ವೈನ್ಶಾಪ್ ಸ್ಥಳಾಂತರಕ್ಕೆ ಆಗ್ರಹಿಸಿ ಕಕ್ಕೇರಾ ಬಂದ್, ಧರಣಿ
ಸುರಪುರಃ ವೈನ್ಶಾಪ್ ಸ್ಥಳಾಂತರಿಸಲು ಡಿಎಸ್ಎಸ್ ಪಟ್ಟು, ಧರಣಿ
ಯಾದಗಿರಿಃ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಡಾ.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಮ ವೃತ್ತದ ಹತ್ತಿರ ಪ್ರಸ್ತುತ ನೂತನ ವೈನ್ಶಾಪ್ ತೆರೆಯಲು ಸಿದ್ಧತೆ ನಡೆದಿದೆ. ಕೂಡಲೇ ವೈನ್ ಶಾಪ್ ತೆರೆಯುವುದನ್ನು ತಡೆಯಬೇಕೆಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ಕಕ್ಕೇರಾ ಪಟ್ಟಣ ಬಂದ್ ಕರೆ ನೀಡಿತ್ತು. ಬಂದ್ ಗೆ ಸ್ಪಂದನೆ ವ್ಯಕ್ತವಾಗಿದ್ದು ಬಹುತೇಕ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿತ್ತು.
ಈಗಾಗಲೇ ಡಾ.ಬಾಬು ಜಗಜೀವನರಾಮ ಮತ್ತು ಡಾ.ಅಂಬೇಡ್ಕರ ವೃತ್ತದ ಬಳಿ ಒಂದು ವೈನ್ಶಾಪ್ ಗೆ ಅವೈಗ್ನಾನಿಕವಾಗಿ ಪರವಾನಿಗೆ ನೀಡಲಾಗಿದೆ. ಇದೀಗ ಮತ್ತೊಂದು ವೈನ್ಶಾಪ್ ಹಾಕಲು ಪರವಾನಿಗೆ ನೀಡಲಾಗಿದೆ. ತಾಲೂಕು ಅಬಕಾರಿ ಅಧಿಕಾರಿಗಳ ಸಂಪೂರ್ಣ ಬೇಜವಬ್ದಾರಿತನವೇ ಇಲ್ಲಿ ತೋರುತ್ತಿದೆ. ಹೀಗಾಗಿ, ಕೂಡಲೇ ಹಳೇ ವೈನ್ ಶಾಪ್ ಮತ್ತು ಇದೀಗ ಹೊಸದಾಗಿ ತೆರೆಯಲು ಮುಂದಾಗಿರುವ ವೈನ್ಶಾಪ್ ಎರಡನ್ನು ಬೇರಡೆ ಸ್ಥಳಾಂತರಿಸಬೇಕು ಎಂದು ಡಿಎಸ್ಎಸ್ ಕಾರ್ಯಕರ್ತರು ಧರಣಿ ನಡೆಸಿದ್ದಾರೆ. ಡಿಎಸ್ ಎಸ್ ಗೆ ಸಾರ್ವಜನಿಕರು ಸಾಥ್ ನೀಡಿದ್ದು ಪಟ್ಟು ಹಿಡಿದು ರಸ್ತೆ ಮೇಲೆ ಕುಳಿತು ಧರಣಿ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಬಕಾರಿ ಕಾಯ್ದೆ ಪ್ರಕಾರ, ಎಸ್.ಸಿ. ಎಸ್.ಟಿ. ಬಡಾವಣೆ ಮತು ರಾಷ್ಟ್ರೀಯ ನಾಯಕರ ಪುತ್ಥಳಿ ಹತ್ತಿರ ಅಂದಾಜು 100 ಮೀ.ವರೆಗೂ ವೈನ್ಶಾಪ್ ಮತ್ತು ಮಧ್ಯ ಮಾರಾಟ ಮಾಡುವ ಯಾವುದೇ ಬಾರ್ ಆಂಡ್ ರೆಸ್ಟಾರೆಂಟ್ಗಳಿಗೆ ಪರವಾನಿಗೆ ನೀಡಬಾರದೆಂಬ ನಿಯಮವಿದೆ. ಕಾಯ್ದೆ ಅನ್ವಯ ಪರವಾನಿಗೆ ನೀಡಲು ಬರುವುದಿಲ್ಲ. ಆದರೂ ಅಬಕಾರಿ ಅಧಿಕಾರಿಗಳು ವೈನ್ಶಾಪ್ ನಡೆಸಲು ಪರವಾನಿಗೆ ನೀಡಿರುವುದು ಖಂಡನಾರ್ಹವಾಗಿದೆ.
ಕಾರಣ ಮೇಲಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ತನಿಖೆ ನಡೆಸಿ ವೈನ್ಶಾಪ್ ಸ್ಥಳಾಂತರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ದಲಿತ ಬಡಾವಣೆಗಳು ಇಲ್ಲಿದ್ದು, ಮತ್ತು ರಾಷ್ಟ್ರ ನಾಯಕರ ಪುತ್ಥಳಿಗಳ ಸಮೀಪವೆ ವೈನ್ಶಾಪ್ ತೆರೆಯಲು ಅನುಮತಿ ನೀಡಿರುವುದು ಎಷ್ಟುಸೂಕ್ತ ಎಂದು ಪ್ರಶ್ನೆ ಮಾಡಿದ ಧರಣಿ ನಿರತರು, ಮುಂಬರುವ ದಿನಗಳಲ್ಲಿ ಅನಾಹುತ ಸಂಭವಿಸಿದ್ದಲ್ಲಿ ಅಬಕಾರಿ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.
ಈ ಮೊದಲು ಎರಡು ಮೂರು ಬಾರಿ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು,
ಕೂಡಲೇ ವೈನ್ಶಾಪ್ ಸ್ಥಳಾಂತರಿಸದಿದ್ದರೆ ಮುಂಬರುವ ದಿನಗಳಲ್ಲಿ ಸಮೀಪದ ಶಾಂತಪುರ ಕ್ರಾಸ್ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮುಂಚಿತವಾಗಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಳಿಕ ಬಾಬು ಜಗಜೀವನ ವೃತ್ತದಲ್ಲಿ ಸಮಾವೇಶಗೊಂಡು ಧರಣಿ ನಡೆಸಲಾಯಿತು. ನಂತರ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಪ ಆಯುಕ್ತ , ಅಬಕಾರಿ ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಅಬಕಾರಿ ಅಧಿಕಾರಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ತಹಸೀಲ್ದಾರ ಸುರೇಶ ಅಂಕಲಗಿ ಜೊತೆಯಲ್ಲಿದ್ದರು.
ಈ ಸಂದರ್ಭದಲ್ಲಿ ಡಿಎಸ್ ಎಸ್ ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ, ಜಿಲ್ಲಾ ಸಂಚಾಲಕ ಸದ್ಧಾಂಹುಸೇನ್, ತಾಲೂಕು ಸಂಚಾಲಕ ಶಿವಶಂಕರ ಹೆಚ್. ಹೊಸಮನಿ, ಜುಮ್ಮಣ್ಣ ಬಲಶೆಟ್ಟಿಹಾಳ, ಮರೆಪ್ಪ ಕಟ್ಟಿಮನಿ, ದೇವು ಕಕ್ಕೇರಾ, ಮರೆಪ್ಪ ಕಾಂಗ್ರೆಸ್, ಸಿದ್ದಣ್ಣ ಕಕ್ಕೇರಾ, ಪರಮಣ್ಣ ಕಟ್ಟಿಮನಿ ಸೇರಿದಂತೆ ಇತರರು ಭಾಗವಹಿಸಿದ್ದರು.