ಭೀ.ಗುಡಿಯಲ್ಲಿ ಪ್ರಜಾಸೌಧ ನಿರ್ಮಿಸಲು ಆಗ್ರಹ
ವಿನಯವಾಣಿ ಸಮಾಚಾರ
ಶಹಾಪುರಃ ನಗರ ಸಮೀಪದ ಭೀಮರಾಯನ ಗುಡಿಯ ಹೆದ್ದಾರಿಗೆ ಹೊಂದಿಕೊಂಡಿರುವ ಸಾಕಷ್ಡು ಜಮೀನಿದ್ದು, ಭೀ.ಗುಡಿಯಲ್ಲಿಯೇ ನೂತನ ಪ್ರಜಾಸೌಧ ನಿರ್ಮಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಜಿಲ್ಲಾ ಕಾರ್ಯಧ್ಯಕ್ಷ ನಾಗಪ್ಪಗೌಡ ಪೋಲಿಸ್ ಪಾಟೀಲ್ ಆಗ್ರಹಿಸಿದ್ದಾರೆ.
ನಗರ ಡಿಗ್ರಿ ಕಾಲೇಜು ಅಧೀನದ ಜಾಗದಲ್ಲಿ ಈ ಮೊದಲು ಪ್ರಜಾಸೌಧ ನಿರ್ಮಾಣ ಮಾಡಲು ಮುಂದಾದಾಗ,ಸಾಕಷ್ಟು ವಿರೋಧವಾಯಿತು. ಶೈಕ್ಷಣಿಕ ಜಾಗ ಇರುವದರಿಂದ ಡಿಗ್ರಿ ಕಾಲೇಜು ಜಾಗದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಅವಕಾಶ ಬೇಡವೆಂಬ ಮಾತುಗಳು ಕೇಳಿಬಂದವು. ಪ್ರತಿಭಟನೆಯು ಜರುಗಿತು. ಹೀಗಾಗಿ ನೂತನ ಪ್ರಜಾಸೌಧ ನಿರ್ಮಾಣಕ್ಕೆ ಬೇಕಾದ ಸೂಕ್ತ ಜಮೀನು ಭೀಮರಾಯನ ಗುಡಿ ವ್ಯಾಪ್ತಿ ಹೆದ್ದಾರಿಗೆ ಹೊಂದಿಕೊಂಡಿರುವ ಜಾಗವಿದ್ದು, ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶರಣಬಸಪ್ಪಗೌಡ ದರ್ಶನಾಪುರ ಅವರು ಪರಿಶೀಲಿಸಿ ಭೀ.ಗುಡಿಯಲ್ಲಿಯೇ ನೂತನ ಪ್ರಜಾಸೌಧ ನಿರ್ಮಿಸುವ ಮೂಲಕ ತಾಲೂಕಿನ ಸುತ್ತಲಿನ ಗ್ರಾಮಗಳಿಗೆ ಅನುಕೂಲ ಕಲ್ಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ.




