ಸ್ವಯಂ ರಕ್ಷಣೆಗೆ ಟ್ರಾಫಿಕ್ ರೂಲ್ಸ್ ಪಾಲನೆ ಅಗತ್ಯಃ ಐಜಿಪಿ ಅಲೋಕ
ಟ್ರಾಫಿಕ್ ನಿಯಮ ಪಾಲಿಸಿದವರಿಗೆ ಗುಲಾಬಿ ಹೂ ನೀಡಿದ ಐಜಿಪಿ ಅಲೋಕಕುಮಾರ
ಶಹಾಪುರಃ ದಿನನಿತ್ಯ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಸುರಕ್ಷತೆಯ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಈ ದಿಸೆಯಲ್ಲಿ ಪೊಲೀಸ್ ಇಲಾಖೆ ಟ್ರಾಫಿಕ್ ನಿಯಮ ಪಾಲನೆಗೆ ಹೆಚ್ಚು ಜಾಗೃತಿಗೆ ಮುಂದಾಗುತ್ತಿದ್ದು, ನಗರದಲ್ಲಿ ಬುಧವಾರದಂದು ಸಂಜೆ ಐ.ಜಿ.ಪಿ ಅಲೋಕ ಕುಮಾರ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್ ನಿಯಮ ಪಾಲಿಸಿದವರಿಗೆ ಗುಲಾಬಿ ಹೂ ನೀಡುವುದರ ಮೂಲಕ ಶುಭ ಹಾರೈಸುವ ಮತ್ತು ನಿಯಮ ಪಾಲನೆ ಮಾಡದ ವಾಹನ ಸವಾರರಿಗೆ ಸೂಕ್ತ ಸೂಚನೆ ನೀಡುವ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಅಭಿಪ್ರಾಯ ಹಂಚಿಕೊಂಡ ಐ.ಜಿ.ಪಿ. ಅಲೋಕ ಕುಮಾರ, ಟ್ರಾಫಿಕ್ ನಿಯಮ ಪಾಲನೆ ಸ್ವಯಂ ರಕ್ಷಣೆಗೆ ಅತ್ಯಂತ ಅವಶ್ಯಕತೆ ಇದ್ದು, ಪ್ರತಿಯೊಬ್ಬರು ನಿಯಮ ಪಾಲನೆ ಮಾಡಬೇಕು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕು ಈ ಕುರಿತು ಸುಪ್ರೀಂಕೋರ್ಟ ಆದೇಶ ನೀಡಿದ್ದು, ಕಾನೂನು ಪಾಲನೆ ಮಾಡಬೇಕು ಎಂದ ಅವರು, ವಾಹನಗಳ ನೋಂದಣಿ, ಪರವಾನಿಗೆ ಪಡೆಯಬೇಕು. ಪ್ರತಿಯೊಬ್ಬರು ಜಾಗೃತಿ ವಹಿಸುವ ಮೂಲಕ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಎಸ್ಪಿ ಯಡಾಮಾರ್ಟೀನ್ ಮಾರ್ಬನ್ಯಾಂಗ್, ಎ.ಎಸ್.ಪಿ. ಶಿವಪ್ರಕಾಶ ದೇವರಾಜ, ಪಿ.ಐ. ನಾಗರಾಜ.ಜೆ. ಮತ್ತು ಪೊಲೀಸ್ ಇಲಾಖೆಯ ಮುಖ್ಯಸ್ಥರು, ಸಿಬ್ಬಂದಿ ವರ್ಗ ಹಾಜರಿದ್ದರು. ಐಜಿಪಿ ಯವರ ಟ್ರಾಫಿಕ್ ಜಾಗೃತಿ ಕಾರ್ಯಕ್ರಮ ನೋಡಲು ನೂರಾರು ಜನರು ಸೇರಿದ್ದರು. ರೂಲ್ಸ್ ಪಾಲನೆ ಅಗತ್ಯವೆಂದು ಮೆಚ್ಚುಗೆಯೂ ವ್ಯಕ್ತಪಡಿಸಿದರು. ಕೆಲವರು ಒಂದೆರಡು ದಿನ ಮಾತ್ರ ಮಾಡುತ್ತಾರೆ. ಆಮೇಲೆ ಮತ್ತದೆ ಹಾಡು ಅದೇ ತಾಳ ಎಂದು ಕೆಲವರು ಗೊಣಗಿದರು. ಒಟ್ಟಾರೆ ಕಾನೂನು ಪಾಲನೆ ನಮ್ಮೆಲ್ಲರ ಕರ್ತವ್ಯವಾಗಿದೆ. ನಾವೆಲ್ಲರೂ ಸಮರ್ಪಕವಾಗಿ ಪಾಲಿಸಿದ್ದಲ್ಲಿ ಅಪಘಾತಗಳ ಸಂಖ್ಯೆ ಇಳಿಮುಖವಾಗಲಿದೆ ಎಂಬ ಅರಿವು ಸಾರ್ವಜನಿಕರಲ್ಲಿ ಮೂಡವುದು ಯಾವಾಗ.? ಎಂಬುದೇ ಯಕ್ಷ ಪ್ರಶ್ನೆ.