ನಗರದೆಲ್ಲೆಡೆ ಬೀದಿ ನಾಯಿಗಳ ಹಾವಳಿ ನಾಗರಿಕರಲ್ಲಿ ಆತಂಕ
ಯಾದಗಿರಿ, ಶಹಾಪುರ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಮಕ್ಕಳು, ವೃದ್ಧರು ರಸ್ತೆಯಲ್ಲಿ ನಡೆದಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವರು ನಾಯಿ ಕಡಿತಕ್ಕೆ ಒಳಗಾಗಿದ್ದು, ನಾಗರಿಕರಲ್ಲಿ ಆತಂಕ ಉಂಟಾಗಿದೆ.
ಇಷ್ಟೆಲ್ಲ ಆದರೂ ಬೀದಿನಾಯಿಗಳ ಹಾವಳಿಗೆ ಮಾತ್ರ ಕಡಿವಾಣ ಬಿದ್ದಿಲ್ಲ. ಲಕ್ಷೀನಗರ, ಮೋಚಿಗಡ್ಡಿ, ಗಾಂಧೀಚೌಕ್, ಚಾಮುಂಡೇಶ್ವರಿ ನಗರದಲ್ಲಿ ನಾಯಿಗಳ ಕಾಟದಿಂದ ಜನ ರೋಸಿ ಹೋಗಿದ್ದಾರೆ.
ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಹಿಂಡು ಹಿಂಡಾಗಿ ರಸ್ತೆಗೆ ದಾಂಗುಡಿ ಇಡುವ ನಾಯಿಗಳು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗಿ ಕಚ್ಚಲು ಮುಂದಾಗುತ್ತಿವೆ.
ಅಲ್ಲದೆ ಬಡಾವಣೆಯಲ್ಲಿ ಮಹಿಳೆಯರು ಕಸ, ಮುಸುರಿ ನೀರು ತಿಪ್ಪೆಗುಂಡಿಗೆ ಬಿಸಾಕಲು ಹೋಗುವಾಗ ಅಂತಲೂ ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳು, ಹಿರಿಯರು ಅಂಗಡಿಯಿಂದ ಬ್ರೆಡ್, ಬಿಸ್ಕೀಟ್ ಅಥವಾ ತರಕಾರಿ ಚೀಲ ಕೈಯಲ್ಲಿ ಹಿಡಿದು ನಡೆದು ಬರಬೇಕಾದರೂ ಕಷ್ಟವಾಗಿದೆ. ನಾಯಿಗಳು ಹಿಂದೆ ಬಿದ್ದು ಕೈಯಲ್ಲಿದ್ದ ಪದಾರ್ಥದ ಚೀಲವನ್ನು ಕಸಿದು ಬಿಸಾಡುತ್ತವೆ. ಸಾಕಷ್ಟು ಘಟನೆಗಳು ನಡೆಯುತ್ತಿವೆ. ಕೂಡಲೇ ನಾಯಿ ಹಾವಳಿ ತಪ್ಪಿಸಲು ನಗರಸಭೆ ಸೂಕ್ರ ಕ್ರಮಕೈಗೊಳ್ಳಬೇಕು ಜನರು ಆಗ್ರಹಿಸಿದ್ದಾರೆ.
ಕೂಡಲೇ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿಯಿಂದ ಅನಾಹುತ ಸಂಭವಿಸುವ ಮೊದಲು ಎಚ್ಚೆತ್ತು ಕೊಂಡು ಅವುಗಳನ್ನು ಬೇರೆಡೆ ಸ್ಥಳಾಂತರಿಸಬೇಕೆಂದು ನಾಗರಿಕರು ಮನವಿ ಮಾಡಿದ್ದಾರೆ.