2006 ರ ನಂತರ ನೇಮಕಗೊಂಡ ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಸೌಲಭ್ಯ ಕಲ್ಪಿಸಲು ಆಗ್ರಹ
ಶಹಾಪುರಃ ನೂತನ ನೌಕರದಾರರಿಗೆ ಸರ್ಕಾರ ಸಮರ್ಪಕ ಪಿಂಚಣಿ ವ್ಯವಸ್ಥೆ ಈ ಮೊದಲಿನಂಥೆ ಕಲ್ಪಿಸಬೇಕೆಂದು ಆಗ್ರಹಿಸಿ ನಗರದ ತಹಸೀಲ್ ಕಚೇರಿ ಎದುರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಹೊಸ ಪಿಂಚಣಿ ಯೋಜನೆ ಸಂಘವು ಎನ್ಪಿಎಸ್ ವಿರೋಧಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಎನ್ಪಿಎಸ್ ತಾಲೂಕು ಸಂಘದ ಅಧ್ಯಕ್ಷ ರಾಮಕೃಷ್ಣ ಕಟ್ಕಾವಲಿ, 2006 ರ ನಂತರ ರಾಜ್ಯದಲ್ಲಿ ಸರ್ಕಾರಿ ನೌಕರರಾಗಿ ನೇಮಕಗೊಂಡ ಪ್ರತಿಯೊಬ್ಬರೂ ಪಿಂಚಣಿಯಿಂದ ವಂಚಿತಗೊಂಡಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಹೊಸದಾಗಿ ನೇಮಕಗೊಂಡ ನೌಕರರಿಗೂ ಈ ಮೊದಲಿನಂತೆ ಪಿಂಚಣೆ ವ್ಯವಸ್ಥೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
2006ರ ನಂತರ ರಾಜ್ಯದಲ್ಲಿ ನೇಮಕಗೊಂಡ ಸರ್ಕಾರಿ ನೌಕರರಿಗೆ ಪಿಂಚಿಣಿ ಸೌಲಭ್ಯದಲ್ಲಿ ಹಲವು ನ್ಯೂನತೆಗಳು ಉಂಟಾಗಿದ್ದು, ಟ್ರಸ್ಟ್ ಮ್ಯಾನೇಜಮೆಂಟ್ನವರು ನಿರ್ವಹಿಸುವ ಆರ್ಥಿಕ ಕಾರ್ಯನಿರ್ವಹಣೆಯಲ್ಲಿ ಯಾವುದೇ ಬದ್ಧತೆಗಳು ಕಾಣುತ್ತಿಲ್ಲ. ಅಲ್ಲದೆ ಅನಿಶ್ಚಿತ ಪಿಂಚಿಣಿ ಯೋಜನೆ ಇದಾಗಿದ್ದು, ಇದರಿಂದ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 1.80 ಲಕ್ಷ ಸರ್ಕಾರಿ ನೌಕರರು ಸೇವಾ ನಿವೃತ್ತಿ ಸಂದರ್ಭದಲ್ಲಿ ಪಿಂಚಣಿ ಮತ್ತು ಇನ್ನಿತರ ಸವಲತ್ತುಗಳಿಂದ ವಂಚಿತರಾಗಲಿದ್ದಾರೆ. ಕಾರಣ ಸಂಘಟಿತ ಹೋರಾಟ ಅಗತ್ಯವಿದ್ದು, ಎಲ್ಲಾ ನೌಕರರು ಕೈಜೋಡಿಸಬೇಕಿದೆ ಎಂದರು.
ರಾಸನೌಸಂಘದ ತಾಲೂಕು ಅಧ್ಯಕ್ಷ ಸುಧಾಕರ ಗುಡಿ ಮಾತನಾಡಿ, ಪಿಂಚಣಿ ಎಂಬುವುದು ಮಾಲೀಕನ ಮರ್ಜಿಯಾಗಲಿ, ದಯಾ ಭಿಕ್ಷೆಯಾಗಲಿ ಅಲ್ಲ. ಅದು ನೌಕರರ ತಾರುಣ್ಯದಲ್ಲಿ ನಿರಂತರವಾಗಿ ಸಲ್ಲಿಸಿದ ಸೇವೆಗೆ ತಾವೇ ಗಳಿಸಿದ ವೇತನವಾಗಿದೆ. ನೌಕರರು ಆತ್ಮಗೌರವದಿಂದ ಬಾಳಲು ನಿವೃತ್ತ ಜೀವನ ಸುಖಮಯವಾಗಿರಲು ಹಳೆ ಪಿಂಚಣಿ ಯೋಜನೆ ಜಾರಿಯಾಗವವರಿಗೂ ನಿರಂತರ ಹೋರಾಟ ಮುಂದುವರೆಯಲಿದೆ ಎಂದರು.
ಪ್ರತಿಭಟನೆಯಲ್ಲಿ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಭೀಮನಗೌಡ ತಳೇವಾಡ, ಶಿವಲಿಂಗಪ್ಪ ಸುರಪುರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಯಾಳಗಿ, ವಿವಿಧ ಸಂಘದ ಪದಾಧಿಕಾರಿ ರಾಯಪ್ಪಗೌಡ ಹುಡೇದ, ಬಸನಗೌಡ ಬೆಳ್ಳಿಕಟ್ಟಿ, ರಾಜಾಸಾಹೇಬ ಬಳಿಗಾರ, ಬಸವರಾಜ ಗೋಗಿ, ¯ಕ್ಷ್ಮಣ ಲಾಲಸಣಿಗಿ, ಚಂದಪ್ಪ, ಪ್ರಶಾಂತ ಯಾಳಗಿ, ಶರಣಬಸಪ್ಪ ಹೊಸಮನಿ, ನಾಗಪ್ಪ ಪ್ರಭು, ರಾಜಶೇಖರ ಪತ್ತಾರ, ಗೌರೀಶ ಆವಟ್ಟಿ, ರಾಮನಗೌಡ ಇತರರು ಭಾಗವಹಿಸಿದ್ದರು.