ಜಿಲ್ಲೆಯ ವಿವಿಧ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಭೇಟಿ; ಪರಿಶೀಲನೆ
ಮತದಾನಕ್ಕಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ –ಡಿಸಿ ಎಂ. ಕೂರ್ಮಾರಾವ್
ಯಾದಗಿರಿಃ ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಜಿಲ್ಲೆಯ 1,135 ಮತಗಟ್ಟೆಗಳಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದೆ. ಮತದಾನಕ್ಕಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ. ಆದ್ದರಿಂದ ಮತದಾರರು, ಅಂದು ಯಾವುದೇ ಕೆಲಸ ಇದ್ದರೂ ಬಿಡುವು ಮಾಡಿಕೊಂಡು ತಮ್ಮ ವ್ಯಾಪ್ತಿಯ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಮನವಿ ಮಾಡಿದರು.
ಜಿಲ್ಲೆಯ ನಾಯ್ಕಲ್, ಕಾಡಮಗೇರಾ, ತುಮಕೂರು ಗ್ರಾಮಗಳ ಮತಗಟ್ಟೆಗಳಿಗೆ ಬುಧವಾರ ಭೇಟಿ ನೀಡಿದ ಅವರು ರ್ಯಾಂಪ್, ಕುಡಿಯುವ ನೀರು, ಶೌಚಾಲಯ ಹಾಗೂ ವಿದ್ಯುತ್ ವ್ಯವಸ್ಥೆಯನ್ನು ಪರಿಶೀಲಿಸಿದರು. ನಂತರ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ, ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಆಲಿಸಿದರು. ಜೊತೆಗೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದರು.
ಮತದಾನವು ಪ್ರತಿಯೊಬ್ಬ ಭಾರತೀಯನಿಗೂ ಸಂವಿಧಾನ ನೀಡಿದ ಬಹುದೊಡ್ಡ ಹಕ್ಕಾಗಿದೆ. ಮತದಾರರು ಈ ಅವಕಾಶವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ಶೇ.100ರಷ್ಟು ಮತದಾನ ದಾಖಲಾದರೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ.
ಮತದಾರರು ಅನಾಯಸವಾಗಿ ಮತದಾನ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಸಕಲ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ, ಈ ಬಾರಿ ವಿಕಲಚೇತನ ಮತ್ತು ಹಿರಿಯ ಮತದಾರರು ಯಾವುದೇ ತೊಂದರೆ ಇಲ್ಲದೆ ಮತ ಚಲಾಯಿಸಲು ವ್ಹೀಲ್ ಚೇರ್ ಜೊತೆಗೆ ವಾಹನದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಚುನಾವಣೆ ಸಂಬಂಧ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸಹಾಯವಾಣಿ-1950 ಸಂಖ್ಯೆಯನ್ನು ಸ್ಥಾಪಿಸಲಾಗಿದ್ದು, ದಿನದ 24 ಗಂಟೆ ಕಾರ್ಯನಿರ್ವಹಣೆಯಲ್ಲಿರುತ್ತದೆ. ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಚುನಾವಣೆಗೆ ಸಂಬಂಧಿಸಿದಂತೆ ಮತ್ತು ಮತದಾರರ ಪಟ್ಟಿಯ ಕುರಿತು ಯಾವುದೇ ದೂರುಗಳನ್ನು ಸಲ್ಲಿಸಬಹುದು ಹಾಗೂ ಮಾಹಿತಿಯನ್ನು ಪಡೆಯಬಹುದಾಗಿದೆ. ಅಲ್ಲದೇ, ಕಂಟ್ರೋಲ್ ರೂಮ್ ಕೂಡ ತೆರೆಯಲಾಗಿದ್ದು, ಸಾರ್ವಜನಿಕರು ದೂರವಾಣಿ ಸಂಖ್ಯೆ: 08473-253772 ಗೆ ಕರೆ ಮಾಡುವುದರ ಮೂಲಕ ದೂರನ್ನು ಸಲ್ಲಿಸಬಹುದು ಹಾಗೂ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಭಾರತ ಚುನಾವಣಾ ಆಯೋಗವು ಚುನಾವಣೆಯಲ್ಲಿ ಅಕ್ರಮ ತಡೆಗಟ್ಟಲು ಸಿ-ವಿಜಿಲ್ (c-vigil) ಆ್ಯಪ್ ಪರಿಚಯಿಸಿದ್ದು, ಈ ಆ್ಯಪ್ ಮೂಲಕ ಚಿತ್ರ ಹಾಗೂ ವೀಡಿಯೊ ಸಹಿತ ದೂರು ನೀಡಬಹುದಾಗಿದೆ. ಸಿ-ವಿಜಿಲ್ ಆ್ಯಪ್ ಮುಕ್ತವಾಗಿದ್ದು, ಸಾರ್ವಜನಿಕರು ಯಾರು ಬೇಕಾದರೂ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಚುನಾವಣೆಗೆ ಸಂಬಂಧಪಟ್ಟಂತೆ ಮತದಾರರಿಗೆ ಒಡ್ಡುವ ಆಮಿಷಗಳು, ಸಲ್ಲದ ಹೇಳಿಕೆಗಳು ಸೇರಿದಂತೆ ಯಾವುದೇ ರೀತಿಯ ಚುನಾವಣಾ ಅಕ್ರಮ ನಡೆದರೆ ಕೂಡಲೆ ಮೊಬೈಲ್ನಲ್ಲಿ ಸಿ-ವಿಜಲ್ ಅಪ್ಲಿಕೇಷನ್ ತೆರೆದು ಫೋಟೊ, ವೀಡಿಯೊ ಸಹಿತ ದೂರು ಸಲ್ಲಿಸಬಹುದಾಗಿದೆ.
ಈ ರೀತಿ ಸಲ್ಲಿಕೆಯಾದ ದೂರು ನೇರವಾಗಿ ಕಂಟ್ರೋಲ್ ರೂಮ್ಗೆ ರವಾನೆಯಾಗಲಿದ್ದು, ಕ್ರಮದ ಕುರಿತು ಸೂಕ್ತ ಪ್ರತಿಸ್ಪಂದನೆ ದೊರೆಯಲಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ತಹಶೀಲ್ದಾರ್ ಸಂತೋಷಿರಾಣಿ ಅವರು ಹಾಜರಿದ್ದರು.