ಕೇಂದ್ರ ಸಚಿವರ ಮಗ ಅಂಥೇಳಿ ಶಾಸಕರಿಗೆ ಯಾಮಾರಿಸಿದ ಭೂಪ!
MLA ಗೆ ಮಕಮಲ್ ಟೋಪಿ ಹಾಕಲು ಹೋದ ಮೂವರು ಅಂದರ್!
ಬಳ್ಳಾರಿ: ಲಕ್ಕಿ ಡ್ರಾದಲ್ಲಿ ನಿಮಗೆ 1 ಕೋಟಿ ರೂ. ಬಹುಮಾನ ಬಂದಿದೆ. ನಿಮ್ಮ ಮೊಬೈಲ್ ನಂಬರ್ ಸಲೆಕ್ಟ್ ಆಗಿದೆ ಅಂತಾ ಅನೇಕ ಮೆಸೇಜ್ ನಿಮಗೂ ಬಂದಿರಬಹುದು. ಹಾಗಂತ ಬಹುಮಾನ ಪಡೆಯಲು ಹೋದರೆ ಟ್ಯಾಕ್ಸ್ ಪೇ ಮಾಡಲು ಮೊದಲು ಹಣ ಹಾಕಿ ಅಂತ ಯಾಮರಿಸುವ ಅನೇಕ ವಂಚನೆ ಸ್ಟೋರಿಗಳು ನಿಮಗೂ ಗೊತ್ತಿದೆ. ಆದರೆ, ಬಳ್ಳಾರಿಗೆ ಬಂದ ಭೂಪನೊಬ್ಬ ಕೇಂದ್ರ ಸಚಿವರ ಪುತ್ರ ಎಂದು ಹೇಳಿಕೊಂಡು ಖುದ್ದು ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಗೆ ವಾಟ್ಸಪ್ ಮೆಸೇಜ್ ಮಾಡಿ ಯಾಮಾರಿಸಿದ್ದಾನೆ.
ನಾನು ಆಂದ್ರ ಮೂಲದ ಕೇಂದ್ರ ಸಚಿವರ ಪುತ್ರ. ಹಂಪಿ ನೋಡಲು ಬಂದಿದ್ದೇನೆ. ನಿಮ್ಮ ನೆರವು ಬೇಕು. ಆಗಲೇ ನಿಮಗೆ ಕಾಲ್ ಮಾಡಿದೆ ಬಟ್ ಕನೆಕ್ಟ್ ಆಗಲಿಲ್ಲ. ನೀವು ಫ್ರೀ ಆದ್ಮೇಲೆ ಕಾಲ್ ಬ್ಯಾಕ್ ಮಾಡಿ ಅಂತ ಮೆಸೇಜ್ ಹಾಕಿದ್ದಾನೆ. ಅದನ್ನು ನಂಬಿದ ಶಾಸಕರು ಅವನನ್ನು ಸಂಪರ್ಕಿಸಿ ತಮ್ಮದೇ ದುಬಾರಿ ರೇಂಜ್ ರೋವರ್ ಕಾರಿನಲ್ಲಿ ಹಂಪಿ ತೋರಿಸಲು ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ತಮ್ಮ ಕಾರು ಚಾಲಕನನ್ನು ಕಳುಹಿಸಿಕೊಟ್ಟಿದ್ದಾರೆ.
ಪಕ್ಕಾ ಮೋದಿ ಡ್ರೆಸ್ ನಲ್ಲಿ ಬಂದಿದ್ದ ಯುವಕನ ಮೇಲೆ ಸ್ವಲ್ಪ ಹೊತ್ತಿನಲ್ಲೇ ಅನುಮಾನ ಶುರುವಾಗಿದೆ. ಹೀಗಾಗಿ, ವಿಚಾರಿಸಿದಾಗ ವಂಚಕರ ನಿಜ ಬಣ್ಣ ಬಯಲಾಗಿದೆ. ಪರಿಣಾಮ ಆಂಧ್ರಪ್ರದೇಶ ಮೂಲದ ರಾಬಿನ್ ಸೇರಿದಂತೆ ಮೂವರು ವಂಚಕರನ್ನು ಕಮಲಾಪುರ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ. ಕಮಲಾಪುರ ಠಾಣೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.