ಗುಜರಾತ್ ಚುನಾವಣಾ ಫಲಿತಾಂಶದ ದಿನ ಚಿತ್ರ ವೀಕ್ಷಿಸಿದ ರಾಹುಲ್ ಗಾಂಧಿಯಿಂದ ಪಕ್ಷೋದ್ಧಾರ ಸಾಧ್ಯವೇ?
ಎಲ್ಲೆಡೆ ಸೋತು ಸುಣ್ಣವಾಗುತ್ತ ಸಾಗಿದ್ದ ಕಾಂಗ್ರೆಸ್ ಗುಜರಾತ್ ಚುನಾವಣೆಯಲ್ಲಿ ಕೊಂಚ ಚೇತರಿಸಿಕೊಂಡಿದೆ. ಪರಿಣಾಮ ಎಐಸಿಸಿ ನೂತನ ಅದ್ಯಕ್ಷ ರಾಹುಲ್ ಗಾಂಧಿ ಭಾರತ ಗೆದ್ದ ಖುಷಿಯಲ್ಲಿ ಬೀಗುತ್ತಿದ್ದಾರೆ. ಮತ್ತೊಂದು ಕಡೆ ಹಿಮಾಚಲ ಪ್ರದೇಶ ಕೈ ತಪ್ಪಿದ್ದನ್ನು ಮರೆತೇ ಬಿಟ್ಟಂತಿದೆ. ಗುಜರಾತ್ ನಲ್ಲಿ ಪವರ್ ಫುಲ್ ಯುವ ನಾಯಕರಾದ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಅಂತವರು ಕೈ ಹಿಡಿದದ್ದು ಕಾಂಗ್ರೆಸ್ಸಿಗೆ ಲಾಭವಾಗಿದೆ. ಅಲ್ಲದೆ 22ವರ್ಷಗಳ ಬಿಜೆಪಿಯ ಆಡಳಿತ ವಿರೋಧಿ ಅಲೆಯೂ ಕಾಂಗ್ರೆಸ್ ಚೇತರಿಕೆಗೆ ಸಾಥ್ ನೀಡಿದೆ. ಆದರೆ, ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣ ಫಲಿತಾಂಶದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದ್ದ ರಾಹುಲ್ ಗಾಂಧಿ ಮಾತ್ರ ಬಿಂದಾಸ್ ಆಗಿ ಸಿನೆಮಾ ನೋಡಲು ತೆರಳಿದ್ದರು ಎನ್ನಲಾಗಿದೆ.
ಎಐಸಿಸಿ ಅದ್ಯಕ್ಷರೂ ಆಗಿರುವ ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಪಕ್ಷದ ಸಂಘಟನೆ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಪಕ್ಷದ ನಾಯಕರು, ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಬೇಕು. ಮುಂದಿನ ಚುನಾವಣೆಗೆ ಪಕ್ಷ ಹೇಗೆ ಸಿದ್ಧತೆ ನಡೆಸಬೇಕೆಂಬುದರ ಪ್ಲಾನ್ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ತವರಲ್ಲೇ ಕಾಂಗ್ರೆಸ್ ಚೇತರಿಕೆ ಕಂಡಿದ್ದನ್ನೇ ಬಳಸಿಕೊಂಡು ಮುನ್ನುಗ್ಗಬೇಕಿದೆ. ಆದರೆ, ಅದು ಬಿಟ್ಟು ಎರಡೂ ರಾಜ್ಯಗಳ ಫಲಿತಾಂಶದ ದಿನವೇ ಮನರಂಜನೆಗಾಗಿ ಸಿನೆಮಾ ನೋಡಲು ತೆರಳಿದ್ದು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸುತ್ತದೆ. ಪಕ್ಷದ ಸಂಘಟನೆ ಬಗ್ಗೆ ರಾಹುಲ್ ಗಾಂಧಿ ಇನ್ನೂ ಗಂಭೀರವಾಗಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಗುಜರಾತ್ ಫಲಿತಾಂಶದ ಬಳಿಕ ಪ್ರಧಾನಿ ಮೋದಿ ತವರಲ್ಲೇ ಮೋದಿ ಹವಾ ಕಡಿಮೆ ಆಗಿದೆ ಎಂಬ ಮಾತು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಇದೇ ಸಂದರ್ಭದಲ್ಲಿ ಸಿನೆಮಾ ನೋಡಲು ಹೋದ ರಾಹುಲ್ ಗಾಂಧಿ ಮೊದಲೇ ರಾಹುಲ್ ಅಂದರೆ ಸಾಕು ಮನಸೋ ಇಚ್ಛೆ ವ್ಯಂಗ್ಯವಾಡುತ್ತಿದ್ದ ಕೇಸರಿ ಪಡೆಗೆ ಖುದ್ದಾಗಿ ಮತ್ತೊಂದು ಅಸ್ತ್ರ ನೀಡಿದಂತಾಗಿದೆ. ಚಿತ್ರದುರ್ಗದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಠಾಕೂರ್ ಗಂಭೀರತೆ ಇಲ್ಲದ ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ಸಂಘಟಿಸಲು ಸಾಧ್ಯವಿಲ್ಲ. ಗುಜರಾತ್ ಚುನಾವಣ ಫಲಿತಾಂಶದ ದಿನವೇ ಮನರಂಜನೆಗಾಗಿ ಸಿನೆಮಾ ನೋಡಲು ತೆರಳಿದ್ದರು. ರಾಹುಲ್ ಪಾರ್ಟ್ ಟೈಮ್ ರಾಜಕಾರಣದಲ್ಲಿ ತೊಡಗಿದ್ದಾರೆಂದು ವ್ಯಂಗ್ಯವಾಡಿದರಲ್ಲದೆ ಕಾಂಗ್ರೆಸ್ ಮುಕ್ತ ಭಾರತದ ನಮ್ಮ ಪರಿಕಲ್ಪನೆ ಈಡೇರಲಿದೆ ಎಂದಿದ್ದಾರೆ.
ಸದ್ಯ ನರೇಂದ್ರ ಮೋದಿ ಅವರಂತ ಜನಪ್ರಿಯ ನಾಯಕರ ಎದುರು ಸೆಣೆಸಬೇಕೆಂದರೆ ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಇನ್ನೂ ಗಂಭೀರವಾಗಬೇಕಿದೆ. ಜನಪರ ಹೋರಾಟದ ಮೂಲಕ ಪ್ರಬಲ ವಿಪಕ್ಷ ನಾಯಕನಾಗಿ ಹೊರ ಹೊಮ್ಮಬೇಕಿದೆ. ಆಗ ಮಾತ್ರ ಇಂದಿನ ಗುಜರಾತಿನ ರಾಜಕೀಯ ಚಿತ್ರಣ ದೇಶದಲ್ಲಿ ನಿರ್ಮಾಣವಾಗಲಿದೆ. ರಾಹುಲ್ ಗಾಂಧಿ ಅವರೂ ದೇಶದ ಪ್ರಧಾನಿ ಪಟ್ಟಕ್ಕೇರುವ ಸಾಧ್ಯತೆ ಇದೆ ಎಂಬುದು ಹಿರಿಯ ಪತ್ರಕರ್ತರ ವಾದವಾಗಿದೆ.
-ಸಂ