ಸಿಎಂ ಸಿದ್ಧರಾಮಯ್ಯ vs ಕೇಂದ್ರ ಸಚಿವ ಸದಾನಂದಗೌಡ
ಬೆಂಗಳೂರು: ಕೇಂದ್ರ ಸಚಿವ ಸದಾನಂದಗೌಡರನ್ನು ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯನ್ನಾಗಿ ಬಿಜೆಪಿ ನೇಮಿಸಿದೆ. ಪರಿಣಾಮ ಸಿಎಂ ಸಿದ್ಧರಾಮಯ್ಯ ತವರು ಕ್ಷೇತ್ರದಲ್ಲಿ ರಾಜಕಾರಣ ಗರಿಗೆದರಿದೆ.
ಸದಾನಂದಗೌಡರಿಗೆ ಧೈರ್ಯವಿದ್ದರೆ ನ್ನ ಪುತ್ರನ ಎದುರು ಕಣಕ್ಕಿಳಿಯಲಿ – ಸಿಎಂ
ಸಿಎಂ ಸಿದ್ಧರಾಮಯ್ಯ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಕೇಂದ್ರ ಸಚಿವ ಸದಾನಂದಗೌಡರಿಗೆ ವರುಣಾ ಮತಕ್ಷೇತ್ರದ ಬಗ್ಗೆ ಏನು ಗೊತ್ತು. ವರುಣಾ ಕ್ಷೇತ್ರದಲ್ಲಿ ಅವರೇನೂ ಪರಿಣಾಮ ಬೀರಲು ಸಾಧ್ಯವಿಲ್ಲ. ಕಳೆದ ಚುನಾವಣೆಯಲ್ಲಿ ನಾನು ಅತ್ಯಧಿಕ ಮತಗಳ ಅಂತರದಿಂದ ಗೆದ್ದಿದ್ದೆ. ಬರುವ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನೀಡಿದಲ್ಲಿ ನನ್ನ ಪುತ್ರ ಡಾ.ಯತೀಂದ್ರ ಕಣಕ್ಕಿಳಿಯಲಿದ್ದಾರೆ. ಧೈರ್ಯವಿದ್ದರೆ ಸದಾನಂದಗೌಡರು ನನ್ನ ಪುತ್ರನ ಎದುರು ಚುನಾವಣ ಕಣಕ್ಕಿಳಿಯಲಿ ಎಂದು ಸವಾಲೆಸೆದಿದ್ದಾರೆ.
ಸೋಲಿನ ಭೀತಿಯಿಂದ ಸಿಎಂ ಪಲಾಯನ – ಸದಾನಂದ ಗೌಡ
ಸಿದ್ಧರಾಮಯ್ಯ ಅವರಿಗಿಂತ ಮೊದಲು ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೆ. ರಾಜ್ಯದ ಪ್ರತಿ ಕ್ಷೇತ್ರದ ಬಗ್ಗೆಯೂ ನನಗೆ ಗೊತ್ತಿದೆ. ಸೋಲಿನ ಭೀತಿಯಿಂದಲೇ ಸಿಎಂ ಸಿದ್ಧರಾಮಯ್ಯ ವರುಣಾ ಮತಕ್ಷೇತ್ರದಿಂದ ಪಲಾಯನ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಬಿಜೆಪಿ ಪರ ಒಲವು ಹೊಂದಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ತಿರುಗೇಟು ನೀಡಿದ್ದಾರೆ.