ಪ್ರಮುಖ ಸುದ್ದಿ

‘ಲಿಂಗಾಯತ’ ಸ್ವತಂತ್ರ ಧರ್ಮ ವಿಚಾರ: ಸಚಿವ ಎಂ.ಬಿ.ಪಾಟೀಲರಿಗೆ ಸಿದ್ಧಗಂಗಾಶ್ರೀಗಳು ಹೇಳಿದ್ದೇನು ಗೊತ್ತಾ?

ಸಿದ್ಧಗಂಗಾ ಶ್ರೀಗಳು ನೀಡಿದ ಪತ್ರಿಕಾ ಪ್ರಕಟಣೆ ಈ ಕೆಳಗಿನಂತಿದೆ.

   ಪತ್ರಿಕಾ ಮತ್ತು ಸುದ್ದಿ ಮಾಧ್ಯಮಗಳ ಪ್ರಕಟಣೆಗಾಗಿ

ಸೆಪ್ಟಂಬರ್ 10ರಂದು ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ರವರು ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದಾಗ ಅವರು ನಮ್ಮೊಡನೆ ವೀರಶೈವ/ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಚರ್ಚಿಸಿದಾಗ ವೀರಶೈವ ಎಂಬ ಪದ ವಿದ್ಯಾವಂತರು ಮತ್ತು ನಗರ ಪ್ರದೇಶದಲ್ಲಿ ಬಳಕೆಯಲ್ಲಿದೆ. ಲಿಂಗಾಯತ ಎಂಬ ಪದ ಗ್ರಾಮೀಣ ಪ್ರದೇಶದಲ್ಲಿ ಬಳಕೆಯಲ್ಲಿದ್ದು ಈ ಎರಡು ಪದಗಳು ಒಂದೇ ಆಗಿದ್ದು ಎಲ್ಲಾ ಧಾರ್ಮಿಕ ಮುಖಂಡರು ಹಾಗೂ ಸಮಾಜ ಬಾಂಧವರು ಒಂದೆಡೆ ಕುಳಿತು ಸರ್ವ ಸಮ್ಮತವಾದ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ನಮ್ಮ ಅಭಿಪ್ರಾಯ ತಿಳಿಸಿರುತ್ತೇವೆ. ಆದರೆ, ಮಾನ್ಯ ಶ್ರೀ ಎಂ.ಬಿ.ಪಾಟೀಲರವರು ಲಿಂಗಾಯತ ಪದದ ಪರವಾಗಿ ಬೆಂಬಲ ಸೂಚಿಸಿದ್ದಾರೆ ಎಂಬಂತೆ ಮಾಧ್ಯಮಗಳಲ್ಲಿ ಪ್ರಕಟಿಸಿರುವುದು ತಿಳಿದುಬಂದಿದೆ. ಸಮಾಜವನ್ನು ಈ ರೀತಿ ಇಬ್ಬಾಗ ಮಾಡುವ ರೀತಿಯಲ್ಲಿ ಯಾರೇ ಪ್ರಯತ್ನಿಸಿದರೂ ಸಮಾಜದ ಹಿತದೃಷ್ಠಿಯಿಂದ ಒಳ್ಳೆಯದಲ್ಲ. ಸಮಾಜದ ಮುಖಂಡರೆಲ್ಲ ಕುಳಿತು ಚರ್ಚಿಸಿ ಒಮ್ಮತ ರೂಪಿಸುವುದು ಅತ್ಯಂತ ಅಗತ್ಯವಾಗಿದೆ.

 

         ಶ್ರೀ ಶಿವಕುಮಾರಸ್ವಾಮಿಗಳು

            ಸಿದ್ಧಗಂಗಾ ಮಠ

ಸಿದ್ಧಗಂಗಾಶ್ರೀಗಳ ಸ್ಪಷ್ಟನೆ

ಸೆ.10 ರಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದು

‘ಲಿಂಗಾಯತ’ ಸ್ವತಂತ್ರ ಧರ್ಮವಾಗಲಿ . ವೀರಶೈವ ಇತ್ತೀಚೆಗೆ ಸೇರಿಕೊಂಡಿದ್ದು ಎಂದು ತುಮಕೂರಿನ ಸಿದ್ದಗಂಗಾ ಮಠದ ಡಾ.ಶಿವಕುಮಾರ ಶ್ರೀಗಳು ತಿಳಿಸಿದ್ದಾರೆ ಎಂದು ಬೆಂಗಳೂರಿನಲ್ಲಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದರು. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಅವರು ನಮ್ಮಲ್ಲಿದ್ದ ಅಳಕು, ಅನುಮಾನಗಳು ದೂರ ಆಗಿವೆ. ಈ ಬಗ್ಗೆ ಯಾವ ಬುದ್ಧಿಜೀವಿಗಳ ಮಾರ್ಗದರ್ಶನ, ಹೇಳಿಕೆ ಬಗ್ಗೆ ನಾವಿನ್ನು ಚಿಂತಿಸಲ್ಲ. ಸಿದ್ಧಗಂಗಾ ಶ್ರೀಗಳು ಹೇಳಿದ್ದೇ ಸುಪ್ರೀಂ ಎಂದು ಅವರು ಹೇಳಿದ್ದರು.

ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದ ವೇಳೆ ಶ್ರೀಗಳು ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಬೇಕು ಎಂದು ತಿಳಿಸಿದ್ದಾರೆ. ಹೀಗಾಗಿ, ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ತೀವ್ರಗೊಳಿಸುತ್ತೇವೆ. ಬಸವ ಧರ್ಮ ಸ್ಥಾಪನೆಗೆ ನಾವೆಲ್ಲ ಶ್ರಮಿಸುತ್ತೇವೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದರು. ಅಲ್ಲದೆ ನಿನ್ನೆ ವಿಜಯಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತ ನಾನು ಸುಳ್ಳು ಹೇಳಿಲ್ಲ ನಾನು ಮತ್ತು ನಮ್ಮ ಕುಟುಂಬದ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ನಾನು ಸುಳ್ಳು ಹೇಳಿದ್ದರೆ ಸರ್ವನಾಶವಾಗಲಿ ಎಂದು ಭಾವುಕರಾಗಿ ಪ್ರತಿಕ್ರಿಯಿಸಿದ್ದರು.

ಆದ್ರೆ, ವೀರಶೈವ ಮುಖಂಡರು ಮಾತ್ರ ಸಚಿವರು ಹೇಳಿದ್ದು ಶುದ್ಧ ಸುಳ್ಳು, ಕಟ್ಟು ಕಥೆ ಎಂದಿದ್ದರಲ್ಲದೆ ಸಿದ್ಧಗಂಗಾಶ್ರೀಗಳನ್ನು ಇಂಥ ವಿಷಯದಲ್ಲಿ ತರುವುದು ತರವಲ್ಲ ಎಂದಿದ್ದರು. ಹೀಗಾಗಿ, ಇಂದು ಸಿದ್ಧಗಂಗಾಶ್ರೀಗಳು ಮಾಧ್ಯಮ ಪ್ರಕಟಣೆ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button