ಸಾಹಿತ್ಯ

83 ನೇ ಕನ್ನಡ ಸಾಹಿತ್ಯ ಸಮ್ಮೇಳನಃ ಪರಿಷತ್ ಬಗ್ಗೆ ಒಂದು ಅವಲೋಕನ

 

ಕಸಾಪ ಆರುವರೆ ಕೋಟಿ ಕನ್ನಡಿಗರ ಹೆಮ್ಮೆಯ ದೊಡ್ಮನೆ

ಕನ್ನಡ ನಾಡಿನ ಆರು ಕೋಟಿ ಜನ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಆರು ಕೋಟಿ ಕನ್ನಡಿಗರ ಹೆಮ್ಮೆಯ ದೊಡ್ಡ ಮನೆ ಎಂದು ಹೇಳಿದರೆ ಅತೀಶಿಯೋಕ್ತಿಯಾಗಲಾರದು. ಶತಮಾನದಿಂದ ನಾಡುನುಡಿ ಸಾಹಿತ್ಯಕ್ಕೆ ಪ್ರೇರಕ ಶಕ್ತಿಯಾಗಿ ಹಾಗೂ ಪೋಷಕವಾಗಿ ಅವಿರತವಾಗಿ ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಮೇ.5, 1915 ರಂದು ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ದಿವಾನ್‍ರಾಗಿದ್ದ ಸರ್.ಎಂ. ವಿಸ್ವೇಶ್ವರಯ್ಯನವರ ಪ್ರಯತ್ನದಿಂದ ಸಂಸ್ಥಾಪನೆಗೊಂಡು ಕನ್ನಡ ಭಾಷಿಕ ಸಮೂದಾಯದ ಹಿತಾಸಕ್ತಿಗಳ ಬಗ್ಗೆ ಚಿಂತಿಸುವ ಒಂದು ವೇದಿಕೆ ಬೇಕು ಎಂಬ ಆಶಯದಿಂದ ಪ್ರಾರಂಭವಾಗಿ ಸಮಕಾಲೀನತೆಗೆ ಸ್ಪಂಧಿಸುತ್ತಾ ಎಲ್ಲವನ್ನು ಹೀರಿಕೊಂಡು ನಿತ್ಯನೂತನವಾಗಿ ಬೆಳೆಯುತ್ತಾ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯವಾಗಿದೆ.

ಕರ್ನಾಟಕ, ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಉಳಿಸುವ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೆ ಇದೆ. ಕನ್ನಡ ಅವಸಾನದ ಅಂಚಿಗೆ ಹೋಗಬಾರದು. ಕನ್ನಡ ಸಂಸ್ಕೃತಿಗೆ  ಹಿಂಬು ನೀಡಬೇಕು. ದೇಶದ ಪ್ರತಿಯೊಂದು ಕ್ಷೇತ್ರಗಳಲ್ಲಿ ಎಲ್ಲಾ ಸಂದರ್ಭಗಳಲ್ಲೂ ಕನ್ನಡಕ್ಕೆ ಪ್ರಾಧಾನ್ಯತೆ ಸಿಗಬೇಕು. ಮತ್ತು ಕನ್ನಡ ಸಾಹಿತ್ಯ, ಸಂಸ್ಕೃತಿಕ ಪರಂಪರೆಯನ್ನು ರಕ್ಷಿಸಿ ಬೆಳೆಸಬೇಕೆಂಬ ಉನ್ನತವಾದ ಹಲವಾರು ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು 2014-15ರಲ್ಲಿ ಶತಮಾನೋತ್ಸವ ಸಂಭ್ರಮವನ್ನು ಆಚರಿಸಿಕೊಂಡಿತು.

ಕನ್ನಡಿಗರ ಸಮಸ್ತ ಹಿತಾಸಕ್ತಿಗಳ ಸಂರಕ್ಷಣೆಯ ವಿಶೇಷ ಹೊಣೆಗಾರಿಕೆಯನ್ನು ಇಟ್ಟುಕೊಂಡು ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು 82 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು, ಜಿಲ್ಲಾ, ತಾಲೂಕ, ವಲಯಗಳ ಅನೇಕ ಕನ್ನಡ ಸಾಹಿತ್ಯ ಸಮ್ಮೇಳನಗಳು ಆಯೋಜಿಸಿ ಹೊಸ ಸಾಧ್ಯತೆಗಳಿಗೆ ನಾಂದಿಯಾಡಿದೆ. ಅಲ್ಲದೇ ವಿವಿಧ ವಿಶೇಷ ಉಪನ್ಯಾಸಗಳು, ದತ್ತಿ ಉಪನ್ಯಾಸಗಳು, ವಿಚಾರ ಸಂಕೀರ್ಣಗಳು, ಕವಿಗೋಷ್ಠಿಗಳು, ಕಾವ್ಯ, ಕಥನ, ನಾಟಕ, ಸಂಶೋಧನೆ ಕಮ್ಮಟಗಳು ಹೀಗೆ ಮುಂತಾದ ಮಹತ್ತರವಾದ ಕಾರ್ಯಕ್ರಮಗಳ ಮೂಲಕ ಅವಿರತವಾಗಿ ಶತಮಾನದಿಂದ ಶ್ರಮಿಸುತ್ತಿದೆ.

ಕೇಂದ್ರ, ಜಿಲ್ಲೆ, ತಾಲೂಕ, ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳ ಜೋತೆ ನಿರಂತರ ಸಮನ್ವಯ ಹಾಗೂ ಅನುಸಂಧಾನದ ಮೂಲಕ ಅವುಗಳಿಗೆ ಪ್ರೋತ್ಸಾಹ, ಸಹಕಾರ ನೀಡುತ್ತ ಬರುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡಿನಾದ್ಯಂತಹ ವ್ಯಾಪಕತೆ ಹೊಂದಿದ್ದು, ತನ್ನದೇಯಾದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕನ್ನಡ-ಕನ್ನಡಿಗ-ಕರ್ನಾಟಕದ ಒಳಿತಿಗೆ ಶ್ರಮಿಸುತ್ತಾ ಕನ್ನಡಿಗರಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಎಚ್ಚರ ಮೂಡಿಸುವಲ್ಲಿ ಅನೇಕ ಮೌಲಿಕ ಕೃತಿಗಳನ್ನು ಪ್ರಕಟಣೆಗಳ ಮೂಲಕ ಬಹಳಷ್ಟು ಮಹತ್ವದ ಪಾತ್ರವಹಿಸುತ್ತ ಬರುತ್ತದೆ.

ಕನ್ನಡವನ್ನು, ಕನ್ನಡ ಸಾಹಿತ್ಯವನ್ನು ರಕ್ಷಿಸಿ ಬೆಳೆಸುವ ದೇಯೋದ್ದೇಶವನ್ನು ಇಟ್ಟುಕೊಂಡು ಹಿಂದಿನ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ ಎಲ್ಲಾ ಮಹನೀಯರ ಆಶಯಗಳ ಯಾವುದೇ ಒಂದು ಅಂಶಕ್ಕೂ ಚ್ಯುತಿ ಬರದಂತೆ ಸಾಧನೆ, ಅರ್ಹತೆ, ಯೋಗ್ಯತೆ, ಪ್ರಾದೇಶಿಕ, ಸಮಾನತೆ, ಸಮಾಜೀಕ ನ್ಯಾಯ ಇವುಗಳನ್ನು ಆಧಾರವಾಗಿಟ್ಟುಕೊಂಡು ಪ್ರಮಾಣಿಕವಾಗಿ, ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತ ಕನ್ನಡಿಗರ ಸಾರ್ವಭೌಮ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಬೆಳೆಯಲು ಮತ್ತು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಪರಿಷತ್ತಿನ ರಾಜಾಧ್ಯಕ್ಷರಾದ ಡಾ. ಮನು ಬಳಗಾರ ಅವರು ಹಾಗೂ ಪದಾಧಿಕಾರಿಗಳು ಬಹಳಷ್ಟು ಶ್ರಮಿಸುತ್ತಿದ್ದಾರೆ.

ನಾಡಿನ ಹಿರಿಯ ಸಾಹಿತಿ ಚಂಪಾ ಅವರು ಹೇಳುವಂತೆ ನಾಡು – ನುಡಿ ಸಂಸ್ಕøತಿಯ ರಕ್ಷಣೆ ಮತ್ತು ವಿಕಾಸಕ್ಕಾಗಿ ಕಂಕಣಬದ್ಧವಾಗಿರುವ ಬಹುದೊಡ್ಡ ಕನ್ನಡ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಾಗಿದೆ. ಇದು ಕನ್ನಡ ಮತ್ತು ಕನ್ನಡಿಗರ ಬಹುಮುಖಿ ಆಯಾಮಗಳಿಗೆ ಆಲೋಚನೆ, ಅಕ್ಷರ, ಕ್ರೀಯೆಗಳ ಮೂಲಕ ಸ್ಪಂಧಿಸುತ್ತಲೇ ಬಂದಿದೆ. ಇಂತಹ ಕನ್ನಡ ನಾಡಿನ ಹೆಮ್ಮೇಯ ಕನ್ನಡ ಸಾಹಿತ್ಯ ಪರಿಷತ್ತು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ಹಿರಿಯ ಸಾಹಿತಿಗಳು ಹಾಗೂ ಚಿಂತಕರಾದ ಪ್ರೊ. ಚಂದ್ರಶೇಖರ ಪಾಟೀಲ ಅವರ ಅಧಕ್ಷತೆಯಲ್ಲಿ 2017 ನವೆಂಬರ್ 24, 25 ಮತ್ತು 26 ರಂದು 3 ದಿನಗಳ ಕಾಲ ನಡೆಯಲಿದೆ.

ಒಂದು ನಾಡಿನ ಕನ್ನಡ ಸಾಹಿತ್ಯ ಸಮ್ಮೇಳನ ಅಂದರೆ ಆ ನಾಡಿನ ಸಾಂಸ್ಕೃತಿಕ ಪ್ರಪಂಚವನ್ನು, ಒಂದು ಉಜ್ವಲ ಕಾಲಘಟ್ಟದ ಯುಗ ನಿರ್ಮಾಪಕ ಸತ್ವವನ್ನು ಮತ್ತು ಅ ನಾಡಿನ ನೆಲದಲ್ಲಿ ಸಂಭವಿಸಿದ ಸೃಜನಶೀಲತೆ ಹಾಗೂ ವೈಚಾರಿಕತೆಯ ಉತ್ಕರ್ಷದ ಪ್ರತಿನಿಧಿಗಳನ್ನು ನೆನಪಿಸುವುದು ಮತ್ತು ನಾಡಿನ ಸಂಸ್ಕೃತಿಕ ಪರಂಪರೆಗಳ ಸ್ಥಿತ್ಯಂತರಗಳನ್ನು, ಸಮಸ್ಯೆಗಳನ್ನು, ತಲ್ಲಣಗಳನ್ನು, ಚರ್ಚಿಸುವುದು, ಚಿಂತನಮಂತನ ಮಾಡುವುದಾಗಿದೆ.

ಈ ಹಿನ್ನಲೆಯಲ್ಲಿ ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಎಲ್ಲರನ್ನು ಒಳಗೊಳ್ಳುವ ಸಮ್ಮೇಳನವಾಗಲೂ ನಾಡಿನ ಎಲ್ಲಾ ಕನ್ನಡದ ಸಹಹೃದಯಿ ಮನಸ್ಸುಗಳು ಪಾಲ್ಗೊಂಡು ಸಮ್ಮೇಳನವು ಹೊಸ ಸಾದ್ಯತೆಗಳಿಗೆ ನಾಂದಿಹಾಡಲು ಶ್ರಮಿಸೋಣ.

ರಾಘವೇಂದ್ರ ಹಾರಣಗೇರಾ.

ಉಪನ್ಯಾಸಕರು, ಕಸಾಪ ಗೌರವ ಕಾರ್ಯದರ್ಶಿ.

ಶಹಾಪುರ. ಜಿ.ಯಾದಗಿರಿ. 9901559873.

Related Articles

Leave a Reply

Your email address will not be published. Required fields are marked *

Back to top button