ಯಶಸ್ಸು ಸಾಧಿಸಲು ಸಲ್ಲದು ಅಡ್ಡ ಮಾರ್ಗ.!
ಸಕ್ಸಸ್ಗೆ ಅಡ್ಡಮಾರ್ಗದ ಸರ್ಕಸ್ ಬೇಡ..!
ಇಂದಿನ ಗಡಿಬಿಡಿ ಜೀವನದಲ್ಲಿ ನಮ್ಮಲ್ಲಿ ಬಹುತೇಕ ಜನ ಯಶಸ್ಸು ಪಡೆಯಲು ಅಡ್ಡ ಮಾರ್ಗಗಳನ್ನು ಅನುಸರಿಸಿ ನಂಬರ್ ಒನ್ ಪಟ್ಟ ಪಡೆದುಕೊಳ್ಳಬೇಕೆಂದು ಹಾತೊರೆಯುತ್ತಿದ್ದಾರೆ.ಪರಿಶ್ರಮ ಬೇಡ ಪ್ರಯತ್ನ ಬೇಡ ಸುಲಭವಾಗಿ ಕಾರ್ಯ ಸಿದ್ದಿಸಿಕೊಂಡು, ಸೆಲೆಬ್ರಿಟಿಯಾಗಿ ಮೆರೆಯಬೇಕೆಂದು ಬಯಸುತ್ತಿದ್ದಾರೆ.
ಇಂಥವರಿಗಾಗಿಯೇ ಅನೇಕ ಬಗೆಯ ತಾಯಿತಗಳು, ಹರಳುಗಳು ಯಂತ್ರಗಳು,ಮಾಟ ಮಂತ್ರಗಳು ಇಂದ್ರಜಾಲಿಕ ಸೂತ್ರಗಳು ನಮ್ಮ ಸುತ್ತ ಮುತ್ತಲೂ ಇತ್ತೀಚಿಗೆ ಹೆಚ್ಚಾಗಿ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಬೆವರು ಸುರಿಸದೇ ದಿಢೀರ ಶ್ರೀಮಂತರಾಗಲು ಅನೇಕ ಜನ ಸಂಖ್ಯಾಶಾಸ್ತ್ರವನ್ನು ವಾಸ್ತುಶಾಸ್ತ್ರವನ್ನು ಅವಲಂಬಿಸುತ್ತಿದ್ದಾರೆ.
ಇನ್ನು ಕೆಲವರು ಅನಕ್ಷರಸ್ಥ, ಹಿಂದುಳಿದ ಅಮಾಯಕ ಜನರಿಗೆ ಶೀಘ್ರವಾಗಿ ಧನ ಪ್ರಾಪ್ತಿಯಾಗುತ್ತದೆ ಅದೃಷ್ಟ ಖುಲಾಯಿಸುತ್ತದೆ ಎಂಬ ಆಸೆ ತೋರಿಸಿ, ಮುಗ್ದ ಜನರನ್ನು ವಂಚಿಸುತ್ತ ತಾವೇ ಹಣ ಗಳಿಸುವ ದಂದೆಗಿಳಿದಿದ್ದಾರೆ.
ತಕ್ಷಣದ ಕಾರ್ಯ ಸಿದ್ಧಿಗಾಗಿ ಮಾರುಕಟ್ಟೆಯಲ್ಲಿ ವಿಧ ವಿಧವಾದ ವಿಶೇಷ ಯಂತ್ರಗಳು ದೊರೆಯುತ್ತವೆ.
ಯಾವ ಪರಿಶ್ರಮವಿಲ್ಲದೆ ಕೋಟ್ಯಾಧಿಪತಿಯಾಗುತ್ತೀರಿ ಎಂದು ನಂಬಿಸಿ ಜನರನ್ನು ವಂಚಿಸುವ ವಂಚಕರಿಗೇನೂ ಕಡಿಮೆ ಇಲ್ಲ. ಮೋಸ ಹೋಗುವವರಿಗೂ ಕಮ್ಮಿ ಇಲ್ಲ. ದಿನ ನಿತ್ಯ ಸಮೂಹ ಮಾಧ್ಯಮಗಳಲ್ಲಿ ಇಂಥ ಅನೇಕ ಮೋಸ ಜಾಲದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಾಧ್ಯಮಗಳು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದರೂ ಇಂಥ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ.
ಪ್ರತಿಯಾಗಿ ದಿನದಿಂದ ದಿನಕ್ಕೆ ಹೆಚ್ಚಚುತ್ತಿವೆ. ಈ ಸುಲಭವಾದ ಅಡ್ಡ ಮಾರ್ಗಗಳಿಂದ ನಾವು ಬಯಸಿದ್ದೆಲ್ಲ ಸಾಧ್ಯವಾಗುತ್ತಿದ್ದರೆ, ಸಮಾಜದಲ್ಲಿ ಇಂದು ಎಲ್ಲರೂ ಬೆವರಿಳಿಸದೇ ಅತೀ ಸಂತೋಷದಿಂದ ನಗುನಗುತ್ತ ಬಾಳಬಹುದಿತ್ತು.
ಆದರೆ ಈ ಅಡ್ಡ ಮಾರ್ಗಗಳಿಂದ ಯಾರೂ ತಮ್ಮ ಮನೋಕಾಮನೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಿಲ್ಲ ಒಂದು ವೇಳೆ ಕೆಲವರ ಬಯಕೆ ಈಡೇರಿದ್ದರೆ ಅವು ಕಾಕತಾಳೀಯವಷ್ಟೆ ಎಂಬುದು ಅಪ್ಪಟ ಸತ್ಯ. ಕಾಕತಾಳೀಯವನ್ನು ನಂಬಿ ಜೀವನ ನಡೆಸುವದು ಎಷ್ಟು ಮೂರ್ಖತನವಲ್ಲವೆ?
ನಕಲಿ ಜ್ಯೋತಿಷಿಗಳನ್ನು ನಂಬಿ ಹಣ ಕಳೆದುಕೊಡವರು, ಪ್ರತಿ ಕೆಲಸ ಕಾರ್ಯ ಮಾಡುವಾಗಲೂ ಜ್ಯೋತಿಷ್ಯವನ್ನು ಪಾಲಿಸಲು ಹೋಗಿ ಬಾಳು ಹಾಳು ಮಾಡಿಕೊಂಡವರು ನಮಗೆ ಕಾಣ ಸಿಗುತ್ತಾರೆ. ದಿನಾಲೂ ತಪ್ಪದೆ ಪಂಚಾಂಗ ನೋಡಿ, ತಮ್ಮ ದಿನ ಭವಿಷ್ಯ ಓದಿ ಅಥವಾ ಕೇಳಿ ಪೂರ್ವಾಗ್ರಹ ಪೀಡಿತರಾಗಿ ಮತ್ತಷ್ಟು ಸಮಸ್ಯೆಗಳಿಗೆ ಬಲಿಯಾಗಿ ಮತ್ತೆ ಮತ್ತೆ ಮೋಸ ಹೋಗುವ ಸಂದರ್ಭಗಳನ್ನು ತಂದುಕೊಳ್ಳುತ್ತಿದ್ದಾರೆ.
ನಿಷ್ಟಾವಂತರಾಗಿ ಶ್ರದ್ದೆಯಿಂದ ಪ್ರಯತ್ನ ಪಟ್ಟು ಮೇಲೆ ಬಂದವರನ್ನು ಕಂಡು ಅಸೂಯೆ ಪಡುತ್ತ ಅವರನ್ನು ಟೀಕಿಸುತ್ತ ಜೀವನ ಹಾಳು ಮಾಡಿಕೊಳ್ಳುವ ಜನರಿಗೇನು ಕಡಿಮೆ ಇಲ್ಲ.
ಮಾಡುವ ಕೆಲಸಕ್ಕೆ ಲಂಚ ಪಡೆಯುವದು ಅದರಿಂದ ಹಣ ಗಳಿಸಿ ಶ್ರೀಮಂತರಾಗಬಹುದು ಎನ್ನುವ ರೋಗವಂತೂ ಸಮಾಜದಲ್ಲಿ ಸಾಂಕ್ರಾಮಿಕ ರೋಗದಂತೆ ಬೆಳೆದು ಔಷಧಿಯಿಲ್ಲದ ಮಹಾ ಮಾರಿಯಂತೆ ಸಾಮಾಜಿಕ ಅಂಟು ಜಾಡ್ಯವಾಗಿ ಬೆಳೆಯುತ್ತಿದೆ.
ಭ್ರಷ್ಟಾಚಾರದಿಂದ ಅನೇಕ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಕೈ ಬಿಸಿ ಮಾಡಿದರೆ ಮಾತ್ರ ತಮ್ಮಕೆಲಸ ವಾಗುವದು ಎನ್ನುವಷ್ಟು ಲಂಚಾವತಾರ ಸಮಾಜದಲ್ಲಿ ಬೇರೂರಿ ತನ್ನ ವಿಕೃತ ರೂಪದ ಅಟ್ಟಹಾಸ ಮೆರೆಯುತ್ತಿದೆ. ಇದರ ವಿರುದ್ಧ ಬುದ್ಧಿವಂತರು ಕಂಕಣಬದ್ಧರಾಗುವ ಅವಶ್ಯಕತೆ ತುಂಬಾ ಇದೆ.
ಯಶಸ್ಸಿಗೆ ಬೇಕಾದುದು ನಿರ್ಧಿಷ್ಟ ಗುರಿ, ಅಚಲ ಸಂಕಲ್ಪ, ಸೂಕ್ತ ಯೋಜನೆಗಳು, ನಿರಂತರ ಪ್ರಯತ್ನ,ಗೆದ್ದೆ ಗೆಲ್ಲುವೆನೆಂಬ ಆತ್ಮವಿಶ್ವಾಸ. ಆತ್ಮವಿಶ್ವಾಸ ಅತ್ಯಂತ ಕಷ್ಟವಾದುದುದನ್ನು ಸಾಧ್ಯವಾಗಿಸುತ್ತದೆ. ಎನ್ನುವದು ಇತಿಹಾಸದಿಂದ ನಮಗೆ ತಿಳಿದಿರುವ ಸಂಗತಿ. ಇದರೊಂದಿಗೆ ಕಠಿಣ ಪರಿಶ್ರಮ ಸೇರಿದರೆ ಸಕ್ಸಸ್ ನಾವಿದ್ದಲ್ಲಿಗೆ ಹಾಜರಾಗುತ್ತದೆ.
ಈ ಮೇಲಿನ ಅಂಶಗಳನ್ನು ಅಳವಡಿಸಿಕೊಂಡರೆ ಸಕ್ಸ್ಸ್ ನಮ್ಮನ್ನು ತಾನೇ ಹುಡುಕಿಕೊಂಡು ನಮ್ಮ ಬೆನ್ನು ಹತ್ತಿ ಬರುತ್ತದೆ. There is no shortcut for success ಎನ್ನುವ ಮಾತನ್ನು ಅರ್ಥೈಸಿಕೊಂಡು, ಇನ್ನಾದರೂ ಹಣ ಗಳಿಸುವದಕ್ಕೆ ಮತ್ತು ಸಕ್ಸಸ್ ಪಡೆಯುವದಕ್ಕೆ ಅಡ್ಡಮಾರ್ಗಗಳನ್ನು ಬಳಸಲು ಯತ್ನಿಸದೆ, ಧನಾತ್ಮಕ ಗುಣಗಳನ್ನು ಅಳವಡಿಸಿಕೊಂಡು ಸಕಾರಾತ್ಮಕ ಮನೋಭಾವನೆ ಬೆಳೆಸಿಕೊಂಡು ಮುಂದುವರಿಯುವದೇ ಲೇಸು.
ಜಯಶ್ರೀ. ಅಬ್ಬಿಗೇರಿ.
ಆಂಗ್ಲ ಭಾಷಾ ಉಪನ್ಯಾಸಕರು
ಸರಕಾರಿ ಪದವಿ ಪೂರ್ವ ಕಾಲೇಜು.
ಹಿರೇಬಾಗೇವಾಡಿ.
ತಾ: ಜಿ: ಬೆಳಗಾವಿ.
ಮೊ.9449234142.