ಮಾ.22 ರಂದು ಸಗರಾದ್ರಿ ಬೆಟ್ಟದ ಮಡಿಲಲ್ಲಿ ಮಹಾತ್ಮ ಚರಬಸವೇಶ್ವರರ ಭವ್ಯ ರಥೋತ್ಸವ
96ನೇ ವರ್ಷದ ಜಾತ್ರಾ ಮಹೋತ್ಸವ: ಬೃಹತ್ ಜಾನುವಾರು ಜಾತ್ರೆ
ಯಾದಗಿರಿಃ ಪ್ರತಿ ವರ್ಷದಂತೆ ಜರುಗುವ ಸಗರನಾಡಿನ ಆರಾಧ್ಯ ದೇವ ಜಿಲ್ಲೆಯ ಶಹಾಫುರದಲ್ಲಿರುವ ಶ್ರೀ ಚರಬಸವೇಶ್ವರರ 96 ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಮಾ.22 ಗುರುವಾರದಂದು ಸಂಜೆ 6 ಗಂಟೆಗೆ ಭವ್ಯ ರಥೋತ್ಸವ ಜರುಗಲಿದೆ.
ಮುಂಚಿತವಾಗಿ ಮಾ.21 ರಂದು ಸಾಂಪ್ರದಾಯದಂತೆ ಸಂಜೆ ಉಚ್ಛಾಯಿ ರಥೋತ್ಸವ ನಡೆಯಲಿದೆ. ಮಾ. 23 ರಿಂದ ಬೃಹತ್ ಜಾನುವಾರುಗಳ ಜಾತ್ರೆಗೆ ಚಾಲನೆ ದೊರೆಯಲಿದ್ದು, ಅಂದು ಗ್ರಾಮೀಣ ಕ್ರೀಡೆಗಳಾದ ಕುಸ್ತಿ, ಭಾರ ಎತ್ತುವ ಸ್ಪರ್ದೆಗಳು ಜರಗುವವು. ಮತ್ತು ಮಾ. 26ರಂದು ಸೋಮವಾರ ಸಂಜೆ 6 ಗಂಟೆಗೆ ವಿಶೇಷ ಪೂಜೆಯೊಂದಿಗೆ ರಥೋತ್ಸವದ ಕಳಸ ವಿಸರ್ಜನೆ ನಡೆಯಲಿದೆ.
ನಂತರ ವಿಶೇಷವಾಗಿ ಕಡುಬಿನ ಕಾಳಗ ನಡೆಯುವುದು. ಈಗಾಗಲೇ ಜಾತ್ರಾ ನಿಮಿತ್ತವಾಗಿ ಮಾ.12ರಿಂದಲೇ ಆರಂಭಗೊಂಡಿದ್ದ ಪವಾಡ ಪುರುಷ ವಿಶ್ವರಾಧ್ಯರ ಪುರಾಣ ಪ್ರವಚನ ಮಾ.21 ರಂದು ಸಮಾರೋಪಗೊಳ್ಳಲಿದೆ.
ಗುರುವಾರದಂದು ನಡೆಯಲಿರುವ ಭವ್ಯ ರಥೋತ್ಸವದ ದಿವ್ಯ ಸಾನ್ನಿಧ್ಯವನ್ನು ಪರಂಪರೆಯಂತೆ ಬಾಡಿಯಾಲ ಮೂಲಮಠದ ಚೆನ್ನವೀರ ಶಿವಾಚಾರ್ಯರು ವಹಿಸಿಲ್ಲಿದ್ದಾರೆ. ಅಬ್ಬೆ ತುಮಕೂರು ಸಿದ್ಧ ಸಂಸ್ಥಾನ ಮಠದ ಗಂಗಾಧರ ಶಿವಾಚಾರ್ಯರು, ಆಂದೋಲಾ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮಿಗಳು ಸೇರಿದಂತೆ ಸಂಸ್ಥಾನದ ವಂಶಸ್ಥರಾದ ಶ್ರೀಸಂಸ್ಥಾನದ ಪೀಠಾಧೀಶರಾದ ಬಸವಯ್ಯ ಶರಣರು ಅಧ್ಯಕ್ಷತೆವಹಿಸಲಿದ್ದಾರೆ. ಮತ್ತು ಶಹಾಪುರ, ಅನವಾರ, ಮಾರಡಗಿ, ಕೆಲ್ಲೂರು, ಯಳವಾರ ಹಾಗೂ ಸುತ್ತಲಿನ ಗ್ರಾಮಗಳ ಸಕಲ ಸದ್ಭಕ್ತರು ಭಾಗವಹಿಸಲಿದ್ದಾರೆ ಎಂದು ಡಾ.ಶರಣು ಬಿ.ಗದ್ದುಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.