ತುಂತುರು ಮಳೆಯಲಿ ಶಹಾಪುರ ಕೋಟೆ, ಕೊತ್ತಲ ಸೊಬಗು
ಕೈ ಬೀಸಿ ಕರೆಯುತ್ತಿದೆ, ಶಹಾಪುರ ಚಾರಣ
ಹಚ್ಚ ಹಸಿರು ಹೂ ಹುಣ್ಣುಗಳ ತೋರಣ
ಪ್ರಾಣಿ ಪಕ್ಷಿಗಳ ಕೂಗು ಇಂಪು ಕರಣ
ಕಣ್ಮನ ಸೆಳೆಯುವ ಬೆಟ್ಟ ಗುಡ್ಡಗಳ ಚಾರಣ
ರಾಜ ಮಹಾರಾಜರಾಳಿದ ಇತಿಹಾಸ ಹೂರಣ
ಬಂದು ನೋಡು ಸ್ವರ್ಗವೇ ಇಲ್ಲಿ ಅನಾವರಣ
ಕೋಟೆಗಳ ಕಣ್ತುಂಬಿ ನೋಡು ಜೀವನ ಪಾವನ
ದಿನಾ ಬೆಳಗ್ಗೆ ಎಂಟತ್ತು ಜನ ಶಿಕ್ಷಕರು ಸೇರಿ ಬೆಳಗಿನ ವಿಹಾರಕ್ಕೆ ಹೋಗುತ್ತಿದ್ದೆವು. ಎಂದಿನಂತೆ ನಿನ್ನೆ ಬೆಳಗ್ಗೆ ವಿಹಾರಕ್ಕೆ ಹೋದಾಗ. ನಾಳೆ ರವಿವಾರ ಎಲ್ಲಿಯಾದರೂ ಒಂದು ಕಡೆ ಪಿಕ್ನಿಕ್ ಹೋಗಲು ಯೋಚಿಸಿದೆವು. ಶಹಾಪುರ ಬೆಟ್ಟ ಹತ್ತಿ ಕೋಟೆ ನೋಡಿಕೋಂಡು ಮೇಲಗಿರಿಪರ್ವತಕ್ಕೆ ಹೋಗಿ ಬರುವುದಾಗಿ ತಿಳಿಸಿದರು ಶ್ರೀ ಶಂಭುಲಿಂಗ ಪಾಟೀಲ್ ಸರ್ ಹೇಳಿದ ಮಾತಿಗೆ ವಾಯುವಿಹಾರ ಸದಸ್ಯರೆಲ್ಲರೂ ಸರಿಯೆಂದು, ಊಟದ ವ್ಯವಸ್ಥೆಯ ಬಗ್ಗೆ ಯೋಚಿಸುತ್ತಿರುವಾಗಲೇ..
ಅಲ್ಲಿಯೇ ಪಕ್ಕದಲ್ಲಿದ್ದ ನಮ್ಮ ಶಿವನ್ನ ಗೌಡರು ತಮ್ಮ ಕಿಸೆಯಿಂದ ಮೊಬೈಲ್ ತೆಗೆದು ಕಾಲ್ ಮಾಡುತ್ತಾ. ನೂರು ರೊಟ್ಟಿ, ಮಸಾಲೆ ಅನ್ನ, ಸಸ್ಯಹಾರಿಗಳಿಗಾಗಿ ಅರ್ಧ ಕಿಲೋ ಶೇಂಗಾ ಹಿಂಡಿ, ಎರೆಡು ಮೂರು ತರಹದ ಬಾಜಿ, ಕಾಳು ಪಲ್ಯ, ದಾಲ ತಡಕಾ, ಶೇಂಗಾದ ಹೋಳಿಗೆ ಎರಡು ಲೀಟರ್ ಮೊಸರು. ಉಪ್ಪಿನಕಾಯಿ ಬಾಳೆಹಣ್ಣು ಹಾಗೂ ಬಳಸಿ ಬಿಸಾಡುವ ಊಟದ ತಟ್ಟೆ, ಪಾನ ಬೀಡಾ ಹಿಡಿದು ಕೈ ವರೆಸುವ ರದ್ದಿಯವರೆಗೆ ಎಲ್ಲಾ ಸಾಮಗ್ರಿಗಳನ್ನು ನಾಳಿನ ವ್ಯವಸ್ಥೆಗಾಗಿ ಎ ಪೋನನಲ್ಲೆ ಆರ್ಡರ್ ಮಾಡಿಬಿಟ್ಟರು.
ಮೂಕ ಪ್ರೇಕ್ಷಕರಾಗಿ ನಾವೆಲ್ಲರೂ ಅವರ ಮುಖವನ್ನೇ ನೋಡುತ್ತಿದ್ದೆವು. ಅಷ್ಟರಲ್ಲಿ ಮತ್ತೆ ಅವರು ಸರ್ ನಾಳೆ ವ್ಯವಸ್ಥೆಗೆ ಇಷ್ಟು ಸಾಕಲ್ವ.. ಮತ್ತೇನಾದರೂ ಬೇಕಾ ಹೇಳಿ, ಎಲ್ಲ ವ್ಯವಸ್ಥೆ ಮಾಡೋಣ ಎಂದು ನಗುತ್ತಲೇ ಹೇಳಿದರು. ನಾನು ಇಷ್ಟೆಲ್ಲ ವಸ್ತುಗಳನ್ನು ಒಂದೇ ಉಸಿರಿನಲ್ಲಿ ಪಟಪಟ ಹೇಳುತ್ತಿದ್ದನು ಕಂಡು ಸುಮ್ಮನೆ ಅವರ ಮುಖ ನೋಡುತ್ತಾ ನಿಂತುಬಿಟ್ಟಿದೆ.
ಮೊದಲೇ ಹೇಳಿಕೇಳಿ ಅವರು ಪೊಲೀಸರು ನೋಡಿ, ಇವೆಲ್ಲವೂ ಅವರಿಗೆ ಹೊಸದೇನೂ ಅಲ್ಲ. ಅವರು ಕೆಲಸದ ಮೇಲೆ ಇದ್ದಾಗ ಅನಿವಾರ್ಯ ಸಂದರ್ಭದಲ್ಲಿ ಇಂಥ ಎಷ್ಟು ಊಟಗಳನ್ನು ಅವರು ಆರ್ಡರ್ ಮಾಡಿರಬಹುದು ಎಂದು ಹಾಸ್ಯಾ ಮಾಡಿದೆ. ಎಲ್ಲರೂ ನಾಳಿನ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ ವಾಯುವಿಹಾರ ಮುಗಿಸಿ ಮನೆ ಕಡೆಗೆ ಹೊರಟೆವು.
ನಾಳೆ ಬೆಳಗ್ಗೆ ಪರ್ವತಕ್ಕೆ ಹೋಗುವ ಯೋಜನೆಯಲ್ಲಿ ನಾನು ಬೇಗ ಮಲಗಿದೆ ಬೆಳಗ್ಗೆ ಎದ್ದು, ವಿಹಾರಕ್ಕೆ ಹೋಗಲೆಂದು ಬಾಗಿಲು ತೆಗೆದಾಗ ಹೊರಗಡೆ ಜಿಟಿಜಿಟಿ ಮಳೆ ಸುರಿಯುತ್ತಿತ್ತು. ಛೇ…! ಈ ಸಮಯದಲ್ಲಿ ಈ ಸಮಯದಲ್ಲಿ ಈ ಮಳೆ ಬರಬೇಕೆ ಎಂದುಕೊಂಡು ಒಳ ಬಂದೆ. ಅಷ್ಟರಲ್ಲಿಯೇ ಶ್ರೀ ಶಂಭುಲಿಂಗ ಪಾಟೀಲ್ ಸರ್ ಆಗಲೇ ಬೆಳಗಿನ ವಿಹಾರಕ್ಕೆ ಹೋಗುವುದು ಬೇಡ. ಮಳೆ ನಿಂತ ಮೇಲೆ ಶಹಾಪುರ ಬೆಟ್ಟಕ್ಕೆ ಹೋಗುವ ಯೋಚನೆ ಮಾಡೋಣವೆಂದು ಸಂದೇಶ ಹಾಕಿದ್ದರು.
ಬೆಟ್ಟ ಹತ್ತುವ ಖುಷಿಯಲ್ಲಿದ್ದ ನನಗೆ ಈ ತುಂತುರು ಮಳೆ ತಣ್ಣೀರೆರಚಿತು ಅನಿಸಿತು. ಮತ್ತೆ ಸ್ವಲ್ಪ ಸಮಯ ಬಿಟ್ಟು ನಾನು ಪಾಟೀಲ್ ಸರ್ ಗೆ ಕರೆ ಮಾಡಿ. ಪರ್ವತಾರೋಹಣ ಮಾಡೋದಕ್ಕೆ ಇದೇ ಸರಿಯಾದ ಸಮಯ. ತುಂತುರು ಮಳೆಯಲ್ಲಿ ಪ್ರಕೃತಿಯ ಸೌಂದರ್ಯ ತುಂಬಾ ಚೆನ್ನಾಗಿ ಕಾಣಿಸುತ್ತದೆ ಸರ್ ಎಂದೆ. ಅವರು ಕೂಡ ಅದೇ ಯೋಚನೆ ಮಾಡಿದರೆ ಏನು ಅನ್ಸುತ್ತೆ ಆಯಿತು ಎಂದು, ಎಲ್ಲರಿಗೂ ತಿಳಿಸಲು ಹೇಳಿದರು.
ನಾನು ತರಾತುರಿಯಲ್ಲಿ ತಯಾರಾಗ ಪಕ್ಕದ ಶಾಲೆಯ ಗೇಟ್ ಬಳಿಗೆ ಬರುವಷ್ಟರಲ್ಲಿ ಅಶೋಕ ಸರ್ ಕಾರು ನನಗಾಗಿ ಕಾಯುತ್ತಾ ರಸ್ತೆಯ ಮೇಲೆ ನಿಂತಿತ್ತು. ನಾನು ಬರುವುದಷ್ಟೇ ತಡ ನನ್ನನ್ನು ಕೂಡಿಸಿಕೊಂಡು ಕಾರು ಶಹಾಪುರ ಬೆಟ್ಟದ ಕಡೆಗೆ ಹೊರಟೆ ಬಿಟ್ಟಿತು.
ತಿರುವು-ಮುರುವು ಘಟ್ಟ ಪ್ರದೇಶದ ರಸ್ತೆಯಲ್ಲಿ ಬೆಟ್ಟದಿಂದ ಜುಳುಜುಳು ಹರಿಯುವ ನೀರಿನ ಸುಮಧುರ ನಿನಾದದಲ್ಲಿ ಸಂಚರಿಸಿದಂತೆ. ಜಿಟಿಜಿಟಿ ಮಳೆಗೆ ಶಹಾಪುರ ಬೆಟ್ಟ ಮಲೆನಾಡಿನ ಅನುಭವ ನೀಡುತಿತ್ತು. ನಮ್ಮ ಕಾರುಗಳು ಸಿದ್ದಲಿಂಗೇಶ್ವರ ದೇವಸ್ಥಾನದ ಹತ್ತಿರ ನಿಲ್ಲಿಸಿ, ದರ್ಶನ ಪಡೆದು. ನಾನು ಪಾಟೀಲ್ ಸರ್ ಆನಂದ, ಅಶೋಕ, ಚಂದ್ರಶೇಖರ, ಪ್ರಕಾಶ, ಭಗವಂತ್ರಾಯ ಪ್ರವೀಣ, ರಾಜು ಹಾಗೂ ಆರಕ್ಷಕರಾದ ಶಿವನಗೌಡ್ರು ಸೇರಿದಂತೆ ಒಟ್ಟು 15 ಜನರ ನಮ್ಮ ತಂಡ, ಬೆಟ್ಟ ಹತ್ತುವುದಕ್ಕೆ ಶುರುಮಾಡಿತು.
ದಾರಿ ಮಧ್ಯ ಮಧ್ಯೆ ಈ ಪೌರಾಣಿಕ ಕೋಟೆಕೊತ್ತಲಗಳ ಇತಿಹಾಸ ಕೆದಕುತ್ತ ಏರುದಾರಿಯಲ್ಲಿ ಬಂಡೆಯ ಮೇಲೆ ಸಾಗತೊಡಗಿದೇವು.
ಶಹಾಪುರ ಬೆಟ್ಟದ ಇತಿಹಾಸವೇ ರೋಚಕವಾಗಿದೆ ಮಹಾಬಲಶಾಲಿಯಾಗಿದ್ದ ಸಗರ ಚಕ್ರವರ್ತಿ. ಈ ಕೋಟೆಯನ್ನು ಕಟ್ಟಿಸಿದನಂತೆ. ವಿಜಯನಗರದ ಅರಸರು ಇದಕ್ಕೊಂದು ಹೊಸ ರೂಪ ಕೊಟ್ಟಿದ್ದರಂತೆ. ಮುಂದೆ ಮೊಗಲ್ ಚಕ್ರವರ್ತಿಯ ದಾಳಿಗೆ ಗೊತ್ತಾಯಿತಂತೆ, ಹೀಗೆ ಹಲವಾರು ವಿಚಾರಗಳು ಒಬ್ಬೊಬ್ಬರು ಬಾಯಿಂದ ಹೊರಬರತೊಡಗಿದವು.
ಶಿಥಿಲವಾಗಿ ಹಾಳುಬಿದ್ದ ಕೋಟೆಯನ್ನು ಮತ್ತೆ ವಿಜಯಪುರದ ಬಾದ್ಶಾಹ ಪುನರ್ನಿರ್ಮಿಸಲಾಯಿತು ಎಂದು ಮತ್ತೊಬ್ಬ ಸ್ನೇಹಿತ ಶಿಕ್ಷಕರು ಹೇಳಿದರು.
ಕೋಟಿಯಲ್ಲಿ ಕಂಡುಬರುವ ಅನೇಕ ದೇವಸ್ಥಾನಗಳು ಮಹಾಭಾರತದ ಹೆಸರಿನ ಕೊಳಗಳು ಬಾವಿ ಮತ್ತು ಸ್ಮಾರಕಗಳು ಇತಿಹಾಸದ ಮಾಹಿತಿಗೆ ಹಿಡಿದ ಕನ್ನಡಿಯಂತಿವೆ. ಕೋಟಿ ಸಮೀಪಕ್ಕೆ ಹೋದಂತೆ ವಿಶಾಲ ಬಯಲು ಮುರಿದುಬಿದ್ದ ಕೋಟೆಯ ಗೋಡೆಗಳು ದೇವಸ್ಥಾನಗಳನ್ನುಸುಂದರ ದೃಶ್ಯ ಸೇರೆ ಹಿಡಿಯಲು ತುಂತುರು ಮಳೆಯಲ್ಲಿ ನಮ್ಮೆಲ್ಲರ ಮೊಬೈಲ್ ಕ್ಯಾಮೆರಾಗಳು ಕಾಯುತ್ತಿದ್ದವು.
ಎಲ್ಲರೂ ಚಿಕ್ಕಮಕ್ಕಳಂತೆ ಕೂಗುತ್ತಾ, ಚಿರುತ, ನಕ್ಕು ನಲಿಯುತ್ತ, ಫೋಟೋ ಕ್ಲಿಕ್ಕಿಸಿಕೊಂಡು ಪಾಳು ಬಿದ್ದ ಕೋಟೆಕೊತ್ತಲಗಳ ಮೇಲೇರಿ ನಿಂತು ವಿಹಂಗಮ ನೋಟದಲ್ಲಿ ಶಹಪುರ ಪಟ್ಟಣವನ್ನು ವೀಕ್ಷಿಸುವಾಗ ಆ ಬೆಟ್ಟದ ಮೇಲೆ ವರ್ಷದಲ್ಲಿ ಮೂರು ಬಾರಿ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯ ದಿನಾಚರಣೆ ಕರ್ನಾಟಕ ವಿಮೋಚನಾ ದಿನಾಚರಣೆಯಂದು, ಧ್ವಜಾರೋಹಣ ಮಾಡುವದಾಗಿ ಶಿವನಗೌಡ್ರು ತಿಳಿಸಿತ್ತಾ ಎತ್ತರದ ಭಾಗವನ್ನು ತೋರಿಸಿದರು.
ಅದರ ಮೇಲೆ ಹತ್ತಿ ಎಲ್ಲರೂ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮ ಪಟ್ಟೆವು. ಅಷ್ಟೊತ್ತಿಗೆ ಮಳೆ ಕಡಿಮೆಯಾಗಿ ಸ್ವಲ್ಪಮಟ್ಟಿಗೆ ಬಿಸಿಲು ಬಿದ್ದಿತು. ಜಿಟಿಜಿಟಿ ಮಳೆಗೆ ತೊಯ್ದು ಪ್ರಕೃತಿ ಸೂರ್ಯನ ಕಿರಣಗಳಿಂದ ಕೋಟೆ ಮತ್ತಷ್ಟು ಕಣ್ಮನ ಸೆಳೆಯ ತೊಡಗಿತು. ಸೂರ್ಯನೆದುರಿಗೆ ಮೈಯೊಡ್ಡಿ ನಿಂತು ನಮ್ಮ ಫೋನ್ ಕ್ಯಾಮೆರಾಕ್ಕೆ ಹಬ್ಬವಾದೆವು.
ಬಹುಮನಿ ಅರಸರ ಕಾಲದಲ್ಲಿ ಸಗರಗಡ ಎಂದು ಎಂದು ಹೆಸರಾದ ಶಹಪುರ ಇಲ್ಲಿಗೆ ಸೆರೆಯಾಳುಗಳನ್ನು ತಂದು ಇಡುತ್ತಿದ್ದರಂತೆ. ಬಹುಮನಿ ಸಾಮ್ರಾಜ್ಯ ಒಡೆದ ಹೊದ ನಂತರ, ಈ ಕೋಟೆಯು ವಿಜಯಪುರ ಅರಸರ ಒಡೆತನಕ್ಕೆ ಸೇರಿತಂತೆ. ಕೃಷ್ಣದೇವರಾಯನು ಕೂಡ ಇಲ್ಲಿಗೆ ಬಂದು ಯುದ್ಧ ಮಾಡಿದ್ದನಂತೆ. ಇದಕ್ಕೆ ಅನೇಕ ಕುರುಹುಗಳಿವೆಯಂತೆ ಹೀಗೆ ಒಬ್ಬರ ಬಾಯಿಂದ ಒದೊಂದು ಇತಿಹಾಸ ನೆನಪಿಸುತ್ತಾ. ತಾವರೆಕೆರೆಯ ಮಾರ್ಗವಾಗಿ ಮೇಲುಪರ್ವತದ ಕಡೆಗೆ ಹೊರಟೆವು.
ನೆಲಮಟ್ಟದಿಂದ 600 ಅಡಿ ಎತ್ತರದಲ್ಲಿರುವ ಈ ಕೋಟೆ ಸುಮಾರು 800 ವರ್ಷಗಳ ಇತಿಹಾಸ ಹೊಂದಿದೆ. ಇದು ಎಂಟು ಸುತ್ತಿನಕೋಟೆ ಹೊಂದಿದ್ದು. ಈ ಬೆಟ್ಟದಲ್ಲಿ ಚರಬಸವೇಶ್ವರ ಗದ್ದಿಗೆ ಸಿದ್ದಲಿಂಗೇಶ್ವರ ದೇವಸ್ಥಾನ, ಮೌನೇಶ್ವರ ಅನುಷ್ಠಾನ ಸ್ಥಳ, ಗವಿ ರಂಗನಾಥ ದೇವಸ್ಥಾನ, ಪಾಂಡವರ ಬಂಡಿ, ಭೀಮನ ಗವಿ, ದಿಗ್ಗಿ ಸಂಗಮನಾಥ ದೇವಸ್ಥಾನ. ಬುದ್ಧ ಮಲಗಿದ ದೃಶ್ಯ ಹೀಗೆ ಅನೇಕ ಪ್ರವಾಸ ತಾಣವಾಗಿದೆ.
ಹೀಗೆ ಅನೇಕ ಮಾತನಾಡುತ್ತಾ ಹೋಗುವಷ್ಟರಲ್ಲಿ ಮೇಲಗಿರಿ ಪರ್ವತ ಬಂದೇಬಿಟ್ಟಿತು. ದೇವರ ದರ್ಶನ ಪಡೆದ ನಂತರ ಪ್ರಸಾದ ಸ್ವೀಕರಿಸಿದಾಗ, ಬೆಳಗ್ಗೆಯಿಂದ ಟ್ರಕ್ಕಿಂಗ್ ಮಾಡಿ ಸುಸ್ತಾಗಿದ ದೇಹಕ್ಕೆ ಮರು ಜೀವ ಬಂದಂತಾಯ್ತು. ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತು. ಲಿಂಗಗಳ ದರ್ಶನ ಮಾಡಿಕೊಂಡು ಮತ್ತೆ ಚರಬಸವೇಶ್ವರ ಗದ್ದೆ ಕಡೆಗೆ ವಾಪಸ ಬರತೊಡಗಿದವು. ಇದುವರೆಗೂ ದೂರದಿಂದ ನೋಡಿದ ಶಹಾಪುರ ಕೋಟೆ ತನ್ನ ಉದರದಲ್ಲಿ ಎಷ್ಟೆಲ್ಲಾ ಕುತೂಹಲಕಾರಿ ಇತಿಹಾಸ, ವಿಸ್ಮಯ ಹಾಗೂ ಪ್ರಕೃತಿ ಸೌಂದರ್ಯವನ್ನು ತುಂಬಿಕೊಂಡಿದೆ ಅನಿಸಿತು.
ಅಲ್ಲಿ ಇಲ್ಲಿ ಮುರಿದುಬಿದ್ದ ಕೋಟೆಗಳು, ಬೆಟ್ಟದಲ್ಲಿ ಹೂತುಹೋದ ತೋಪುಗಳು ಕಂಡು ಇಂತಹ ಪುರಾತನವಾದ ಕೋಟಿಗೆ ಸರಕಾರದ ರಕ್ಷಣೆ ಅವಶ್ಯವಾಗಿದೆ, ಸರಕಾರದಿಂದ ಯಾವುದೇ ರಕ್ಷಣೆ ಇಲ್ಲದೆ ಹೋದರೆ ಅನೈತಿಕ ಚಟುವಟಿಕೆಗಳ ತಾಣವಾಗಬಹುದೆಂದು ತಿಳಿದು ಮನಸ್ಸು ಗಾಸಿಯಾಯಿತು.
ಪೂರ್ವಯೋಜಿತದಂತೆ ದಾರಿಯ ಮಧ್ಯದಲ್ಲಿ ಶಿವನಗೌಡರ ತಂಡವು ಮಾಡಿಕೊಂಡು ನಾನಾ ಬಗೆಯ ತಿಂಡಿ ತಿನಿಸುಗಳನ್ನು ನಮಗಾಗಿ ಸಿದ್ಧಪಡಿಸಿಕೊಂಡು ಕಾಯುತ್ತಿತ್ತು.
ಕೈಕಾಲು ತೊಳೆದುಕೊಂಡು ವಿಶಾಲವಾದ ಬಂಡೆ ಮೇಲೆ ಊಟಕ್ಕೆ ಕುಳಿತೆವು. ನಾನಾ ಬಗೆಯ ಮೃಷ್ಟಾನ್ನ ಭೋಜನ ಪ್ರೀತಿಯಿಂದ ಬಡಿಸುತಿತ್ತು ಶಿವನಗೌಡರ ತಂಡ. ಏನು ತಿನ್ನಲಿ, ಏನು ಬಿಡಲಿ, ಎನ್ನುವಷ್ಟು ಪದಾರ್ಥಗಳು ತಟ್ಟೆಯಲ್ಲಿ ಬಿಡಿಸಿದರು. ಬೆಟ್ಟದಲ್ಲಿ ತಿರುಗಾಡಿ ಸುಸ್ತಾದ ನಮಗೆ. ಏನು ಸ್ವಲ್ಪ ಉಳಿಸಿದಂತೆ ಎಲ್ಲರೂ ಊಟ ಮಾಡಿದೇವು. ಮೇಲೆ ಪಾನ ಬೀಡ ತಿಂದು ಮತ್ತೆ ಚಾರಣ ಕುರಿತು ಮೆಲಕು ಹಾಕುತ್ತಾ ನಮ್ಮ ಶಾಲೆಯ ಕ್ವಾಟರ್ಸ್ ಕಡೆಗೆ ಮರಳಿದೆವು.
********
ಹವ್ಯಾಸಿ ಬರಹಗಾರರು.
–ಬಸವರಾಜ ಭೂತಿ. ಶಿಕ್ಷಕರು.
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಶಹಾಪುರ
ಮೋ. ನಂ. 9900804567