ಶೈಕ್ಷಣಿಕ ಗಾಂಭೀರ್ಯತೆ ಅರಿಯದ ಸರ್ಕಾರ ಕತ್ತೆ ಕಾಯುತ್ತಿದೆಯೇ.? ಖರ್ಗೆ ವಾಗ್ದಾಳಿ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ – ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಗೃಹ ಸಚಿವರ ಆಡಳಿತ ಸಂಪೂರ್ಣ ವಿಫಲ ಖರ್ಗೆ ಆರೋಪ
ಚಿತಾಪುರಃ ಸಿಎಂ ಖುರ್ಚಿ ಉಳಿಸಿಕೊಳ್ಳಲು ಬೊಮ್ಮಾಯಿ ಅವರು RSS ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ಅಲೆಗಳಿಂದ ಶಾಲೆಗಳು ಬಂದ್ ಆಗಿ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಆದರೂ ಕೂಡಾ ಈಗ ಎದ್ದಿರುವ ಹಿಜಾಬ್ ವಿವಾದದಿಂದಾಗಿ ಶಾಲೆ ಬಂದ್ ಮಾಡುವ ನಿರ್ಧಾರವನ್ನ ಶಾಲಾ ಸಮಿತಿಗೆ ಬಿಡಲಾಗಿದೆ. ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ದೂರಿದರು.
ಮಕ್ಕಳ ಶಿಕ್ಷಣದ ಬಗ್ಗೆ ಗಾಂಭೀರ್ಯತೆ ಇಲ್ಲದ ಸರ್ಕಾರ ಕತ್ತೆ ಕಾಯುತ್ತಿದೆಯಾ.? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇರೆ ಬೇರೆ ಜಿಲ್ಲೆಗಳಿಗೆ ಹಾಗೂ ರಾಜ್ಯಗಳಿಗೆ ಹಿಜಾಬ್ ವಿವಾದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಬ್ಬಿದ್ದು, ಹೀಗೆ ಹರಿಬಿಟ್ಟಿದ್ದು ಯಾರು ? ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಗುಪ್ತಚರ ಇಲಾಖೆ ಏನು ಮಾಡುತ್ತಿದೆ.? ಕೇಸರಿ ಶಾಲು ಹಂಚುತ್ತಿರುವುದು ಯಾರು.? ರಾಷ್ಟ್ರ ಧ್ವಜದ ಸ್ಥಂಬದಲ್ಲಿ ಕೇಸರಿ ಧ್ಚಜ ಹಾರಿಸಿದ್ದು ಯಾರು? ಈ ಬಗ್ಗೆ ಮಾಹಿತಿ ಇಲ್ಲವೇ? ಗೃಹ ಸಚಿವರು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದ ಅವರು, ಗೃಹ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಅವರೇ ಹೇಳಿದ್ದಾರೆ. ಹೀಗಿರುವಾಗ ಕಾನೂನು ಸುವ್ಯವಸ್ಥೆ ಕುಸಿಯದೇ ಮತ್ತೇನಾದಿತು ಎಂದರು.
ಕೇಸರಿ ತ್ಯಾಗ ಸಂಕೇತ ಎಂದು ಹೇಳಲಾಗುತ್ತಿದೆಯಲ್ಲ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಕೇರಳ ಹೈಕೋರ್ಟ್ ಹಾಗೂ ಸುಪ್ರಿಂ ಕೋರ್ಟ್ ಈ ವಿಚಾರದಲ್ಲಿ ಸ್ಪಷ್ಟಪಡಿಸಿದೆ.
ಕೈಬಳೆ, ಕುಂಕುಮ, ತಾಯತ, ಹಿಜಾಬ್ ಗಳು ಹಾಗೂ ಸಿಖ್ಖರ ಟರ್ಬನ್ ( ಪೇಟ ) ಆಯಾ ಧರ್ಮದ ಸಂಪ್ರದಾಯಗಳು ಎಂದು ಹೇಳಿವೆ. ಆದರೆ ಕೇಸರಿಶಾಲು ಏನು? ಇದು ಯಾವ ಧರ್ಮದ ಸಂಕೇತ? ಇದು ಕೇವಲ ರಾಜಕೀಯ ಪ್ರೇರಿತದ ಸಂಕೇತವಾಗಿದೆ ಎಂದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಖುರ್ಚಿ ಉಳಿಸಿಕೊಳ್ಳಲು ಸಂಘ ಪರಿವಾರದವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಈ ಮೊದಲು ಅವರು ತುಂಬಾ ಪ್ರೊಗ್ರೆಸಿವ್ ( ಪ್ರಗತಿಪರ ) ಆಗಿದ್ದರು. ಆದರೆ ಈಗ ಎಷ್ಟು ದಿನ ಸಿಎಂ ಖುರ್ಚಿ ಇರುತ್ತದೆಯೋ ಅಷ್ಟು ದಿನ ಆರ್ ಎಸ್ ಎಸ್ ಮಾತು ಕೇಳುತ್ತಾ ಅವರ ಕೈಗೊಂಬೆಯಾಗಿರ್ತಾರೆ ಎಂದು ಟೀಕಿಸಿದರು.