ಶವ ಅದಲು ಬದಲು: ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಮಹಾ ಎಡವಟ್ಟು!
ಹೀಗೂ ಉಂಟೇ?
ದಾವಣಗೆರೆ: ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಶವಗಳನ್ನೆ ಅದಲು ಬದಲು ಮಾಡಿದ ಘನಘೋರ ಘಟನೆ ನಡೆದಿದೆ. ನಿನ್ನೆ ದಾವಣಗೆರೆಯಲ್ಲಿ ಶಿಲ್ಪಾ ಎಂಬ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಳು. ಅದೇ ಸಮಯದಲ್ಲಿ ಕೆಂಚಮ್ಮ ಎಂಬ ಮಹಿಳೆ ರಸ್ತೆ ಅಪಘಾತದಲ್ಲಿ ಅಸುನೀಗಿದ್ದಾಳೆ. ಹೀಗಾಗಿ, ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇಬ್ಬರೂ ಮಹಿಳೆಯರ ಶವಪರೀಕ್ಷೆ ನಡೆದಿದೆ. ಆದರೆ, ಸಂಭಂಧಿಕರಿಗೆ ಶವ ಹಸ್ತಾಂತರಿಸುವ ವೇಳೆ ಆಸ್ಪತ್ರೆಯ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ.
ರಾತ್ರಿ ಹತ್ತು ಗಂಟೆ ಸಮಯದಲ್ಲಿ ಯುವತಿ ಶಿಲ್ಪಾಳ ಸಂಭಂದಿಕರು ಮಹಿಳೆ ಕೆಂಚಮ್ಮಳ ಶವ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೆ ಶವಸಂಸ್ಕಾರವನ್ನೂ ಮಾಡಿಬಿಟ್ಟಿದ್ದಾರೆ. ಆದರೆ, ಕೆಂಚಮ್ಮಳ ಸಂಭಂಧಿಕರು ಶವ ಒಯ್ಯಲು ಮುಂದಾದಾಗ ಆಸ್ಪತ್ರೆಯ ಸಿಬ್ಬಂದಿ ಯುವತಿ ಶಿಲ್ಪಾಳ ಶವವನ್ನು ತೋರಿಸಿದ್ದಾರೆ. ಆದರೆ, ಕೆಂಚಮ್ಮಳ ಸಂಭಂಧಿಕರು ಇದು ನಮ್ಮ ಕೆಂಚಮ್ಮಳ ಶವ ಅಲ್ಲ ಅಂದಾಗ ಆಸ್ಪತ್ರೆಯ ಸಿಬ್ಬಂದಿಯ ಎಡವಟ್ಟು ಬಯಲಾಗಿದೆ.
ಇಬ್ಬರ ಶವ ಒಂದೇ ಶವಾಗಾರದಲ್ಲಿತ್ತು. ರಾತ್ರಿ ವೇಳೆ ಗೊಂದಲಕ್ಕೀಡಾಗಿ ಶವ ಅದಲು ಬದಲಾದ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ, ಕೆಂಚಮ್ಮಳ ಸಂಭಂಧಿಕರು ಆಸ್ಪತ್ರೆ ಸಿಬ್ಬಂದಿಯ ಬೇಜವಬ್ದಾರಿ ವಿರುದ್ಧ ಕಿಡಿ ಕಾರಿದ್ದಾರೆ. ಕೆಂಚಮ್ಮಳ ಶವ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ನಂಬಿಕೆಯಂತೆ ಶವಸಂಸ್ಕಾರ ಮಾಡಬೇಕು. ಇಲ್ಲವಾಗಿ ಏನಾದರು ಕೇಡಾದರೆ ಯಾರು ಹೊಣೆ ಎಂದು ಕಿಡಿ ಕಾರಿದ್ದಾರೆ. ಮತ್ತೊಂದು ಕಡೆ ಶಿಲ್ಪಾಳ ಸಂಭಂಧಿಗಳು ಎರಡೆರಡು ಸಲ ಶವಸಂಸ್ಕಾರ ಮಾಡಬೇಕಾದ ಫಜೀತಿಗೆ ಈಡಾಗಿದ್ದಾರೆ.