ಜನಮನ

ಬಹುಭಾಷಾ ನಟ ಪ್ರಕಾಶ್ ರೈ ಅವರಿಂದ ಒಂದೊಳ್ಳೇ ಕೆಲಸ!

-ಮಲ್ಲಿಕಾರ್ಜುನ ಮುದನೂರ್

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಜನ ಫ್ಲೋರೈಡ್ ಪೂರಿತ ನೀರು ಸೇವಿಸಿ ವಿವಿಧ ರೋಗಗಳಿಗೆ ತುತ್ತಾಗಿದ್ದಾರೆ. ಮದ್ಯ ವಯಸ್ಸಿನಲ್ಲೇ ಮುಪ್ಪು ಆವರಿಸದಂತೆ ಕಾಣುವುದು, ಹಲ್ಲಿನ ರೋಗಗಳು, ಮೂಳೆ ರೋಗಗಳು ಸೇರಿದಂತೆ ಇತರೆ ರೋಗಗಳು ಈ ಭಾಗದ ಜನರಲ್ಲಿ ಸಹಜವಾಗಿವೆ. ಈ ಬಗ್ಗೆ ವಿವಿಧ ಮಾಧ್ಯಮಗಳು ಅನೇಕ ಸಲ ವರದಿ ಪ್ರಕಟಿಸುವ ಮೂಲಕ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಿವೆ.

ಇಂದು ಬಹುಭಾಷಾ ನಟ ಪ್ರಕಾಶ ರೈ ಹಿರಿಯೂರು ತಾಲೂಕಿನ ಬಂಡ್ಲೊರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಖುದ್ದಾಗಿ ಗ್ರಾಮ ಪ್ರದಕ್ಷಿಣೆ ಹಾಕುವ ಮೂಲಕ ಇಡೀ ಗ್ರಾಮವನ್ನು ವೀಕ್ಷಣೆ ಮಾಡಿದ್ದಾರೆ. ಕೆಲ ಹೊತ್ತು ಗ್ರಾಮದ ಜನರೊಂದಿಗೆ ಸಂವಾದ ನಡೆಸಿದ್ದು ಸಮಸ್ಯೆಗಳನ್ನು ಆಲಿಸಿದ್ದಾರೆ. ಬಳಿಕ ಮಾತನಾಡಿ ಮತದ ರಾಜಕಾರಣ ಮತ್ತು ದೇವರ ರಾಜಕಾರಣ ನನಗೆ ಬೇಕಿಲ್ಲ. ಗ್ರಾಮಾಭಿವೃದ್ಧಿ ಅಷ್ಟೇ ನನ್ನ ಕಲ್ಪನೆ ಅದಕ್ಕೆ ಪೂರಕವಾಗಿ ನನಗೆ ಮಾಹಿತಿ ನೀಡಿ ಎಂದಿದ್ದಾರೆ.

ಆಂಧ್ರಪ್ರದೇಶದ ಮಹೆಬೂಬ್ ನಗರ ಜಿಲ್ಲೆಯ ಕೊಂಡರೆಡ್ಡಿಪಲ್ಲಿ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಿದ್ದೇನೆ. ಅಂತೆಯೇ ನಿಮ್ಮ ಗ್ರಾಮವನ್ನೂ ಸಹ ಅಭಿವೃದ್ಧಿ ಪಡಿಸಲು ನಿರ್ಧರಿಸಿದ್ದೇನೆ. ಒಂದು ತಿಂಗಳ ಕಾಲಾವಕಾಶ ನೀಡಿ ನಾನು ಮತ್ತು ನಮ್ಮ ಜನ ಗ್ರಾಮಕ್ಕೆ ಬಂದು ಗ್ರಾಮಾಭಿವೃದ್ಧಿಗೆ ಪ್ಲಾನ್ ಮಾಡುತ್ತೇವೆಂದು ಪ್ರಕಾಶ್ ರೈ ಭರವಸೆ ನೀಡಿದ್ದಾರೆ.

ಬಂಡ್ಲೊರಹಟ್ಟಿ ಗ್ರಾಮದಲ್ಲಿನ ನೀರಿನ ಸಮಸ್ಯೆ ಮಾತ್ರವಲ್ಲ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಗ್ರಾಮದ ಜನ ಅಭಿವೃದ್ಧಿ ಯೋಜನೆಗೆ ಸಂಪೂರ್ಣ ಸಹಕಾರವನ್ನು ನೀಡಬೇಕು. ನಿಮ್ಮ ಗ್ರಾಮದಿಂದಲೇ ಮುಂದೊಂದು ದಿನ ಮತ್ತೊಂದು ಗ್ರಾಮವನ್ನು ದತ್ತು ಪಡೆಯುವಂತೆ ಅಭಿವೃದ್ಧಿ ಆಗಬೇಕೆಂಬುದು ನನ್ನ ಆಶಯ ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಇತ್ತೀಚೆಗೆ ಕೇಸರಿ ಪಡೆಯ ಜೊತೆ ಕುಸ್ತಿಗೆ ಬಿದ್ದಿರುವ ನಟ ಪ್ರಕಾಶ್ ರೈ ತಮ್ಮ ಹೇಳಿಕೆಗಳ ಮೂಲಕ ಸುದ್ದಿಯಲ್ಲಿದ್ದರು. ಹಲವರ ಕೆಂಗಣ್ಣಿಗೆ ಗುರಿಯಾಗಿದ್ದು ಪ್ರಕಾಶ್ ರೈ ಪರ-ವಿರೋಧ ಚರ್ಚೆಗಳು ಸಹಜವಾಗಿದ್ದವು. ಆದರೆ, ಇದೀಗ ಬಂಡ್ಲೊರಹಟ್ಟಿ ಗ್ರಾಮದ ಅಭಿವೃದ್ಧಿಗೆ ಪಣ ತೊಟ್ಟಿರುವ ಪ್ರಕಾಶ್ ರೈ ಕಾರ್ಯ ನಿಜಕ್ಕೂ ಶ್ಲಾಘನೀಯ. ಪ್ರಕಾಶ್ ರೈ ಅವರ ಗ್ರಾಮಾಭಿವೃದ್ಧಿ ಕನಸು ನನಸಾಗಲಿ, ಅನೇಕರಿಗೆ ಮಾದರಿ ಆಗಲಿ ಎಂಬುದು ವಿನಯವಾಣಿ ಆಶಯ.

Related Articles

Leave a Reply

Your email address will not be published. Required fields are marked *

Back to top button