ಕಾವ್ಯ ಕಟ್ಟುವದೊಂದು ಅದ್ಭುತ ಕಲೆ – ಲಕ್ಷ್ಮೀ ಪಟ್ಟಣಶೆಟ್ಟಿ
ಕಾವ್ಯದಲ್ಲಿ ಉತ್ತಮ ಸಂದೇಶವಿರಲಿ
ಯಾದಗಿರಿ, ಶಹಾಪುರಃ ಭಾವನಾತ್ಮಕವಾಗಿ ಹುಟ್ಟಿದ ಕತೆ, ಕವಿತೆಗಳನ್ನು ಸೃಜನಾತ್ಮಕವಾಗಿ ಅರ್ಥ ಗರ್ಭೀತವಾಗಿ ಕಟ್ಟುವುದು ಒಂದು ಕಲೆಯಾಗಿದೆ ಎಂದು ನಾಲತವಾಡದ ಹಿರಿಯ ಲೇಖಕಿ ಲಕ್ಷ್ಮೀ ಪಟ್ಟಣಶೆಟ್ಟಿ ಹೇಳಿದರು.
ನಗರದ ಶ್ರೀ ಶಿವಶೇಖರಪ್ಪಗೌಡ ಪಾಟೀಲ ಶಿರವಾಳ ಪದವಿ ಮಹಾವಿದ್ಯಾಲಯದಲ್ಲಿ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಸ್ಥಳೀಯ ಜಾಣ-ಜಾಣೆಯರ ಬಳಗದವತಿಯಿಂದ ನಡೆದ ಯುವ ಕವಿಗೋಷ್ಠಿ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಾವ್ಯ ರಚನೆಗೆ ಅನುಭವ, ಕಾಲ್ಪನಿಕ ಕನಸು, ಕಣ್ಮುಂದೆ ಇರುವ ಸಂಗತಿಗಳನ್ನು ಎಳೆಯಾಗಿ ಜೋಡಿಸಿ ವಿವೇಚನೆ ಮೂಲಕ ರಚನಾತ್ಮಕ ಪದ ಸಂಯೋಜಿಸಿ ರಚಿಸಿವು ಕಾರ್ಯ ಸುಲಭವಲ್ಲ. ಅದು ದೇವರು ನೀಡಿದ ಕೊಡುಗೆ ಎಂದರು ತಪ್ಪಿಲ್ಲ. ಬರೆದದ್ದು ಎಲ್ಲವೂ ಕಾವ್ಯವಾಗಲ್ಲ. ಎಲ್ಲರೂ ಬರೆದರೂ ಅದು ಕಾವ್ಯ ಕಥೆಯಾಗಲ್ಲ. ಅದೊಂದು ಸೆಳೆತ ಓದುಗರ ಮನ ಮುಟ್ಟುವ ಕೆಲಸ ಅಷ್ಟು ಸುಲಭವಾಗಿ ಒಲಿಯುವದಿಲ್ಲ. ಅದಕ್ಕೆ ನಿತ್ಯ ಪುಸ್ತಕಗಳನ್ನು ಓದಬೇಕು. ಇತಿಹಾಸ ತಿಳಿದಿರಬೇಕು. ಓದುತ್ತಾ ಓದುತ್ತಾ ಬರಹಗಾರರಾಗಲು ಸಾಧ್ಯ ಎಂದರು.
ಕಲಬುರ್ಗಿಯ ಯುವ ಸಾಹಿತಿ ಲಕ್ಷ್ಮೀಪುತ್ರ ಸಿರಸಗಿ ಮಾತನಾಡಿ, ತೊದಲ ನುಡಿಯೊಂದಿಗೆ ಹೆಜ್ಜೆಯಿಡುತ್ತಿರುವ ಯುವ ಸಾಹಿತಿಗಳಲ್ಲಿ ಪ್ರಾರಂಭದಲ್ಲಿ ಆತಂಕ ಇದ್ದೆ ಇರುತ್ತದೆ. ಎಲ್ಲವನ್ನೂ ಮೀರಿ ಸೃಜನಾತ್ಮಕವಾದ ಸಾಹಿತ್ಯ ಒಳಗೊಂಡಿರುವ ಹಾಗೂ ಕಲೆ, ಸಾಹಿತ್ಯ, ಸಂಸ್ಕøತಿ ಮೇಲೆ ಬೆಳಕು ಚೆಲ್ಲುವ ಕವಿತೆಗಳು ರಚಿಸಬೇಕೆಂದು ಸಲಹೆ ನೀಡಿದರು.
ಸುಮಾರು ಹದಿನೈದುಕ್ಕೂ ಯುವ ಕವಿಗಳು ತಮ್ಮ ಸ್ವರಚಿತ ಕವನವನ್ನು ವಾಚಿಸಿದರು. ಅವುಗಳಲ್ಲಿ ಸುಷ್ಮಾಳ ಕವಿತೆಯಲ್ಲಿ ಬಡತನ ಮತ್ತು ಅನಕ್ಷರತೆ, ಸುಮಂಗಲಾ ವಾಚಿಸಿದ ಅಸಹಾಯಕನ ನೋವು, ರೇಣುಕಾರವರ ಪ್ರಸ್ತುತ ದಿನಮಾನಗಳಲ್ಲಿ ರೈತನ ಗೋಳು, ವಿನಾಯಕ ಓದಿದ ಸತ್ತವರು ಕಾಡುತ್ತಿರುವ ನೆನಪು, ಜಗದೀಶನ ಪ್ರೀತಿ-ಪ್ರೇಮದ ನೆನಪು, ರಾಮಚಂದ್ರ ಅವರ ತಾಯಿಯ ಹಾರೈಕೆ, ರವಿರಾಜನ ಕನಸು, ಹೀಗೆ ಹಲವಾರು ಯುವ ಕವಿಗಳು ಸ್ವರಚಿತ ಕವನ ವಾಚಿಸಿದರು. ಕವಿತೆ ವಾಚಿಸಿದ ಯುವ ಕವಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.
ಪ್ರಾಂಶುಪಾಲ ಮಲ್ಲಿಕಾರ್ಜುನ ಆವಂಟಿ ಅಧ್ಯಕ್ಷತೆವಹಿಸಿದ್ದರು. ಯುವ ಕವಯಿತ್ರಿ ಭಾಗ್ಯ ದೊರೆ, ಬಸವರಾಜ ಸಿನ್ನೂರ ಉಪಸ್ಥಿತರಿದ್ದರು. ನಿರಂಜನ್ ಸ್ವಾಗತಿಸಿದರು. ಪಲ್ಲವಿ ಪ್ರಾರ್ಥಿಸಿದರು. ಕಿರಣ ನಿರೂಪಿಸಿದರು. ಸ್ವಾತಿ ವಂದಿಸಿದರು.