ರೋಗ ರಹಿತ ದೇಹ ಪೊಲೀಸರಿಗೆ ಅತ್ಯಗತ್ಯ-ಡಾ.ಕಾಮರಡ್ಡಿ
ಕಲಬುರ್ಗಿಃ ಇಂದಿನನ ಒತ್ತಡ ಯುಗದಲ್ಲಿ ಮನಸ್ಸು ಮತ್ತು ದೇಹವನ್ನ ಆರೋಗ್ಯವಾಗಿಟ್ಟುಕೊಳ್ಳುವುದು ಮಹತ್ವದ ಜವಾಬ್ದಾರಿಯಾಗಿದೆ.ಅದರಲ್ಲೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಪೊಲೀಸ್ ಸಿಬ್ಬಂದಿಗಳು ಒತ್ತಡ ರಹಿತ ಮನಸ್ಸು, ರೋಗ ರಹಿತ ದೇಹ ಹೊಂದುವುದು ಅವಶ್ಯಕವಾಗಿದೆ ಎಂದು ನಗರದ ಖ್ಯಾತ ಮೂಳೆ ತಜ್ಞ ವೈದ್ಯ ಡಾ.ಎಸ್.ಬಿ.ಕಾಮರೆಡ್ಡಿ ತಿಳಿಸಿದರು.
ಮೌನಯೋಗಿ ಫೌಂಡೇಶನ್ ಹಾಗೂ ಟ್ರಾನ್ಸ್ ಫಾರ್ಮೊ ಇನ್ಕಾರ್ಪ್ ಸಹಯೋಗದಲ್ಲಿ ಪೊಲೀಸ್ ಆಯುಕ್ತಾಲಯದ ಅಧಿಕಾರಿ ಸಿಬ್ಬಂದಿಗಳಿಗಾಗಿ ಇತ್ತೀಚೆಗೆ ಆಯೋಜಿಸಿದ್ದ ಒತ್ತಡ ರಹಿತ ಮನಸ್ಸು, ರೋಗ ರಹಿತ ದೇಹ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮನಸ್ಸು ಒತ್ತಡಕ್ಕೊಳಗಾದಾಗ ದೇಹ ಹಲವು ರೋಗಗಳಿಗೆ ತುತ್ತಾಗುವ ಅಪಾಯವಿದ್ದು, ಆ ನಿಟ್ಟಿನಲ್ಲಿ ಉಪಯುಕ್ತ ಕಾರ್ಯಾಗಾರವನ್ನು ಆಯೋಜಿಸಿದ್ದು ಬಹಳ ಸೂಕ್ತವಾಗಿದೆ. ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ತಮ್ಮ ಕಾರ್ಯದಲ್ಲಿ ಸದಾ ಒತ್ತಡವಿರುತ್ತದೆ. ಮನಸ್ಸು ಮತ್ತು ದೇಹ ಒಂದು ನಾಣ್ಯದ ಎರಡು ಮುಖಗಳಿದ್ದ ಹಾಗೆ ಒಂದು ತೊಂದರೆಗೊಳಗಾದರೆ ಇನ್ನೊಂದು ಅನಾರೋಗ್ಯಕ್ಕೀಡಾಗುತ್ತದೆ.
ಒತ್ತಡ ನಿರ್ವಹಣ ಶಾಸ್ತ್ರ ಹಾಗೂ ಒತ್ತಡದ ಬಗೆಗಿನ ತಪ್ಪು ಪರಿಕಲ್ಪನೆಗಳನ್ನು ಹೋಗಲಾಡಿಸಿಕೊಳ್ಳಲು ಈ ಕಾರ್ಯಾಗಾರ ಪೊಲೀಸ್ ಸಿಬ್ಬಂದಿಗಳಿಗೆ ಬಹಳ ಅನುಕೂಲವಾಗುತ್ತದೆ ಎಂದರು.
ಒತ್ತಡದ ಬಗೆಗಿನ ತಪ್ಪು ತಿಳುವಳಿಕೆಯಿಂದ ಬಹಳಷ್ಟು ಜನ ಹಾನಿಗೊಳಗಾಗಿದ್ದಾರೆ. ನಮ್ಮ ಭಾವನೆ ಹಾಗೂ ಮನೋಭಾವನೆ ಬದಲಾದರೆ ಒತ್ತಡ ನಿರ್ವಹಿಸುವುದು ಸುಲಭ ಎಂದು ಬೆಂಗಳೂರಿನಿಂದ ಆಗಮಿಸಿದ ತರಬೇತುದಾರ ಮನೋತಜ್ಞ ಭುಜಬಲಿ ಬೋಗಾರ ತಿಳಿಸಿದರು.
ಪೊಲೀಸ್ ಆಯುಕ್ತಾಲಯದ ಡಿಸಿಪಿ ಕಿಶೋರ್ ಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.