ಸಾಹಿತ್ಯ

ಈವಜ್ಜನ ಕಥನದಲ್ಲಿದೆ ಮರಣ ಮುಂದೂಡುವ ಮಂತ್ರ!

ಕಲಬುರಗಿಯ ಕೋಟನೂರಿನಲ್ಲಿ ಇತ್ತೀಚೆಗಷ್ಟೇ ವಿಜಯಕುಮಾರ ಎಂಬ ವ್ಯಕ್ತಿಗೆ ಕೋಟನೂರಿನ ಕರಿಬಸ್ಸಮ್ಮ ದೇವಿ ಕನಸಲಿ ಬಂದು ಮೂರು ದಿನ ಅನುಷ್ಠಾನ ಮಾಡು. ಇಲ್ಲವಾದಲ್ಲಿ ಮರಣ ಸಂಭವಿಸಲಿದೆ ಎಂದಿದ್ದಳಂತೆ. ಜೀವ ಭಯದಿಂದ ವಿಜಯ್ ಎದೆಮಟ್ಟದ ತನಕ ಮಣ್ಣಿನಲ್ಲಿ ಮುಳುಗಿ ಅನುಷ್ಠಾನಕ್ಕೆ ಕುಳಿತಿದ್ದ. ಮೂರು ದಿನದ ಬಳಿಕ ಮಹಾ ಪವಾಡ ಪುರುಷನಂತೆ ವಿಜಯಕುಮಾರನ ಮೆರವಣಿಗೆ ಮಾಡಲಾಗಿದೆ. ಸಾವು ಗೆದ್ದ ಸಂಭ್ರಮದಲ್ಲಿ ಆ ಯುವಕ ದೇವರು ಮೈಮೇಲೆ ಬಂದವರಂತೆ ಕುಣಿದಿದ್ದ. ಈ ಘಟನೆ ಬಗ್ಗೆ ಕೇಳಿದಾಗ ಬೆಳಗೆರೆ ಕೃಷ್ಣಶಾಸ್ತ್ರಿ ಅವರ ಯೇಗ್ದಾಗೆಲ್ಲಾ ಐತೆ ಕೃತಿಯಲ್ಲಿನ ಅದ್ಭುತ ಕಥನ ನೆನಪಾಯಿತು. ನನ್ನ ಸ್ಮೃತಿ ಪಟಲದಲ್ಲಿದ್ದಷ್ಟು ಹೇಳ್ತೀನಿ ಕೇಳಿ… ಸಾಧ್ಯವಾದರೆ ಖುದ್ದಾಗಿ ಯೇಗ್ದಾಗೆಲ್ಲಾ ಐತೆ ಕೃತಿಯನ್ನೊಮ್ಮೆ ಓದಿಬಿಡಿ…

ಊರಲ್ಲೋರ್ವ ಜಮೀನ್ದಾರನಿರುತ್ತಾನೆ. ಆ ಜಮೀನ್ದಾರನಿಗೆ ದೇವರ ಮೇಲೆ ಎಲ್ಲಿಲ್ಲದ ಭಕ್ತಿ. ಜಾತಕ ಫಲಗಳ ಮೇಲೆ ಬಲು ನಂಬಿಕೆ. ಪ್ರತಿಯೊಂದಕ್ಕೂ ಜಾತಕ, ಫಲಾಫಲಗಳನ್ನು ನೋಡಿಯೇ ಮುನ್ನಡೆಯುತ್ತಿರುತ್ತಾನೆ. ಆತನ ಜಾತಕದಲ್ಲಿ ಬರೆದದ್ದೆಲ್ಲವೂ ಬಹುತೇಕ ನಿಜವಾಗಿರುತ್ತದೆ. ಆ ಜಾತಕದಲ್ಲಿ ಜಮೀನ್ದಾರನ ಸಾವಿನ ದಿನ, ಸಮಯ ಸಮೇತ ಪ್ರಕಟವಾಗಿರುತ್ತದೆ. ಒಂದಿನ ಜಾತಕ ನೋಡಿದ ಜಮೀನ್ದಾರ ಗಾಬರಿ ಆಗುತ್ತಾನೆ. ಸಾವಿನ ಸಮಯ ಸಮೀಪವೇ ಬಂದಿರುತ್ತದೆ. ಮೊದಲು ಮಕ್ಕಳಿಗೆ ಆಸ್ತಿ ಭಾಗ ಮಾಡಿ ಕೊಡಲು ನಿರ್ಧರಿಸುತ್ತಾನೆ. ತನ್ನ ಸಾವಿನ ಬಳಿಕ ಯಾರೂ ಕೋರ್ಟು ಕಚೇರಿ ಅಂತ ಅಲೆಯಬಾರದೆಂದು ಕೊಳ್ಳುತ್ತಾನೆ. ಆದ್ರೆ, ಮಕ್ಕಳು ಮಾತ್ರ ಒಪ್ಪೋದಿಲ್ಲ. ನಾವೇ ಪಾಲು ಕೇಳಿಲ್ಲ, ಎಲ್ರೂ ಚನ್ನಾಗಿದ್ದೀವೆ ನೀವೇಕೆ ಭಾಗ ಮಾಡಲು ಹೊರಟಿದ್ದೀರಿ ಅಂತ ಪ್ರಶ್ನಿಸುತ್ತಾರೆ.

ಏನೊಂದೂ ತೋಚದಂತಾಗಿ ಜಮಿನ್ದಾರ ಒಬ್ಬನೇ ಒಬ್ಬ ಆತ್ಮೀಯನಿಗೆ ಜಾತಕದ ವಿಷಯ ಹೇಳುತ್ತಾನೆ. ದಿನ ಕಳೆದಂತೆ ಊರೆಲ್ಲಾ ಸುದ್ದಿ ಹಬ್ಬುತ್ತದೆ. ಎಲ್ಲರೂ ಜಮೀನ್ದಾರನನ್ನು ಮಾತನಾಡಿಸಲು ಮನೆಗೆ ಹೋಗಲಾರಂಭಿಸುತ್ತಾರೆ. ಕೃಷ್ಣಶಾಸ್ತ್ರಿ ಬೆಳಗೆರೆ ಅವರಿಗೂ ಸುದ್ದಿ ತಲಪುತ್ತದೆ. ಶಾಸ್ತ್ರಿ ಅವರು ಕೇಳಿ ನುಸುನಕ್ಕು ಸುಮ್ಮನಾಗುತ್ತಾರೆ. ಆದ್ರೆ, ಜಮೀನ್ದಾರನ ಸಾವಿನ ದಿನ ಬಂದೇ ಬಿಡುತ್ತದೆ. ಜಮೀನ್ದಾರ ಸಾವಿಗೆ ಶರಣಗಾಲು ಮೆಂಟಲಿ ಪ್ರಿಪೇರ್ ಆಗಿರುತ್ತಾನೆ. ಮನೆ ಎದುರು ಶಾಮಿಯಾನ ಹಾಕಲಾಗಿರುತ್ತದೆ. ಬಂಧು ಬಳಗದವರೆಲ್ಲಾ ಬಂದು ಜಮೀನ್ದಾರನ ಮನೆಯಲ್ಲಿ ಠಿಕಾಣಿ ಹೂಡಿರುತ್ತಾರೆ.

ಅದೇ ದಿನ ಬೆಳಗಿನ ಜಾವ ಮನೆ ಬಳಿ ಕುಳಿತಿದ್ದ ಬೆಳಗೆರೆ ಕೃಷ್ಣಶಾಸ್ತ್ರಿ ಅವರಿಗೆ ಗುರುಗಳಾದ ಮುಕುಂದೂರು ಸ್ವಾಮಿಗಳು ಪ್ರತ್ಯಕ್ಷವಾಗುತ್ತಾರೆ. ಅಲ್ಲ ಕಣಯ್ಯ ಆ ಜಮೀನ್ದಾರ ನಿನಗೆ ಅಷ್ಟೆಲ್ಲಾ ನೆರವಾಗಿದ್ದಾನೆ. ಆತನಿಗೆ ನೀನು ನೆರವಾಗುವುದು ಬೇಡವೇ. ಹೋಗು ಕಲ್ಲಿನಷ್ಟೇ ಗಟ್ಟಿಯಾಗಿದ್ದೀಯಾ ಅಂತ ಹೇಳೋಗು ಅಂದು ಮಾಯವಾಗುತ್ತಾರೆ. ಇಕ್ಕಟ್ಟಿಗೆ ಸಿಲುಕಿದ ಕೃಷ್ಣಶಾಸ್ತ್ರಿ ಅವರು ಹೇಗೆ ಹೇಳೋದು ಅಂತ ಅಳಕಿನಿಂದಲೇ ಜಮೀನ್ದಾರನ ಮನೆ ಬಳಿಗೆ ತೆರಳುತ್ತಾರೆ. ಜಮೀನ್ದಾರನ ಮನೆ ಅಕ್ಷರಶ: ಸಾವಿನ ಮನೆಯಂತೆ ಕಾಣುತ್ತಿರುತ್ತದೆ.

ಹೇಗೋ ಕಷ್ಟಪಟ್ಟು ಜಮೀನ್ದಾರನ ಮನೆಯೊಳಗೆ ಪ್ರವೇಶಿಸಿ ಕೇಳಿದಾಗ ಸ್ನಾನಕ್ಕೆ ಹೋಗಿದ್ದಾರೆಂದು ತಿಳಿದು ಕೊಂಚ ಸಮಾಧಾನಗೊಳ್ಳುತ್ತಾರೆ. ಬಳಿಕ ಏಕಾಂತದಲ್ಲಿ ಮಾತನಾಡಬೇಕೆಂದು ಮೊದಲಿಗೆ ಮುಕುಂದೂರು ಸ್ವಾಮಿಗಳ ಪವಾಡದ ಬಗ್ಗೆ ತಿಳಿಸಲು ಮುಂದಾಗುತ್ತಾರೆ. ಅದೇ ಗುರುಗಳು ಅಲ್ವಾ ನೀವು ಹೇಳುತ್ತಿರೋದು. ಮನೆಯೊಳಗೆ ಮಲಗಿದ್ದವರು ಬೆಳಗಿನ ಜಾವ ಎದ್ದು ಹೊರ ಹೋಗಿದ್ದರು. ಆದರೆ ಮನೆಯ ಅಗಳಿ ಮಾತ್ರ ಹಾಗೇ ಇತ್ತು. ಓಹ್ ಹೌದು ಅವರೇ ಅಂದ ಕೃಷ್ಣ ಶಾಸ್ತ್ರಿ ಅವರು ಅರ್ಧ ಕೆಲಸವಾಯಿತು ಅಂದು ಕೊಳ್ಳುತ್ತಾರೆ.

ಅದೇ ಗುರುಗಳು ಇಂದು ನನಗೆ ಭೇಟಿ ಆಗಿದ್ದರು ಅಂದಾಗ ಅವರು ಕಾಲವಾಗಿದ್ದಾರಲ್ಲವೇ ಅನ್ನುತ್ತಾರೆ ಜಮೀನ್ದಾರರು. ಹೌದು, ಅವರ ದೇಹವಿಲ್ಲ, ಆದರೆ, ಗುರುಗಳಿಗೆಲ್ಲಿದೆ ಸಾವು ಅಂತಾರೆ ಕೃಷ್ಣ ಶಾಸ್ತ್ರಿಗಳು. ಆಗ ಜಮೀನ್ದಾರರು ನಿಜ ಬಿಡಿ. ಅವರು ಮಹಾನ್ ಪವಾಡ ಪುರುಷರು ಅಂತಾರೆ. ಹೌದು, ಆ ಗುರುಗಳು ನಿಮಗೊಂದು ಮಾತನ್ನು ತಿಳಿಸಲು ಹೇಳಿದ್ದಾರೆ. ಅಂದಾಕ್ಷಣ ಜಮೀನ್ದಾರರು ತೀವ್ರ ಕುತೂಹಲ ಭರಿತರಾಗಿ ನೆಲಕ್ಕೆ ಕುಳಿತು ಬಿಡುತ್ತಾರೆ. ಆಗ ಕೃಷ್ಣ ಶಾಸ್ತ್ರಿಗಳು ಹೇಳುತ್ತಾರೆ.

ಆ ಜಮೀನ್ದಾರ ನಿನಗೆ ಅಷ್ಟೊಂದು ನೆರವಾಗಿದ್ದಾನೆ. ನೀನು ನೆರವಾಗೋದು ಬೇಡವೇ ಅಂದರು. ಹೋಗಿ ಕಲ್ಲಿನಷ್ಟೇ ಗಟ್ಟಿಯಾಗಿದ್ದಾನೆ. ಏನೂ ಆಗೋದಿಲ್ಲ ಅಂತ ಹೇಳಿ ಬಾ ಅಂದರು ಅಂತ ಗಟ್ಟಿಯಾಗಿ ಹೇಳಿಯೇ ಬಿಡುತ್ತಾರೆ ಕೃಷ್ಣಶಾಸ್ತ್ರಿಗಳು. ಆಗ ಜಮೀನ್ದಾರ ಎಲ್ಲವನ್ನೂ ಮರೆತು ಸಾವು ಗೆದ್ದ ಸಂಭ್ರಮ ಪಡುತ್ತಾರೆ. ಗುರುಗಳು ಹೇಳಿದ್ದಾರಂದ ಮೇಲೆ ಆಯಿತು ಬಿಡಿ. ಗುರುಗಳ ಮಾತಿನ ಮುಂದೆ ಯಾವ ಜಾತಕವೇನು ಮಾಡೋದಿಲ್ಲ ಎಂದು ಗೆಲುವಿನ ನಗೆಯೊಂದಿಗೆ ಪುಟಿದೇಳುತ್ತಾರೆ. ಆಗ ಪೂರ್ಣ ಆತ್ಮವಿಶ್ವಾಸದೊಂದಿಗೆ ಈಗ ಸಮಯವೆಷ್ಟೆಂದು ಕೇಳ್ತಾರೆ ಕೃಷ್ಣ ಶಾಸ್ತ್ರಿಗಳು. 11ಗಂಟೆ ಆಗಿದೆ ಗುರುಗಳೇ ಅಂತಾರೆ. ನಿಮ್ಮ ಜಾತಕದಲ್ಲಿದ್ದ ಮರಣ ಸಮಯ ಎಂದಾಗ 10ಗಂಟೆ ಇತ್ತು ಗುರುಗಳೇ ಅಂತಾರೆ ಜಮೀನ್ದಾರರು. ಇನ್ನೇನು ನಿಮ್ಮ ಮರಣ ಸಮಯ ಮುಗಿದೇ ಹೋಗಿದೆಯಲ್ಲ ಅಂತಾ ಇಬ್ಬರೂ ಖುಷಿಯಿಂದ ನಗುನಗುತ್ತಲೇ ಹೊರ ಬರುತ್ತಾರೆ. ಕಣ್ಣಾರೆ ಜಮೀನ್ದಾರನ ಸಾವನ್ನು ಕಾಣಲು ಕುತೂಹಲದಿಂದ ಕುಳಿತಿದ್ದವರಿಗೆ ಅಚ್ಚರಿಯೋ ಅಚ್ಚರಿ. ಸಾವು ಸಂಭವಿಸಬೇಕಾದ ಮನೆಯಲ್ಲಿ ಸಾವು ಗೆದ್ದ ಸಂಭ್ರಮ ಆಚರಿಸಲ್ಪಡುತ್ತದೆ.

-ಬಸವರಾಜ ಮುದನೂರ್

Related Articles

Leave a Reply

Your email address will not be published. Required fields are marked *

Back to top button