ಬಿಜೆಪಿ ರೆಬಲ್ ಶಾಸಕರ ಸಭೆ : ಶಾಸಕರ ಭವನದ ಕೊಠಡಿ 4001ರ ರಹಸ್ಯವೇನು?
ಚಿತ್ರದುರ್ಗ : ಹಿರಿತನ ಮತ್ತು ಪಕ್ಷ ನಿಷ್ಠೆ ಕಡೆಗಣಿಸಿರುವುದು ನೋವು ತಂದಿದ್ದು ಭ್ರಮನಿರಸನ ಆಗಿದೆ. ಹತ್ತಾರು ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು ಸಂಜೆ ಶಾಸಕರ ಭವನದ ಕೊಠಡಿ 4001 ರಲ್ಲಿ ಸೇರಿ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಚಿತ್ರದುರ್ಗದಲ್ಲಿ ಹಿರಿಯ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದ್ದಾರೆ.
ನೂತನ ಸಚಿವರ ಪ್ರಮಾಣ ವಚನ ಸಮಾರಂಭದಿಂದ ದೂರ ಉಳಿದ ಅವರು 11 ಗಂಟೆ ಸುಮಾರಿಗೆ ಬೆಂಗಳೂರಿನತ್ತ ತೆರಳಿದ್ದಾರೆ. ಪ್ರತಿಸಲ ನೂತನ ಮಂತ್ರಿಗಳಿಗೆ ಕೈಕುಲುಕಿ ಶುಭಾಶಯ ಕೋರುವುದೇ ನಮ್ಮ ಕೆಲಸವಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಹಿರಿಯ ಶಾಸಕರಿಗೆ ಮಂತ್ರಿಗಿರಿ ತಪ್ಪಿದ್ದಲ್ಲದೆ ಕೆಲವರಿಗೆ ಮಂತ್ರಿಗಿರಿ ನೀಡಿದ್ದೂ ಅಸಮಾಧಾನ ಸ್ಪೋಟಿಸಲು ಕಾರಣವಾಗಿದೆ. ಸಚಿವಾಕಾಂಕ್ಷಿ ಆಗಿದ್ದ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಈಸಲ ಮಂತ್ರಿಗಿರಿ ಸಿಗುವ ವಿಶ್ವಾಸದಲ್ಲಿದ್ದರು. ಎಲ್ಲರಂತೆ ನಾವೂ ಬೆಂಗಳೂರು , ದೆಹಲಿ ಓಡಾಡಿಕೊಂಡಿರಬೇಕಿತ್ತು. ನಾವು ಪಕ್ಷ, ಸಂಘಟನೆ ನಿಷ್ಠರಾಗಿ ಜನರ ಮದ್ಯೆ ಇದ್ದು ಅವರ ನೋವಿಗೆ ಸ್ಪಂದಿಸುವುದರಲ್ಲಿ ತೊಡಗಿದ್ದೇ ತಪ್ಪಾ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ಆ ಮೂಲಕ ಬಿಜೆಪಿಗೆ ಹಿರಿಯ ಶಾಸಕರು ಬಿಸಿ ಮುಟ್ಟಿಸುವ ಮುನ್ಸೂಚನೆ ನೀಡಿದ್ದಾರೆ.