ನಾಡು ಕಂಡ ಅಪರೂಪದ ವ್ಯಕ್ತಿ ರಾಜಾ ಮದನ್ ಗೋಪಾಲ ನಾಯಕ
ವಿವಿ ಡೆಸ್ಕ್ಃ ನಾಡು ಕಂಡ ಅಪರೂಪದ ಚಿಂತನಾಶೀಲ ರಾಜಕಾರಣಿ, ಹಿರಿಯ ಮುತ್ಸದ್ದಿ. ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರ ನಿಧನ ಸಗರನಾಡಿಗೆ ತುಂಬಲಾರದ ನಷ್ಟ. ಶಾಸಕರಾಗಿ, ಸಚಿವರಾಗಿ ನಾಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದ ಜೀವಪರ ಕಾಳಜಿಯ ರಾಜಕಾರಣಿ.
ಸಗರನಾಡಿನ ಸಾಂಸ್ಕೃತಿಕ ರಾಯಭಾರಿ ಎಂದು ಜನರ ಪ್ರೀತಿ, ಅಭಿಮಾನಕ್ಕೆ ಪಾತ್ರರಾಗಿದ್ದ ರಾಜ ಮದನಗೋಪಾಲ ನಾಯಕರು ಶಿಕ್ಷಣ, ಸಾಹಿತ್ಯ, ಸಂಗೀತ, ಚಿತ್ರಕಲೆ, ನಾಟಕ ಮುಂತಾದ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊಂದಿ ಅವುಗಳ ಬೆಳವಣಿಗೆಗೆ ಸದಾ ಪ್ರೊತ್ಸಾಹ ನೀಡುತ್ತಿದ್ದರು.
ನಿರಂತರವಾಗಿ ಸಾಹಿತ್ಯ, ಸಂಗೀತ, ನಾಟಕ, ಉಪನ್ಯಾಸ ಮುಂತಾದ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಸುರಪುರದಲ್ಲಿ ಉತ್ತಮವಾದ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡಿದ್ದರು.
ಸುರಪುರದಲ್ಲಿ ಜರುಗಿದ ಸಾಹಿತಿ ಡಾ. ರಂಗರಾಜ ವನದುರ್ಗ ಅವರ ಅದ್ಯಕ್ಷತೆಯಲ್ಲಿ ನಡೆದ ೩ ನೇ ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಇಡೀ ಸಮ್ಮೇಳನ ಎಲ್ಲರನ್ನೂ ಒಳಗೊಂಡ ವಿಶಿಷ್ಟ ಸಮ್ಮೇಳನವಾಗಿ ಜರುಗಲು ಅವಿರತ ಶ್ರಮಿಸಿದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಿಂತಕರು. ಸಮ್ಮೇಳನದ ಸಂದರ್ಭದಲ್ಲಿ ಅವರ ಜೊತೆ ನನಗೆ ೧ ತಿಂಗಳವರೆಗೆ ಸಮ್ಮೇಳನದ ಸ್ಮರಣ ಸಂಚಿಕೆಯ ಸಂಪಾದಕೀಯ ಮಂಡಳಿಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು.
ಈ ಸಂದರ್ಭದಲ್ಲಿ ಅವರ ವ್ಯಕ್ತಿತ್ವವನ್ನು, ಚಿಂತನೆಗಳನ್ನು, ನಾಡು, ನುಡಿಯ ಬಗ್ಗೆ ಅವರಿಗಿರುವ ಕಾಳಜಿಯನ್ನು ನೋಡಿ ತುಂಬಾ ಆಶ್ಚರ್ಯ ಹಾಗೂ ಹೆಮ್ಮೆ ಎನಿಸುತ್ತಿತ್ತು. ನನ್ನ ಸಂಪಾದಕೀಯ ಕಾರ್ಯವನ್ನು ಮತ್ತು ನನ್ನ ಬರಹಗಳನ್ನು ನೋಡಿ ತುಂಬಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
ಜೊತೆಗೆ ನನ್ನ ಯೋಗಕ್ಷೇಮ ವಿಚಾರಿಸುತ್ತಿದ್ದರು. ಇಂತಹ ಜನಾನುರಾಗಿ, ಮಾನವೀಯ ಸಂವೇದನೆಯ ರಾಜಕೀಯ ಮುತ್ಸದ್ದಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ನನ್ನ ಮನಸ್ಸು ತುಂಬಾ ಭಾವುಕತೆಗೆ ಒಳಗಾಗಿದೆ.
ನನ್ನ ಪ್ರೀತಿಯ ಹಿರಿಯ ರಾಜಕೀಯ ಮುತ್ಸದ್ದಿಗೆ, ನಾಡಿನ ಸಾಂಸ್ಕೃತಿಕ ರಾಯಭಾರಿಯ ಆತ್ಮಕ್ಕೆ ಚಿರಶಾಂತಿ ಕೊರುವೆ.
–ರಾಘವೇಂದ್ರ ಹಾರಣಗೇರಾ ಲೇಖಕರು ಶಹಾಪುರ.
ಮಾನ್ಯ ರಾಜಾ ಮದನ್ ಗೋಪಾಲ್ ನಾಯ್ಕ ರವರ
ನಿಧನದ ಸುದ್ಧಿ ಕೇಳಿ ತುಂಬಾ ಆಘಾತವಾಯ್ತು,ಅಂತಹ ಸಾಮಾಜಿಕ ಕಳಕಳಿಯ, ಸಾಹಿತ್ಯದ ರಾಯಭಾರಿ,ಸಾಂಸ್ಕೃತಿಕ ಸಂಘಟಕ ರಾಜಕಾರಣಿಯನ್ನು ಕಳೆದುಕೊಂಡ ಸಗರ ನಾಡಿನ ಸಮಸ್ತಅಭಿಮಾಣಿ ಬಳಗಕ್ಕೆ ಹಾಗೂ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಬೇಡುವೆ.
ಜ್ಯೋತಿ ನಾಯ್ಕ (ಯುವ ಸಾಹಿತಿ,ಶಹಾಪುರ)