ಪ್ರಮುಖ ಸುದ್ದಿ

ಶಹಾಪುರ ವಾಣಿಜ್ಯ ಮಳಿಗೆಗಳಿಗೆ ಬಾಡಿಗೆ ನಿಗದಿಃDC ಮಂಜುನಾಥ

ಹರಾಜು ಪ್ರಕ್ರಿಯೆ ಮೂಲಕ ಬಾಡಿಗೆ ನಿಗದಿ

ಯಾದಗಿರಿಃ ಜಿಲ್ಲೆಯ ಶಹಾಪೂರ ನಗರಸಭೆ ವ್ಯಾಪ್ತಿಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳು, ಬಾಹ್ಯ ಅನುದಾನಿತ ಯೋಜನೆಗಳು ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳಡಿಯಲ್ಲಿ ನಿರ್ಮಿಸಲಾದ ವಾಣಿಜ್ಯ ಮಳಿಗೆಗಳಿಗೆ ಸರಕಾರದ ಸುತ್ತೋಲೆಯ ಮಾರ್ಗಸೂಚಿಯಂತೆ ಠೇವಣಿ ಹಾಗೂ ಬಾಡಿಗೆ ನಿಗದಿಪಡಿಸಿ, ಹರಾಜು ಪ್ರಕ್ರಿಯೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಶಹಾಪೂರ ವಾಣಿಜ್ಯ ಮಳಿಗೆಗಳ ಬಾಡಿಗೆ ನಿಗದಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಂದು ಮಳಿಗೆಗೆ ಕನಿಷ್ಠ ರೂ.2.50 ಲಕ್ಷ ಠೇವಣಿ ನಿಗದಿ ಮಾಡಬೇಕು. ನಂತರ ಮಳಿಗೆಗಳ ಬಾಡಿಗೆ ಹರಾಜು ಪ್ರಕ್ರಿಯೆ ನಡೆಸಿ, ಬಾಡಿಗೆ ದರ ನಿಗದಿಪಡಿಸಬೇಕು. ಈ ಮಳಿಗೆಗಳಲ್ಲಿ ಬಹಳ ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರುತ್ತಿರುವ ವ್ಯಾಪಾರಸ್ಥರನ್ನೂ ಸಹ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಸೂಚಿಸಬೇಕು.

ಇವರಲ್ಲಿ ಮಳಿಗೆಗಳ ಬಾಡಿಗೆ ಬಾಕಿ ಉಳಿಸಿಕೊಂಡಿದ್ದರೆ ಕೂಡಲೇ ಪಾವತಿಸುವಂತೆ ತಿಳಿಸಬೇಕು. ಒಂದು ವೇಳೆ ಬಾಡಿಗೆ ಬಾಕಿ ಉಳಿಸಿಕೊಂಡರೆ ವ್ಯಾಪಾರಸ್ಥರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಅವರು ತಿಳಿಸಿದರು.

ಶಹಾಪೂರ ಶಾಸಕ ಶರಣಬಸಪ್ಪಗೌಡ ದರ್ಶನಾಪೂರ ಅವರು ಮಾತನಾಡಿ, ಶಹಾಪೂರ ನಗರಸಭೆ ವ್ಯಾಪ್ತಿಯಲ್ಲಿ ಹೊಸ ಮಳಿಗೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಕಾರಣ ಸದ್ಯ ಇರುವ ವಾಣಿಜ್ಯ ಮಳಿಗೆಯ ಮೊದಲನೇ ಮಹಡಿಯಲ್ಲಿ 15 ಹೊಸ ಮಳಿಗೆಗಳನ್ನು ನಿರ್ಮಿಸಬೇಕು. ತರಕಾರಿ ಮಾರುಕಟ್ಟೆಯಲ್ಲಿ ಒಳಚರಂಡಿ ದುರಸ್ತಿ ಮಾಡಬೇಕು. ಜೊತೆಗೆ ಸಿ.ಸಿ ರಸ್ತೆ ನಿರ್ಮಿಸಬೇಕು. ಉದ್ಯಾನಗಳಿಗೆ ಸುತ್ತು ಗೋಡೆ ನಿರ್ಮಿಸಬೇಕು ಎಂದು ಹೇಳಿದರು.

ಆಗ ಜಿಲ್ಲಾಧಿಕಾರಿಗಳು ಮಾತನಾಡಿ, ವಾಣಿಜ್ಯ ಮಳಿಗೆಗಳಿಂದ ಜಮಾ ಆಗಿರುವ ಹಣದಲ್ಲಿ ಹೊಸ ಮಳಿಗೆಗಳನ್ನು ನಿರ್ಮಿಸಬೇಕು. ಶಾಸಕರ ತಿಳಿಸಿದ ಮತ್ತು ಇನ್ನಿತರ ಅಗತ್ಯ ಕಾಮಗಾರಿಗಳಿಗೆ ತಗುಲುವ ಅಂದಾಜು ವೆಚ್ಚದ ಪತ್ರಿಕೆಯನ್ನು ಸಲ್ಲಿಸುವಂತೆ ಶಹಾಪೂರ ಪೌರಾಯುಕ್ತರಾದ ಬಸವರಾಜ ಶಿವಪೂಜೆ ಅವರಿಗೆ ಸೂಚಿಸಿದರು.

ನಂತರ ಶಾಸಕರು ತಾಲ್ಲೂಕಿನಲ್ಲಿ ಆಗಬೇಕಿರುವ ವಿವಿಧ ಕಾಮಗಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಪ್ರಮುಖವಾಗಿ ಕೆಂಭಾವಿ ಪುರಸಭೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಇದನ್ನು ತಕ್ಷಣ ಪರಿಹರಿಸಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಎಸ್.ಪಿ.ನಂದಗಿರಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಂಡೆಪ್ಪ ಆಕಳ, ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಮ್ಯಾನೇಜರ್ ವಿಶ್ವನಾಥ ಎಚ್.ಎಮ್., ಶಹಾಪೂರ ನಗರಸಭೆ ಉಪಾಧ್ಯಕ್ಷರಾದ ಡಾ.ಬಸವರಾಜ ಇಜೇರಿ, ಪರಿಸರ ಎಂಜಿನಿಯರ್ ಹರೀಶ್ ಸಜ್ಜನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಮ್ಯಾನೇಜರ್ ಮಹ್ಮದ್ ಕೈಸರ್ ಹುಸೇನ್, ಪ್ರಥಮ ದರ್ಜೆ ಸಹಾಯಕಿ ಪದ್ಮಾವತಿ ಬಿ.ಚಂಡ್ರಿಕಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button