಪುರಕರ್, ಶಂಕ್ರಮ್ಮ ಪಾಟೀಲ್ ಉಪಸ್ಥಿತರಿದ್ದರು. ಯುವಕ ಯುವತಿಯರು ಕಾವ್ಯ ವಾಚನ ಮಾಡಿದರು. ವಿದ್ಯಾರ್ಥಿಗಳು ಉಪನ್ಯಾಸಕ ವೃಂದ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಉತ್ತಮ ಕಾವ್ಯ ವಾಚನ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು