ಕೊರೊನಾ ತಡೆಗೆ ಲಸಿಕೆ ಹಾಕಿಸಿಕೊಳ್ಳಿ..!
ಕೊರೋನಾ ಮಹಾಮಾರಿಯಿಂದ ಮುಕ್ತರಾಗಲು ಕೊವಿಡ್ ಲಸಿಕೆ ಹಾಕಿಸಿ – ಹಾರಣಗೇರಾ
ಮನುಷ್ಯನ ಜೀವನಕ್ಕೆ ತುಂಬಾ ಅಪಾಯಕಾರಿಯಾದ ಗಂಭೀರ ಸನ್ನಿವೇಶಗಳನ್ನು ಸೃಷ್ಟಿಸುತ್ತಿರುವ ಮತ್ತು ಸಹಸ್ರಾರು ಜನರ ಸಾವು – ನೋವುಗಳಿಗೆ ಕಾರಣವಾಗುತ್ತಿರುವ ಮಹಾ ಮಾರಿ ಕೊರೋನಾ ವೈರಸ್ ನಿರ್ಮೂಲನೆಗೆ ನಮ್ಮ ದೇಶ ಹಾಗೂ ರಾಜ್ಯದಲ್ಲಿ ಲಾಕಡೌನ್, ಮಾಸ್ಕ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ವಿವಿಧ ಚಿಕಿತ್ಸಾ ಕ್ರಮಗಳು, ಆರೋಗ್ಯ ಸೌಲಭ್ಯಗಳನ್ನು ನೀಡುವುದರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಗಲಿರುಳು ಶ್ರಮಿಸುತ್ತಿವೆ.
ಜೊತೆಗೆ ಇತ್ತೀಚೆಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಕೊರೋನಾ ವೈರಸ್ ನಾಶಕ್ಕೆ ಈ ಲಸಿಕೆ ತುಂಬಾ ಮಹತ್ವದ್ದಾಗಿದೆ ಎಂದು ವೈದ್ಯಕೀಯ ವರದಿಗಳು ಹೇಳುತ್ತಿವೆ.
ಮೇ ಒಂದರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವಯೋಮಾನದವರು ಕೊವಿಡ್ ಲಸಿಕೆ ಹಾಕಿಸಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಲಸಿಕೆ ಹಾಕಿಸಿಕೊಳ್ಳಲು ಅಪಾರ ಪ್ರಮಾಣದ ಜನರು ನೊಂದಣಿ ಮಾಡಿಸುತ್ತಿರುವುದು ತುಂಬಾ ಒಳ್ಳೆಯ ಹಾಗೂ ಆರೋಗ್ಯಕರ ಬೆಳವಣಿಗೆಯಾಗಿದೆ.
ಆದ್ದರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವಯೋಮಾನದವರು ತಪ್ಪದೆ ಕೊವಿಡ್ ಲಸಿಕೆ ಹಾಕಿಸಿಕೊಂಡು ಕೊರೋನಾ ಮಹಾಮಾರಿಯ ಮಾರಣಾಂತಿಕ ಗಂಭೀರ ಸ್ವರೂಪದ ಅಪಾಯಗಳಿಂದ ಮುಕ್ತರಾಗಲು ಪ್ರತಿಯೊಬ್ಬ ನಾಗರಿಕರು ಪೌರಪ್ರಜ್ಞೆ ಮೆರೆಯಬೇಕು. ಕೊರೋನಾ ಎಂಬ ಹೆಮ್ಮಾರಿ ಮನುಷ್ಯನ ಸಾಮಾಜಿಕ ಬದುಕು ಬಹಳಷ್ಟು ಅಸ್ತವ್ಯಸ್ತಗೊಳಿಸಿದೆ.
ಇದರಿಂದ ಜನಸಾಮಾನ್ಯರ ಜೀವನ ಹಲವಾರು ತಲ್ಲಣಗಳಲ್ಲಿ, ಸಮಸ್ಯೆಗಳಲ್ಲಿ, ಆತಂಕಗಳಲ್ಲಿ ಬದುಕುವಂತೆ ಮಾಡಿದೆ. ಅಪಾರ ಪ್ರಮಾಣದ ಜನರ ಮಾರಣ ಹೋಮಕ್ಕೆ ಕಾರಣವಾಗುತ್ತಿದೆ.
ಕೊರೋನಾ ಇಡೀ ಜಾಗತಿಕ ಮಾನವ ಕುಲದ ಮಾರಣಾಂತಿಕ ಸಮಸ್ಯೆಯಾಗಿದೆ ಎಂಬುದು ಪ್ರತಿಯೊಬ್ಬರು ಅರಿತುಕೊಳ್ಳಬೇಕು.
ಇಂತಹ ಮಾರಣಾಂತಿಕ ಮಹಾಮಾರಿ ಕೊರೋನಾ ವೈರಸ್ ಕುರಿತು ಜನರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ತುಂಬಾ ಹಗುರವಾಗಿ ಪರಿಗಣಿಸಬಾರದು.
ಮನುಷ್ಯ ಜೀವಕ್ಕೆ ಕಂಟಕವಾಗಿರುವ ಈ ಕೊರೋನಾ ವೈರಸ್ ನ ಅಪಾಯಗಳಿಂದ ಪಾರಾಗಲು ಪ್ರತಿಯೊಬ್ಬ ನಾಗರಿಕನು ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮತ್ತು ವೈದ್ಯಕೀಯ ಇಲಾಖೆಯ ಕಟ್ಟುನಿಟ್ಟಿನ ನಿಯಂತ್ರಣಾ ಕ್ರಮಗಳು ಪಾಲಿಸದಿದ್ದರೆ ಮತ್ತು ಚಿಕಿತ್ಸಾ ಕ್ರಮಗಳಿಗೆ ಒಳಗಾಗದಿದ್ದರೆ ಈ ಕೊರೋನಾ ಅಪಾರ ಪ್ರಮಾಣ ಮನುಷ್ಯ ಜೀವಗಳನ್ನು ಬಲಿ ತೆಗೆದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ.
ಆದ್ದರಿಂದ ಈ ಕೊರೋನಾ ವೈರಸ್ ನ ಎಲ್ಲಾ ರೀತಿಯ ಮಾರಣಾಂತಿಕ ಅಪಾಯಗಳಿಂದ ಪಾರಾಗಲು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವಯೋಮಾನದವರು ತಪ್ಪದೆ ಕೊವಿಡ್ ಲಸಿಕೆ ಹಾಕಿಸಿಕೊಳ್ಳಬೇಕು.
ಮತ್ತು ಇತರರು ಲಸಿಕೆ ಹಾಕಿಸಿಕೊಳ್ಳಲು ತಿಳಿಸಿ ಹೇಳಬೇಕು. ಕೊರೋನಾ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಅನಾವಶ್ಯಕ ಹೊರಗಡೆ ಬರದೆ ಮನೆಯಲ್ಲಿ ಇರಬೇಕು.
ಮದುವೆ, ದೇವರು-ದಿಂಡಿರು, ನಿಶ್ಚಿತಾರ್ಥ ಮುಂತಾದ ಕೌಟುಂಬಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ, ಧಾರ್ಮಿಕ ಕಾರ್ಯಗಳನ್ನು 2- 3 ತಿಂಗಳುಗಳವರೆಗೆ ಮುಂದಕ್ಕೆ ಹಾಕುವುದು ತುಂಬಾ ಒಳ್ಳೆಯದು.
ಇವೆಲ್ಲವೂ ಮನುಷ್ಯ ಬದುಕಿಗಿಂತ ದೊಡ್ಡವುಗಳಲ್ಲ ಎಂಬುದು ಅರಿತುಕೊಳ್ಳಬೇಕು. ಕೊರೋನಾದ ಈ ಸಂಕಷ್ಟದ ಸ್ಥಿತಿಯಲ್ಲಿ ನಮ್ಮ ಜೀವಗಳನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ನಮ್ಮ ಆರೋಗ್ಯ, ನಮ್ಮ ಜೀವನ, ನಮ್ಮ ಜವಾಬ್ದಾರಿಯಾಗಿದೆ.
ಈ ಹಿನ್ನೆಲೆಯಲ್ಲಿ ಸರ್ವರೂ ಕೊರೋನಾ ನಿರ್ಮೂಲನೆಗೆ ಕಂಕಣಬದ್ದರಾಗಿ ಶ್ರಮಿಸೋಣ. ಮನುಷ್ಯ ಜೀವಕ್ಕೆ ಗಂಡಾಂತರ ತಂದಿರುವ ಕೊರೋನಾದಿಂದ ಮುಕ್ತರಾಗಲು ಕೊವಿಡ್ ಲಸಿಕೆ ಹಾಕಿಸಿಕೊಳ್ಳೊಣ. ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸೋಣ.
ಸರ್ಕಾರದ ಜೊತೆಯಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳು, ಕಾಲೇಜು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು, ಎನ್.ಸಿ.ಸಿ, ಸ್ಕೌಟ್ ಆ್ಯಂಡ್ ಗೈಡ್ಸ್ ಘಟಕಗಳು ಕೈ ಜೋಡಿಸುವ ಮೂಲಕ ಕೊರೋನಾ ವೈರಸ್ ನಿರ್ಮೂಲನೆಗೆ ಶ್ರಮಿಸಬೇಕು. – – –
-ರಾಘವೇಂದ್ರ ಹಾರಣಗೇರಾ.
ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಸಮಾಜಶಾಸ್ತ್ರ ಉಪನ್ಯಾಸಕರು ಬಿ.ಡಿ.ಎಮ್. ಮಹಿಳಾ ಪದವಿ ಕಾಲೇಜು ಶಹಾಪುರ. ಜಿಲ್ಲೆ . ಯಾದಗಿರಿ. 9901559873.