ಸಿಎಂ ಸಿದ್ಧರಾಮಯ್ಯ ಯಾವ ಲಿಂಗ? ಆಚಾರವಿಲ್ಲದ ನಾಲಿಗೆ…
ನೀಚ ಬುದ್ಧಿಯ ಬಿಡು ನಾಲಿಗೆ
ಚಾಚಿಕೊಂಡಿರುವಂತ ನಾಲಿಗೆ
ಬಿಜೆಪಿಯ ಹಿರಿಯ ನಾಯಕ, ವಿಧಾನ ಪರಿಷತ್ತಿನ ವಿಪಕ್ಷ ನಾಯಕರಾಗಿರುವ ಕೆ.ಎಸ್.ಈಶ್ವರಪ್ಪನವರಿಗಂತೂ ಅದೇನಾಗಿದೆಯೋ ಗೊತ್ತಿಲ್ಲ. ಕೆಲವೊಮ್ಮೆ ಅವರು ಸಾರ್ವಜನಿಕ ಸಭೆಗಳಲ್ಲಿ , ಮಾಧ್ಯಮಗಳ ಮುಂದೆ ಆಡುವ ಮಾತುಗಳನ್ನು ಕೇಳಿದರೆ ನಿಜಕ್ಕೂ ನಾಚಿಕೆಗೇಡು ಅನ್ನಿಸದಿರದು. ‘ನನ್ನ ಮೈಯಲ್ಲಿ ಭಕ್ತ ಕನಕದಾಸರ ರಕ್ತ ಹರಿಯುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮೈಯಲ್ಲಿ ಟಿಪ್ಪು ರಕ್ತ ಹರಿಯುತ್ತಿದೆ’ ಎಂಬ ಹೇಳಿಕೆ ನಿಜಕ್ಕೂ ಅವರ ಮನೋ ವಿಕೃತಿಯನ್ನು ತೋರುತ್ತದೆ.
ಅದು ಅವರ ವಿಕೃತಿ ಬಿಡಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಾದರೂ ಸೈಲೆಂಟ್ ಆಗುವ ಮೂಲಕ ಪ್ರಬುದ್ಧತೆಯನ್ನು ಮೆರೆಯಬಹುದಿತ್ತು. ಆದರೆ, ಸಿದ್ಧಾರಾಮಯ್ಯ ಅವರು ‘ನನ್ನ ಮೈಯಲ್ಲಿ ಮನುಷ್ಯ ರಕ್ತ ಹರಿಯುತ್ತಿದೆ’ ಎಂಬ ಉತ್ತಮ ಪ್ರತಿಕ್ರಿಯೆಯನ್ನೇನೋ ನೀಡಿದರಾದ್ರೂ ತಿರುಗೇಟು ನೀಡು ಭರದಲ್ಲಿ ‘ಈಶ್ವರಪ್ಪ ಮೈಯಲ್ಲಿ ರಾಕ್ಷಸ ರಕ್ತ ಹರಿಯುತ್ತಿದೆ’ ಎಂದು ಬಿಟ್ಟರು. ಆ ಮೂಲಕ ನಾನೇನು ಕಮ್ಮಿ ಇಲ್ಲ ಎಂಬುದನ್ನು ತಾವೇ ಹೇಳಿಕೊಂಡರು.
ಇನ್ನು ಇಂದು ಚಿತ್ರದುರ್ಗ ನಗರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿದ್ದ ವಿರೋಧ ಪಕ್ಷದ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ. ‘ಸಿಎಂ ಸಿದ್ಧರಾಮಯ್ಯ ನಾಯಿ ಬಾಲ ಅಲಗಾಡಿಸಲು ನಾಲ್ಕೈದು ತಿಂಗಳು ಮಾತ್ರ ಬಾಕಿ ಇದೆ. ಸಚಿವ ಹೆಚ್.ಆಂಜನೇಯ ಸಿದ್ಧರಾಮಯ್ಯ ಬಾಲ ಹಿಡಿದು ಹೊರಟಿದ್ದಾನೆ. ಹಿಂದೂ ಕಾರ್ಯಕರ್ತ ಪ್ರಶಾಂತ ಪೂಜಾರಿ ಕೊಲೆ ಮಾಡಿದವರನ್ನು ಬಂಧಿಸುವ ಬದಲು ಸಿಎಂ ಕೋಮುವಾದಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆಂದರು. ಅದರ ಬದಲು ಕೊಲೆಗಡುಕರನ್ನು ಜೈಲಿಗೆ ಕಳುಹಿಸಿದ್ದರೆ ಅವರನ್ನು ಗಂಡು ಅನ್ನುತ್ತಿದ್ದೆ. ಈಗ ಸಿದ್ಧರಾಮಯ್ಯ ಅವರನ್ನು ಗಂಡು ಅನ್ನಬೇಕೋ ಹೆಣ್ಣು ಅನ್ನಬೇಕೋ’ ಎನ್ನುವ ಮೂಲಕ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇನ್ನು ಈಶ್ವರಪ್ಪ ಹೇಳಿಕೆಗೆ ಸಿಎಂ ಸಿದ್ಧರಾಮಯ್ಯ ಮತ್ತಿನ್ನೇನು ಪ್ರತಿಕ್ರಿಯೆ ನೀಡುತ್ತಾರೋ ಗೊತ್ತಿಲ್ಲ.
ಇದು ಇವರಿಬ್ಬರು ರಾಜಕೀಯ ನಾಯಕರ ಕಥೆ ಮಾತ್ರ ಅಲ್ಲ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಸಚಿವ ಹೆಚ್.ಆಂಜನೇಯ ಸೇರಿದಂತೆ ಇತರೆ ನಾಯಕರುಗಳ ಹೇಳಿಕೆಗಳು ಮಿತಿಮೀರಿವೆ. ಖಾಸಗಿ ವೈದ್ಯರ ಮುಷ್ಕರದ ವೇಳೆ ರಾಜಕೀಯ ನಾಯಕರು ನಡೆದುಕೊಂಡ ರೀತಿ ಇಡೀ ರಾಜ್ಯಕ್ಕೆ ಗೊತ್ತಿದೆ. ಇನ್ನು ಚುನಾವಣೆ ಸಮೀಪಿಸಿದಂತೆಲ್ಲ ರಾಜಕಾರಣಿಗಳ ಆಟಾಟೋಪ ಹೆಚ್ಚಾಗುತ್ತದೆಯೇ ಹೊರತು ಕಡಿಮೆ ಆಗುವ ಲಕ್ಷಣವಿಲ್ಲ. ರಂಗಿನ ಭಾಷಣ ಮಾಡೋ ಮೂಲಕ ಜನರ ಚಪ್ಪಾಳೆ ಗಿಟ್ಟಿಸುವುದು. ಜನ ಕೇಕೆ ಹಾಕಿ ಪ್ರಚೋದನೆಗೆ ಒಳಗಾಗುವಂತೆ ಮಾತನಾಡುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೇ ರಾಜಕೀಯ ನಾಯಕರ ಉದ್ದೇಶವಾಗುತ್ತಿದೆ.
ಇನ್ನಾದರೂ ಪ್ರಗ್ನಾವಂತ ನಾಗರೀಕರು ಹರಕುಬಾಯಿಯ ನಾಯಕರ ನೀಚ ನಾಲಿಗೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚಿಂತಿಸಬೇಕಿದೆ. ಒಣ ಬಾಷಣದಿಂದಾಗಿ, ಒಬ್ಬರ ಮೇಲೊಬ್ಬರು ಗೂಬೆ ಕೂರಿಸುವುದರಿಂದ ನಮಗೇನು ಲಾಭ. ನಾಡಿನ ಅಭಿವೃದ್ಧಿಗೆ , ನಮ್ಮ ಅಭಿವೃದ್ಧಿಗೆ ನೀವೇನು ಮಾಡಿದ್ದೀರಿ ಮೊದಲು ಹೇಳಿ ಎಂಬ ಪ್ರಶ್ನೆಯನ್ನು ಕಾಲರ್ ಹಿಡಿದು ಕೇಳಬೇಕಿದೆ. ಆ ಮೂಲಕ ರಾಜಕಾರಣ ಎಂದರೆ ಬರೀ ಭಾಷಣ ಅಲ್ಲ, ಜನರ ಸೇವೆ ಎಂಬುದನ್ನು ಮಾನಗೇಡಿ ರಾಜಕಾರಣಿಗಳಿಗೆ ಅರ್ಥಮಾಡಿಸಬೇಕಿದೆ.
– ಮಲ್ಲಿಕಾರ್ಜುನ್ ಮುದನೂರ್