ಶಹಾಪುರಃ ಮಹಾರಾಷ್ಟ್ರದವರಿಗೆ ನಿರ್ಮಲ ಸಂಸ್ಥೆಯಿಂದ ದವಸ ಧಾನ್ಯ ವಿತರಣೆ
ಮಹಾರಾಷ್ಟ್ರ ಮೂಲದ ಕಾರ್ಮಿಕರಿಗೆ ನಿರ್ಮಲ ಬಿಸಿಯೂಟ ಸಂಸ್ಥೆಯಿಂದ ಅನ್ನದಾಸೋಹ
ಶಹಾಪುರಃ ಮಹಾರಾಷ್ಟ್ರ ಮೂಲದ ಸುಮಾರು 250 ಕಾರ್ಮಿಕರು ಕಬ್ಬು ಕಟಾವು ಮಾಡಲು ಕೂಲಿ ಕೆಲಸಕ್ಕಾಗಿ ತಮಿಳುನಾಡಿಗೆ ತೆರಳಿದ್ದರು. ಸದ್ಯದ ಕೊರೊನಾ ಹಾವಳಿಯಿಂದಾಗಿ ತಮಿಳುನಾಡಿನಿಂದ ಮಹಾರಾಷ್ಟ್ರ ಕಾರ್ಮಿಕರನ್ನು ತಮಿಳುನಾಡು ಸರ್ಕಾರ ತವರಿಗೆ ತೆರಳುವಂತೆ ಕಳುಹಿಸಿದೆ.
ಮಾರ್ಗ ಮಧ್ಯ ಲಾರಿಗಳಲ್ಲಿ ಆಗಮಿಸಿದ್ದ ಈ ಕಾರ್ಮಿಕರು ಸದ್ಯ ಸೋಮವಾರ ಶಹಾಪುರ ಪಟ್ಟಣಕ್ಕೆ ಆಗಮಿಸಿದ್ದು, ಪರಿತಪಿಸುತ್ತಿದ್ದ ಇವರನ್ನು ತಾಲೂಕು ಆಡಳಿತ ಗಮನಿಸಿ ಇಲ್ಲಿನ ಡಿಗ್ರಿ ಕಾಲೇಜು ಆವರಣದಲ್ಲಿ ತಂಗುವ ವ್ಯವಸ್ಥೆ ಮಾಡಿದೆ.
ಈ ವಿಷಯ ಅರಿತ ನಗರದ ನಿರ್ಮಲ ಬಿಸಿಯೂಟ ಸಂಸ್ಥೆಯ ಸಂಸ್ಥಾಪಕ, ಮಾಲೀಕರಾದ ವಿಶ್ವನಾಥರಡ್ಡಿ ದರ್ಶನಾಪುರ ಅವರು ಸ್ಥಳಕ್ಕೆ ತೆರಳಿ ಕಾರ್ಮಿಕರಿಗೆ ಬೇಕಾದ ಅಕ್ಕಿ, ಬ್ಯಾಳಿ, ಒಳ್ಳೆಣ್ಣಿ ಸೇರಿದಂತೆ ಬಿಸ್ಕಿಟ್ ಇತರೆ ಸಾಮಾಗ್ರಿಗಳನ್ನು ಉಚಿತವಾಗಿ ವಿತರಿಸಿದರು. ಅಲ್ಲದೆ ಇದೇ ಸಂದರ್ಭದಲ್ಲಿ ಕಾರ್ಮಿಕರು ಇಲ್ಲಿಂದ ಸುಖಾಂತ್ಯವಾಗಿ ತಮ್ಮ ಮೂಲ ಗ್ರಾಮಕ್ಕೆ ತೆರಳುವವರೆಗೆ ಊಟದ ವ್ಯವಸ್ಥೆ ದಿನಸಿಗಳನ್ನು ಕೊಡಿಸುವದಾಗಿ ಭರವಸೆ ನೀಡಿದರು.
ಇಂತಹ ವಿಷಮ ಸ್ಥಿತಿಯಲ್ಲಿ ಒಪ್ಪತ್ತಿನ ಊಟಕ್ಕೂ ಪರದಾಡುತ್ತಿರುವ ಕಾರ್ಮಿಕರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಿದ ವಿಶ್ವನಾಥರಡ್ಡಿ ದರ್ಶನಾಪುರ ಅವರ ಕಾರ್ಯ ಮೆಚ್ಚುವಂತಹದ್ದು, ಇಂತಹ ವೇಳೆ ಮಹನೀಯರೆಲ್ಲರೂ ಕೈಲಾದ ಸಹಾಯ ಸಹಕಾರ ನೀಡುವ ಅಗತ್ಯವಿದೆ. ಆ ನಿಟ್ಟಿನಲ್ಲಿ ನಗರದಲ್ಲಿ ಹಲವಾರು ಯುವಪಡೆ ಕಾರ್ಯಪ್ರವೃತ್ತರಾಗಿರುವದು ಸಮಾಧಾನ ತರುವ ವಿಷಯವಾಗಿದೆ.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಿ.ಎಸ್. ಸೂರ್ಯವಂಶಿ, ಸಂಜೀವರಡ್ಡಿ ದರ್ಶನಾಪುರ, ಸಿಆರ್ಪಿ ಮಲ್ಕಪ್ಪ ಶಿರವಾಳ, ವಿಶ್ವನಾಥರಡ್ಡಿ ಚೌದಿ, ಶಿವಲಿಂಗ ಬಾಚಿಬಾಳ, ದೇವಿಂದ್ರ ಕನ್ಯಾಕೋಳೂರ ಇತರರಿದ್ದರು.