ತಿರುಪತಿ ತಿಮ್ಮಪ್ಪಗೆ ಮೂರು ನಾಮ ಹಾಕಿದರಾ ಭಕ್ತರು!?
-ವಿನಯ ಮುದನೂರ್
ವಿಶ್ವ ಶ್ರೀಮಂತ ದೇವರು ಯಾರು ಎಂದ ತಕ್ಷಣಕ್ಕೆ ತಿರುಪತಿ ತಿಮ್ಮಪ್ಪ ನೆನಪಾಗುತ್ತಾನೆ. ಕಾರಣ ತಿರುಪತಿ ತಿಮ್ಮಪ್ಪನ ಹಿಂದೆ ಅಂಥದ್ದೊಂದು ಸಾಂಪ್ರದಾಯಿಕ ಕಥೆಯೇ ಇದೆ. ಅಂತೆಯೇ ಲಕ್ಷಾಂತರ ಜನ ಭಕ್ತರು ನಿತ್ಯತಿರುಮಲಕ್ಕೆ ತೆರಳಿ ತಿರುಪತಿ ತಿಮ್ಮಪ್ಪನಿಗೆ ಹರಕೆ ತೀರಿಸುತ್ತಾರೆ. ಹೀಗಾಗಿ, ಪ್ರತಿ ವರ್ಷವೂ ಕೋಟ್ಯಾಂತರ ರೂಪಾಯಿ ವೆಂಕಟೇಶ್ವರನ ಸನ್ನಿಧಾನದಲ್ಲಿ ಜಮಾ ಆಗಿರುತ್ತದೆ.
ಪ್ರಧಾನಿ ನರೇಂದ್ರ ಮೋದಿ 2016ರ ನವೆಂಬರ್ 8ರಂದು ದೇಶದಲ್ಲಿ 1000 ಮತ್ತು 500 ಮುಖಬೆಲೆಯ ನೋಟುಗಳನ್ನು ರದ್ದು ಪಡಿಸಿದ ಬಳಿಕ ತಿರುಪತಿ ತಿಮ್ಮಪ್ಪನಿಗೆ ಭಾರೀ ಲಾಸ್ ಆಗ್ತಿದೆಯಂತೆ. ಯಾಕಂದ್ರೆ, ಭಕ್ತರು ಬ್ಯಾನ್ ಆಗಿರುವ ನೋಟುಗಳನ್ನೇ ದೇವರ ಹುಂಡಿಗೆ ಹಾಕಿದ್ದಾರೆ. ಪರಿಣಾಮ ಈವರೆಗೆ ನಿಷಿದ್ಧ ನೋಟುಗಳ ಒಟ್ಟು ಮೊತ್ತವೇ ಸುಮಾರು 25ಕೋಟಿ ರೂಪಾಯಿ ಆಗಿದೆ ಎಂದು ದೇಗುಲ ಸಮಿತಿ ಟಿಟಿಡಿಯಿಂದ ತಿಳಿದು ಬಂದಿದೆ.
ಭಕ್ತರ ಭಾವನೆಗಳಿಗೆ ಗೌರವಿಸುವ ಕಾರಣಕ್ಕಾಗಿ ದೇವರ ಹುಂಡಿಯಲ್ಲಿ ಜಮಾ ಆಗಿರುವ ಹಣವನ್ನು ವಿನಿಮಯ ಮಾಡಿಕೊಡಬೇಕೆಂದು ಟಿಟಿಡಿಯ ಓ.ಬಾಲಾಜಿ ಭಾರತೀಯ ರಿಸರ್ವ ಬ್ಯಾಂಕಿಗೆ ಮನವಿ ಮಾಡಿದ್ದಾರೆ. ಸಕಾರಾತ್ಮಕ ಉತ್ತರಕ್ಕಾಗಿ ಟಿಟಿಡಿ ಕಾಯುತ್ತಿದ್ದು ನಗದುದಾಸ್ತಾನನ್ನು ದೇಗುಲದಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ ಎನ್ನಲಾಗಿದೆ.
ತಿಮ್ಮಪ್ಪನಿಗೆ ಹಣ ಹಾಕಿದಷ್ಟು ಆರ್ಥಿಕ ಬೆಳವಣಿಗೆ ಆಗುತ್ತದೆ ಎಂಬ ನಂಬಿಕೆಯಿದೆ. ಪರಿಣಾಮ ದೇಗುಲಕ್ಕೆ ಹೋದವರೆಲ್ಲಾ ಹೆಚ್ಚು ಹೆಚ್ಚು ಹಣವನ್ನು ಹುಂಡಿಗೆ ಹಾಕಿಯೇ ಬರುತ್ತಾರೆ. ಕೆಲವರಂತೂ ತಿರುಪತಿಯ ಹುಂಡಿಗೆ ಹಾಕಲೆಂದೇ ವರ್ಷಗಟ್ಟಲೇ ಹಣ ಜಮಾಯಿಸಿರುತ್ತಾರೆ. ಆದರೆ, ಇದೀಗ ಇಷ್ಟೊಂದು ಪ್ರಮಾಣದ ನಿಷಿದ್ಧ ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.