ಪ್ರಮುಖ ಸುದ್ದಿಸರಣಿ

#ShaShock : ದೆಹಲಿಯಿಂದ ಸಚಿವರ ಪಟ್ಟಿ ಹಿಡಿದುಕೊಂಡೇ ಬರ್ತಾರಂತೆ ಸಿಎಂ!

ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡು ಹನ್ನೊಂದು ದಿನಗಳೇ ಕಳೆದಿವೆ. ಆದರೆ, ಸಚಿವ ಸಂಪುಟ ಮಾತ್ರ ರಚನೆ ಆಗಿಲ್ಲ. ರಾಜ್ಯದಲ್ಲಿ ಅವಸರದಲ್ಲಿ ಸಿಎಂ ಆಗಿರುವ ಬಿಎಸ್ ವೈ ಅವರ ಒನ್ ಮ್ಯಾನ್ ಶೋ ನಡೀತಿದೆ. ಈವರೆಗೆ ಸಚಿವ ಸಂಪುಟ ರಚನೆ ಆಗಿಲ್ಲ, ರಾಜ್ಯ ಸರ್ಕಾರವೇ ಇಲ್ಲವಾಗಿದ್ದು ಕೇವಲ ಐಎಎಸ್ , ಐಪಿಎಸ್ ಅಧಿಕಾರಿಗಳ ವರ್ಗಾವಣೆ ನಡೀತಿದೆ ಅಷ್ಟೇ ಎಂದು ವಿಪಕ್ಷದ ನಾಯಕರು ಕಿಡಿಕಾರುತ್ತಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಸಂಪುಟ ರಚನೆ ಸರ್ಕಸ್ ಶುರು ಮಾಡಿದ್ದಾರೆ. ಆದರೆ, ವರಿಷ್ಠರು ಇಷ್ಟು ದಿನಕಾಲ ಸಂಸತ್ ಕಲಾಪ ಹಾಗೂ ಆಪರೇಷನ್ ಕಾಶ್ಮೀರ ವಿಚಾರದಲ್ಲಿ ಫುಲ್ ಬಿಜಿ ಆಗಿದ್ದರು. ಇದೀಗ ಮತ್ತೆ ಯಡಿಯೂರಪ್ಪ ದೆಹಲಿಗೆ ತೆರಳಿದ್ದು ನೂತನ ಸಚಿವರ ಪಟ್ಟಿ ಹಿಡಿದುಕೊಂಡೇ ಬರಲು ನಿರ್ಧರಿಸಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದಾರೆ.

ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿನ ನೆರೆ ಪ್ರವಾಹದ ಸ್ಥಿತಿ ವಿವರಿಸುವುದು. ಅನರ್ಹ ಶಾಸಕರ ಬೇಡಿಕೆ, ಸಚಿವ ಸಂಪುಟ ರಚನೆ ವಿಳಂಬದ ಪರಿಣಾಮಗಳ ಬಗ್ಗೆ ಮಾಹಿತಿ ನೀಡುವುದು. ಆ ಮೂಲಕ ಶೀಘ್ರ ಸಚಿವ ಸಂಪುಟ ರಚನೆಗೆ ಒಪ್ಪಿಗೆ ಪಡೆದು ಬರಬೇಕೆಂದು ಬಿಎಸ್ ವೈ ಸಿದ್ಧವಾಗಿದ್ದಾರೆ. ಅಂತೆಯೇ ದೆಹಲಿಗೆ ತೆರಳುವ ಮುನ್ನ ಸಚಿವ ಸಂಪುಟ ಇದ್ದಾಗಲೇ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡೋಕಾಗೋದು. ವರಿಷ್ಠರ ಸೂಚನೆಗಾಗಿ ಕಾಯುತ್ತಿದ್ದೇನೆ, ಸೂಚನೆ ಬಂದು 24ಗಂಟೆಯಲ್ಲಿ ಸಂಪುಟ ರಚನೆ ಮಾಡುತ್ತೇನೆ ಎಂದು ಸಿಎಂ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಇಂದು ದೆಹಲಿಗೆ ತೆರಳಿ ಪ್ರಧಾನಿ ಸೇರಿದಂತೆ ಇತರೆ ಮಂತ್ರಿಗಳು ಹಾಗೂ ಪ್ರಮುಖ ನಾಯಕರನ್ನು ಬಿಎಸ್ ವೈ ಭೇಟಿ ಮಾಡಿದ್ದಾರೆ. ಆದರೆ, ಸಚಿವ ಸಂಪುಟ ರಚನೆ ಬಗ್ಗೆ ಅಮಿತ್ ಶಾ ಜತೆ ಚರ್ಚೆಗೆ ಅವಕಾಶ ಸಿಗದ ಕಾರಣ ಇಂದು ದೆಹಲಿಯಲ್ಲೇ ಉಳಿದುಕೊಂಡಿರುವ ಸಿಎಂ ನಾಳೆ ಶತಾಯಗತಾಯ ಅಮಿತ್ ಶಾ ಅವರನ್ನು ಭೇಟಿಯಾಗಿ ಸಚಿವರ ಪಟ್ಟಿಗೆ ಸೈ ಅನಿಸಿಕೊಂಡು ಬರಲು ಪ್ಲಾನ್ ಮಾಡಿದ್ದಾರೆ. ಯಡಿಯೂರಪ್ಪ ಅವರು ಅಂದುಕೊಂಡಂತೆ ಆದರೆ ಆಗಷ್ಟ್ 8 ಅಥವಾ 9ರಂದು ಕನಿಷ್ಠ 15ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಅಮಿತ್ ಶಾ ಶಾಕ್!

ಬಿಜೆಪಿ ವರಿಷ್ಠರು ಮಾತ್ರ ರಾಜ್ಯದಲ್ಲಿ 2008ರ ಬಿಜೆಪಿ ಆಡಳಿತದಲ್ಲಿ ನಡೆದ ಪ್ರಹಸನಗಳು ಪುನರ್ಘಟಿಸದಂತೆ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ. ಹಾಗಾಗಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ, ರಾಜ್ಯ ಉಸ್ತುವಾರಿ ಮುರುಳಿಧರ್ ರಾವ್ ಹಾಗೂ ಆಯ್ದ ಪ್ರಧಾನ ಕಾರ್ಯದರ್ಶಿಗಳಿಂದ ಸಚಿವ ಸ್ಥಾನಕ್ಕೆ ಸಮರ್ಥ ಶಾಸಕರ ಪಟ್ಟಿ ತರಿಸಿಕೊಂಡಿದ್ದಾರೆ. ಯಡಿಯೂರಪ್ಪ ಅವರ ಪಟ್ಟಿ ಅವಲೋಕಿಸಿದ ಬಳಿಕ ನೂತನ ಸಚಿವರ ಪಟ್ಟಿಯನ್ನು ನೀಡಲಿದ್ದಾರೆ. ಅದೇ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಕಾಯಿಸಿ ಕೊನೆಕ್ಷಣದಲ್ಲಿ ವರಿಷ್ಠರು ತಮ್ಮ ನಿರ್ಧಾರವನ್ನು ಬಿಎಸ್ ವೈ ಮುಂದಿಡಲು ತೀರ್ಮಾನಿಸಿದ್ದಾರೆ.

ಈಗಾಗಲೇ ಬಸವರಾಜ್ ಬೊಮ್ಮಾಯಿ, ಗೋವಿಂದ ಕಾರಜೋಳ, ಕರುಣಾಕರರೆಡ್ಡಿ, ಜಗದೀಶ್ ಶೆಟ್ಟರ್, ಆರ್.ಅಶೋಕ ಸೇರಿದಂತೆ ಅನೇಕ ಶಾಸಕರು ಮಂತ್ರಿಗಿರಿಗಾಗಿ ಕಸರತ್ತು ಆರಂಭಿಸಿದ್ದಾರೆ. ಜಾತಿ, ಪ್ರದೇಶವಾರು, ಹಿರಿತನ, ಸಂಘಟನೆ ಸೇರಿದಂತೆ ತಮ್ಮದೇ ಆದ ಲೆಕ್ಕಾಚಾರದಲ್ಲಿ ಮಂತ್ರಿ ಆಕಾಂಕ್ಷಿಗಳು ಪ್ರಯತ್ನದಲ್ಲಿ ತೊಡಗಿದ್ದಾರೆ. ಆದರೆ, ಅಮಿತ್ ಶಾ ಮತ್ತು ಮೋದಿ ಜೋಡಿ ಮಾತ್ರ ಕರ್ನಾಟಕ ಬಿಜೆಪಿಗೂ ಈಸಲ ಶಾಕ್ ನೀಡಲಿದೆ. ಕೊನೆ ಕ್ಷಣದವರೆಗೂ ಸಸ್ಪೆನ್ಸ್ ಕಾಪಾಡಿಕೊಂಡು ಶಾಕ್ ನೀಡುವ ರಾಜತಂತ್ರ ಮುಂದುವರೆಸಲಿದ್ದಾರೆ. ಹೀಗಾಗಿ, ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಈಸಲ ಯಾರೂ ಊಹಿಸದ ಮುಖಗಳಿಗೆ ಮಂತ್ರಿ ಭಾಗ್ಯ ಸಿಕ್ಕರೂ ಅಚ್ಚರಿ ಪಡಬೇಕಿಲ್ಲ ಎಂಬ ಮಾತು ಬಿಜೆಪಿ ವಲಯದಿಂದಲೇ ಕೇಳಿಬರುತ್ತಿದೆ.

Related Articles

Leave a Reply

Your email address will not be published. Required fields are marked *

Back to top button