ನೋಡಬನ್ನಿ ಗುರು-ಶಿಷ್ಯ ಪರಂಪರೆಗೆ ಹೊಸ ಭಾಷ್ಯೆ ಬರೆದ ಕಲಬುರಗಿ ಶರಣರ ಜಾತ್ರೆ
-ಮಲ್ಲಿಕಾರ್ಜುನ ಮುದನೂರ್
1746 ರಿಂದ 1822 ರ ಕಾಲಘಟ್ಟದಲ್ಲಿ ಶರಣ ತತ್ವ ಪ್ರಚಾರ ಕಾರ್ಯ ಕೈಗೊಂಡಿದ್ದವರು ಶರಣ ಬಸವೇಶ್ವರರು. ಕಲಬುರಗಿ ಜಿಲ್ಲೆ ಜೇವರಗಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದ ಶರಣಬಸವೇಶ್ವರರು ಕಲಬುರಗಿಯನ್ನೇ ತಮ್ಮ ಧಾರ್ಮಿಕ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದರು. ಶರಣಬಸವೇಶ್ವರರನ್ನು ಗುರುವಾಗಿ ಸ್ವೀಕರಿಸಿದ ಕಲಬುರಗಿಯ ದೊಡ್ಡಪ್ಪ ಶರಣರು ಗುರುವಿನ ಸಮನಾಗಿ ಸಾಧನೆ ಮಾಡಿದವರು. ಗುರು ಶಿಷ್ಯ ಪರಂಪರೆಗೆ ಹೊಸ ಭಾಷ್ಯೆ ಬರೆದವರು ಶರಣಬಸವೇಶ್ವರರು ಹಾಗೂ ದೊಡ್ಡಪ್ಪ ಶರಣರು.
ಶರಣಬಸವೇಶ್ವರರು ಶರಣ ತತ್ವ ಬೋಧನೆ ಮೂಲಕ ಜನ ಜಾಗೃತಿ ಮೂಡಿಸಿದರು. ತಮ್ಮದೇ ಆದ ಶಕ್ತಿ ಬಳಸಿ ನೊಂದವರ ಕಣ್ಣೀರೊರೆಸಿದರು. ಮಾರ್ಗೋಪಾಯಗಳನ್ನು ಸೂಚಿಸಿ ಜನ ಜೀವನ ಪಾವನ ಗೊಳಿಸಿದರು. ದಾಸೋಹ ಪರಂಪರೆಯನ್ನು ಹುಟ್ಟು ಹಾಕುವ ಮೂಲಕ ಮಹಾದಾಸೋಹಿ ಎಂದು ಕರೆಸಿಕೊಂಡರು. ಅನೇಕ ಸಂದರ್ಭದಗಳಲ್ಲಿ ಪವಾಡಗಳನ್ನು ಸೃಷ್ಠಿಸಿ ದೈವತ್ವಕ್ಕೇರಿದ ಶರಣ ಬಸವೇಶ್ವರರು 1822ರ ಮಾರ್ಚ್ 11ರಂದು ಲಿಂಗೈಕ್ಯರಾದರು.
ಗುರು ಶಿಷ್ಯರು ಕಾಲವಾದ ನಂತರ ಈಗಿನ ಶರಣಬಸವೇಶ್ವರ ದೇಗುಲ ನಿರ್ಮಾಣವಾಯಿತು. ವಿಶೇಷ ಅಂದರೆ ದೇಗುಲದ ಗರ್ಭಗುಡಿಯಲ್ಲಿ ಗುರು ಮತ್ತು ಶಿಷ್ಯರಿಬ್ಬರ ಒಂದೇ ಮುಖಭಾವದ ಜೋಡಿ ಬೆಳ್ಳಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಗುರು ಶಿಷ್ಯರನ್ನು ಆರಾಧಿಸುವ ವಿಶಿಷ್ಟ ಭಕ್ತಿ ಕೇಂದ್ರವಾಗಿ ಶರಣ ಬಸವೇಶ್ವರ ದೇಗುಲ ವಿಶ್ವದ ಗಮನ ಸೆಳೆದಿದೆ.
ವಿಶಿಷ್ಟವಾದ ಕಪ್ಪುಶಿಲೆಯ ಶರಣಬಸವೇಶ್ವರ ದೇಗುಲದಲ್ಲಿ ವಿಶಾಲವಾದ ಸಭಾ ಮಂಟಪವಿದೆ, ಗರ್ಭಗುಡಿಗೆ ಪ್ರದಕ್ಷಿಣಾ ಪಥವಿದೆ. ಅರೆ ಕಂಬ, ಬಿಡ ಕಂಬ, ಜೋಡಿ ಕಂಬ ಹಾಗೂ 36 ಕಮಾನುಗಳನ್ನು ಬಳಸಿ ಮಂದಿರ ನಿರ್ಮಿಸಲಾಗಿದೆ. ಅಪರೂಪದ ಹೂ ಬಳ್ಳಿಗಳ ಶಿಲ್ಪಕಲೆ, ಚಂದದ ಛಾವಣಿ ಕಣ್ಮನ ಸೆಳೆಯುತ್ತದೆ. ದೇಗುಲದ ಮುಂಭಾಗದಲ್ಲಿ ಮನಮೋಹಕ ನಂದಿ ವಿಗ್ರಹ, ಉದ್ಯಾನವನವಿದೆ.
ಮಾರ್ಚ್ 06ಕ್ಕೆ ರಥೋತ್ಸವ
ಮಹಾದಾಸೋಹಿ ಶರಣಬಸವೇಶ್ವರರು ಲಿಂಗೈಕ್ಯರಾದ ದಿನದಂದು ಪ್ರತಿವರ್ಷಕ್ಕೊಮ್ಮೆ ಜಾತ್ರೆ, ಉತ್ಸವ ನಡೆಯುತ್ತದೆ. ಇದೇ ಮಾರ್ಚ್ 06ರಂದು ಕಲಬುರಗಿಯ ದೇಗುಲದ ಆವರಣದಲ್ಲಿ ರಥೋತ್ಸವ ನಡೆಯಲಿದ್ದು ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. ಸುಮಾರು 15 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಮೊದಲ ದಿನ ಅಡ್ಡಪಲ್ಲಕಿ ಉತ್ಸವ ನಡೆಯುತ್ತದೆ. ಈ ವೇಳೆ ಶರಣಬಸವೇಶ್ವರರ ದಿವ್ಯ ಬಿಂಬಗಳಿರುವ ಅವಳಿ ವಿಗ್ರಹಗಳನ್ನು ಅಡ್ಡಪಲ್ಲಕಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ.
ಸಾಂಸ್ಕೃತಿಕ ವೈಭವ
ಜಾತ್ರೆ ವೇಳೆ ನಂದಿಕೋಲು ಕುಣಿತ, ಡೊಳ್ಳು ಕುಣಿತ, ಜಾನಪದ ಕಲಾ ತಂಡಗಳ ಪ್ರದರ್ಶನ ಹಾಗೂ ಭಜನೆ, ಕೀರ್ತನೆ ನಡೆಯುತ್ತದೆ. ಅಡ್ಡಪಲ್ಲಕಿ ಮೂಲಕ ದೇವಸ್ಥಾನದ ಸುತ್ತ 5 ಸುತ್ತುಗಳನ್ನು ಹಾಕಲಾಗುತ್ತದೆ. ಎರಡನೇ ದಿನ ಶರಣಬಸವೇಶ್ವರರ ರಥೋತ್ಸವ ನಡೆಯುತ್ತದೆ. ಶರಣಬಸವೇಶ್ವರ ಸಂಸ್ಥಾನದ ಪೀಠಾದಿಪತಿಗಳು ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡುತ್ತಾರೆ. ಭಕ್ತರು ಹೂವು, ಬಾಳೆಹಣ್ಣುಗಳನ್ನು ಆರಾಧ್ಯ ದೇವರ ತೇರಿನ ಮೇಲೆಸೆದು ಸಂಭ್ರಮಿಸುತ್ತಾರೆ. ಭಕ್ತಿಯ ನಮನ ಸಲ್ಲಿಸಿ ಮಹಾದಾಸೋಹಿಯ ತತ್ವ ಸಿದ್ಧಾಂತ ನೆನೆದು ಪುಳಕಿತರಾಗುತ್ತಾರೆ.