ಕೌಳೂರಿನ ಮೃತ ಸಾಬರೆಡ್ಡಿ ಕುಟುಂಬಕ್ಕೆ ನಿಖಿಲ್ ಕುಮಾರಸ್ವಾಮಿ ಸಾಂತ್ವಾನ
ಭೀಮಾ ಪ್ರವಾಹದಲ್ಲಿ ಮೃತರಾದ ಕುಟುಂಬಕ್ಕೆ ಪರಿಹಾರ ವಿತರಣೆ
ಯಾದಗಿರಿ : ಪ್ರವಾಹ ಪೀಡಿತ ಪ್ರದೇಶಗಳಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಪ್ರವಾಸ ಕೈಗೊಂಡು ತಾಲ್ಲೂಕಿನ ಕೌಳೂರ ಗ್ರಾಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಳೆದ ಗುರುವಾರ ಭೀಮಾ ನದಿಯ ಪ್ರವಾಹದಲ್ಲಿ ಕೊಚ್ಚಿಹೋಗಿ ಮೃತಪಟ್ಟ ರೈತ ಸಾಬರೆಡ್ಡಿ ಅವರ ಕುಟುಂಬವನ್ನು ಭೇಟಿ ಮಾಡಿ ವೈಯಕ್ತಿಕ ಪರಿಹಾರವಾಗಿ 2 ಲಕ್ಷ ರೂ. ನೀಡಿ ಸಾಂತ್ವಾನ ಹೇಳಿದರು.
ಕಳೆದ ಎರಡು ದಿನಗಳಿಂದ ನಾನು ಉತ್ತರ ಕರ್ನಾಟಕದ ಪ್ರವಾಸದಲ್ಲಿದ್ದೇನೆ. ಈ ಭಾಗದ ಜನತೆ ತೀವ್ರ ಸಂಕಷ್ಟದಲ್ಲಿದ್ದಾರೆ. ಅನೇಕ ಕುಟುಂಬಗಳು ಮನೆ ಮತ್ತು ಬೆಳೆ ಕಳೆದುಕೊಂಡು ನೋವಿನಲ್ಲಿದ್ದಾರೆ. ಬರ ದಿಂದ ತತ್ತರಿಸಿದ್ದ ರೈತರು ಈಗ ನೆರೆಗೆ ಸಿಕ್ಕು ತೀವ್ರ ಸಂಕಷ್ಟದಲ್ಲಿದ್ದಾರೆ. ಭಗವಂತ ಅವರಿಗೆಲ್ಲಾ ಸಂಕಷ್ಟ ಪರಿಹಾರ ಮಾಡಲಿ ಎಂದು ಹಾರೈಸಿದರು.
ಪ್ರಕೃತಿ ಮುಂದೆ ಯಾರ ಆಟವೂ ನಡೆಯೋದಿಲ್ಲಾ, ಎಲ್ಲವೂ ವಿಧಿಯಾಟ. ತಂದೆಯನ್ನು ಕಳೆದುಕೊಂಡಿರುವ ನಿಮ್ಮ ದುಃಖ ಯಾರಿಂದಲೂ ಭರಿಸಲು ಸಾಧ್ಯವಿಲ್ಲ. ಆದರೂ, ನಿಮ್ಮಲ್ಲಿ ಅತ್ಮ ಸ್ಥೈರ್ಯ ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಮೃತ ಸಾಬರೆಡ್ಡಿ ಅವರ ಮೂರು ಜನ ಮಕ್ಕಳನ್ನು ಕಂಡು ಗದ್ಗದಿತರಾದರು. ನಿಮ್ಮ ಬೆನ್ನಿಗೆ ಜೆಡಿಎಸ್ ಪಕ್ಷವಿದೆ ಯಾವುದೇ ಆತಂಕಕ್ಕೆ ಒಳಗಾಗದೆ ಧೈರ್ಯವಾಗಿರಿ ಎಂದು ಸಂತೈಸಿದರು.
ಶಾಸಕರಿಂದ 5 ಲಕ್ಷ ಪರಿಹಾರ ನಿಧಿಯಡಿ ಚಕ್ ವಿತರಣೆ
ಇದೇ ಸಂದರ್ಭದಲ್ಲಿ ನೈಸರ್ಗಿಕ ವಿಕೋಪ ಪರಿಹಾರ ನಿಧಿಯಡಿ ಸರ್ಕಾರ ಬಿಡುಗಡೆ ಮಾಡಿದ ರೂ.5 ಲಕ್ಷ ಪರಿಹಾರದ ಚೆಕ್ನ್ನು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರು ಮೃತನ ಕುಟುಂಬಕ್ಕೆ ವಿತರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಚೆನ್ನಮಲ್ಲಪ್ಪ ಘಂಟಿ ಉಪಸ್ಥಿತರಿದ್ದರು. ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ, ಗುರುಮಠಕಲ್ ಕ್ಷೇತ್ರದ ವಕ್ತಾರ ಮಲ್ಲನಗೌಡ ಹಳೆಮನಿ ಕೌಳೂರ, ಶಿವುಕುಮಾರ್, ಮಲ್ಲಿಕಾರ್ಜುನ ಅರುಣಿ, ಈಶ್ವರ ನಾಯಕ, ಶರಣು ಅವಂಟಿ, ಜಿ. ತಮ್ಮಣ್ಣ, ಅನೀಲ ಹೆಡಗಿಮದ್ರಿ, ಸುಬಾಶ್ಚಂದ್ರ ಕಟಕಟಿ, ಅಜಯರೆಡ್ಡಿ ಯಲ್ಹೇರಿ ಹಾಗೂ ಮೊದಲಾದವರಿದ್ದರು.
—-




