ಆಧುನಿಕ ಜಗತ್ತಿಗೆ ಯೋಗವೇ ಮದ್ದುಃ ಶರಣಪ್ಪ ಸಲಾದಪುರ
ಯಾದಗಿರಿಃ ಆಧುನಿಕ ಜಗತ್ತಿನಲ್ಲಿ ಮನುಷ್ಯ ತನ್ನ ಆರೋಗ್ಯದ ಕಡೆ ಹೆಚ್ಚು ಗಮನ ನೀಡದೇ ಅನ್ಯ ಚಟಗಳಿಗೆ ಮಾರು ಹೋಗಿ ತನ್ನ ಆರೋಗ್ಯವಂತ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದು ಸಹಜಯೋಗ ಪ್ರತಿಷ್ಠಾನದ ಮುಖಂಡ ಶರಣಪ್ಪ ಸಲಾದಪುರ ಹೇಳಿದರು.
ಜಿಲ್ಲೆಯ ಶಹಾಪುರ ನಗರದ ಸಹಜಯೋಗ ಪ್ರತಿಷ್ಠಾನದ ಧ್ಯಾನ ಮಂದಿರದಲ್ಲಿ 4 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತೀಯ ಪರಂಪರೆಯಲ್ಲಿ ಋಷಿಮುನಿಗಳ ಜೀವನ ಶೈಲಿಯಾಗಿದ್ದ ಯೋಗವನ್ನು ಪತಂಜಲಿ ಮಹರ್ಷಿಗಳು ಯೋಘ ಸೂತ್ರವೆಂಬ ಗ್ರಂಥಗಳ ಮೂಲಕ ಸುಲಭವಾಗಿ ಜನರಿಗೆ ಅರ್ಥೈಸಿದರು. ಸುಮಾರು 5 ವರ್ಷಗಳ ಕಾಲ ಹಳೆಯದಾದ ಯೋಗವನ್ನು ಇಂದು ಇಡಿ ವಿಶ್ವ ಆಚರಿಸುವಂತಾಗಿದೆ. ನಮ್ಮ ದೇಶದ ಕೀರ್ತಿ ಹೆಚ್ಚಾಗಿದೆ. ಅಲ್ಲದೆ ವಿಶ್ವದ ಜನರ ಆರೋಗ್ಯಕರ ಜೀವನಕ್ಕೆ ಉತ್ತಮ ಮಾರ್ಗವನ್ನು ನೀಡಿದ ಯೋಗ ಪ್ರತಿಯೊಬ್ಬರಿಗೂ ಅನುಸರಿಸಬೇಕು.
ಯೋಗ ಬಲ್ಲವನಿಗೆ ಯಾವುದೇ ರೋಗವಿಲ್ಲ. ಯೋಗ ಅಭ್ಯಾಸ ಮಾಡುತ್ತಿದ್ದರೆ ಒತ್ತಡ ಕಡಿಮೆಯಾಗಲಿದೆ. ಆಧುನಿಕ ಜಗತ್ತಿನಲ್ಲಿನ ರೋಗ ನಿವಾರಣೆಗೆ ಯೋಗವೇ ಮದ್ದು. ಪ್ರತಿಯೊಬ್ಬರು ಯೋಗ ಅಭ್ಯಾಸ ಮಾಡಬೇಕು. ಯೋಗ ಶಿಕ್ಷಣದ ಒಂದು ಭಾಗವಾಗಬೇಕಿದೆ ಎಂದರು.
ಮಲ್ಲಿಕಾರ್ಜುನ ಮುಂಡಾಸ ಮಾತನಾಡಿ, ಸಮಾಜದಲ್ಲಿ ಯೋಗದ ಬಗ್ಗೆ ಮತ್ತಷ್ಟು ಕಾಳಜಿ ಅರಿವು ಮೂಡಿಸುತ್ತಿರುವ ಪ್ರಯತ್ನ ನಡೆಯುತ್ತಿದ್ದು, ಇದಕ್ಕಾಗಿ ಹಲವಾರು ಸಂಸ್ಥೆಗಳು ಮತ್ತು ವ್ಯಕ್ತಿಗಳು ಶ್ರಮಿಸುತ್ತಿರುವುದು ಯೋಗಕ್ಕೆ ಉಜ್ವಲ ಭವಿಷ್ಯವಿದೆ ಎನ್ನುವುದರ ಸೂಚನೆಯಾಗಿದೆ. ಜಗತ್ತಿಗೆ ಯೋಗ ನೀಡಿದ ಖ್ಯಾತಿ ಭಾರತಕ್ಕಿದ್ದು, ಇಂದು ವಿಶ್ವವು ಯೋಗ ದಿನವನ್ನು ಆಚರಿಸುತ್ತಿರುವುದು ಭಾರತದ ಗರಿಮೆ ಜಗತ್ತಿನೆಲ್ಲೆಡೆ ಪಸರಿಸುವಂತೆ ಮಾಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಮಗೊಂಡಪ್ಪ ಹಳಗೊಂಡ, ಸಂಚಾಲಕ ಹಣಮಂತ್ರಾಯ ಹೈಯ್ಯಾಳಕರ್, ಮಾಳಪ್ಪ ಪೊಲೀಸ್, ಮಾಂತೇಶ ಗಿಂಡಿ, ವಿರೇಶ ಉಳ್ಳಿ, ನಾಗಣ್ಣ ರಸ್ತಾಪೂರ, ವೆಂಕಟೇಶ ಕುಲಕರ್ಣಿ, ಬಸವರಾಜ ಪಾಟೀಲ, ಪಾರ್ವತಿ ಉಪ್ಪಿನ್, ಶಾರದಾ ಪಡಶೆಟ್ಟಿ, ಅಂಬ್ರೇಶ ಗಂಜಿ, ಪರಶುರಾಮ ಬಾಸುತಕರ್ ಇನ್ನಿತರ ಯೋಗ ಸಂತ್ಸಂಗಿಗಳು ಭಾಗವಹಿಸಿದ್ದರು.