ಅಪ್ರಾಪ್ತರನ್ನು ಬಲಿ ತೆಗೆದುಕೊಂಡ ಮಾಯಾವಿ “ಪ್ರೀತಿ”
ರಾಯಚೂರಃ ಯುವಕ& ಯುವತಿ ಅಪ್ರಾಪ್ತ ವಯಸ್ಸಿನಲ್ಲಿಯೇ ಪ್ರೀತಿ ಪ್ರೇಮ ಜ್ವರಕ್ಕೆ ಬಲಿಯಾದ ಘಟನೆ ಜಿಲ್ಲೆಯ ಲಿಂಗಸೂಗುರ ತಾಲೂಕಿನ ಗುಡಗುಂಟಿ ಅಮರೇಶ್ವರ ದೇವಸ್ಥಾನ ಹತ್ತಿರ ಜರುಗಿದೆ.
ಪ್ರೇಮ ಪಯಣದಲ್ಲಿ ತೇಲಿದ ಇಬ್ಬರಿಗೂ ಕುಟುಂಬಸ್ಥರು ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. ಇಷ್ಟಾದರೂ ತಿದ್ದಿಕೊಳ್ಳದ ಇಬ್ಬರು ಪ್ರೀತಿ ಎಂಬ ಅಕರ್ಷಣೆಗೆ ಒಳಗಾಗಿ ಒಬ್ಬರನ್ನೊಬ್ಬರು ಬಿಟ್ಟು ಇರದಾಗದೆ ದೂರದ ಅಮರೇಶ್ವರ ದೇವಸ್ಥಾನದ ಗುಡ್ಡದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಂದೇ ಸಮುದಾಯದವರಾದ ಇಬ್ಬರು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ನಿವಾಸಿಗಳಾಗಿದ್ದು, ಪ್ರಸ್ತುತ ಪ್ರಕರಣದಿಂದ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರಲ್ಲಿ ದುಖಃ ಮನೆ ಮಾಡಿದೆ.
ಅಮರೇಶ (18) ಮತ್ತು ಭಾಗ್ಯಶ್ರೀ (15) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳಾಗಿದ್ದಾರೆ. ಈ ಕುರಿತು ಘಟನಾ ಸ್ಥಳಕ್ಕೆ ಲಿಂಗಸೂಗುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳಕಳಿಃ ಪ್ರಸ್ತುತ ಇಂತಹ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಇಡಿ ಸಮಾಜವನ್ನು ಚಿಂತೆಗೀಡು ಮಾಡಿದೆ. ಏನು ತಿಳಿಯದ ಮಕ್ಕಳು ಸಿನಿಮಾ, ಟಿವಿ, ಮೊಬೈಲ್ ಗಳಂತ ಆಕರ್ಷಣೆಗೆ ಒಳಗಾಗಿ ಪ್ರೀತಿ ಪ್ರೇಮವೆಂಬ ಮಾಯಾವಿಗೆ ಬಲಿಯಾಗುತ್ತಿದ್ದು ಇಂತಹ ಘಟನೆಗಳಿಂದ ಪಾಲಕರು ಎದೆಗುಂದುವಂತಾಗಿದೆ.
ಹೀಗಾಗಿ ವಿನಯವಾಣಿ ಇಂತಹ ಘಟನೆಗಳು ನಡೆದಾಗಲೊಮ್ಮೆ ನಾಗರಿಕರಿಗೆ ಎಚ್ಚರಿಸುತ್ತಲೆ ಬಂದಿದೆ. ಆದಷ್ಟು ಪೋಷಕರು ಮಕ್ಕಳ ಮೇಲೆ ನಿಗಾವಹಿಸಬೇಕು. ಎಂದಿನಂತಿರದೆ ಮಕ್ಕಳ ವರ್ತನೆಯಲ್ಲಿ ಬದಲಾವಣೆ ಕಂಡು ಬಂದ ತಕ್ಷಣ, ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರು, ಅವರ ಆಪ್ತ ಸ್ನೇಹಿತರಲ್ಲಿ ಆಪ್ತ ಸಮಾಲೋಚನೆ ನಡೆಸಬೇಕು.
ಮಕ್ಕಳಿಗೆ ಗೊತ್ತಾಗದ ಹಾಗೇ ಎಚ್ಚರಿಕೆಯಿಂದ ವಿಚಾರಣೆ ನಡೆಸುವುದು ಸೂಕ್ತ. ಪಾಲಕರು ಅವರ ಕ್ಲಾಸ್ ಶಿಕ್ಷಕರ ಜತೆ ಕನಿಷ್ಟ ತಿಂಗಳಿಗೊಮ್ಮೆಯಾದರೂ ಮಾತುಕತೆ ನಡೆಸಬೇಕು. ಅಲ್ಲದೆ ಆಯ ಜಿಲ್ಲೆಯ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯುವ ಕೌನ್ಸಿಲಿಂಗ್ ಮೂಲಕ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಇದರಿಂದ ಆತ್ಮಹತ್ಯೆ ಯಂತಹ ಘಟನೆ ತಡೆಗೆ ಸಹಕಾರಿಯಾಗಲಿದೆ. ಇದ್ದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದು ಪ್ರಜ್ಞಾವಂತರ ಸಲಹೆಯಾಗಿದೆ.