ಪ್ರಮುಖ ಸುದ್ದಿ
ಚಂದ್ರ ಗ್ರಹಣ ಹಿನ್ನೆಲೆ, ಒಂದು ತಾಸು ಮೊದಲೇ ರಥೋತ್ಸವ!
ಕಲಬುರಗಿ: ಆ ಗ್ರಾಮದಲ್ಲಿ ಪ್ರತಿವರ್ಷ ನೆರಳು ಮೂಡಿದ ಬಳಿಕವೇ ರಥ ಮುಂದೆ ಸಾಗುತ್ತಿತ್ತು. ಸಂಜೆ 5:30 ರ ಬಳಿಕವೇ ಜನರೆಲ್ಲಾ ಸೇರಿ ಸಂಭ್ರಮದಿಂದ ರಥೋತ್ಸವದಲ್ಲಿ ಭಾಗಿಯಾಗುತ್ತಿದ್ದರು. ಆದರೆ, ಈ ವರ್ಷ ಮಾತ್ರ ಕೆಲವರಿಗೆ ರಥೋತ್ಸವ ಕಣ್ತುಂಬಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಯಾಕಂತಂದ್ರೆ, ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೂ ಒಂದು ತಾಸು ಪೂರ್ವದಲ್ಲೇ ಅಲ್ಲಿ ರಥೋತ್ಸವ ಜರುಗಿತ್ತು.
ಹೌದು, ಇಂದು ಕಲಬುರಗಿ ತಾಲೂಕಿನ ಉದನೂರು ಗ್ರಾಮದ ಜೋಡು ಬಸವೇಶ್ವರರ ಜಾತ್ರೆ, ರಥೋತ್ಸವ ಸಂಭ್ರಮದಿಂದಲೇ ನಡೆದಿದೆ. ಆದರೆ, ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಸಂಜೆ 5:30ರ ಬದಲು 4:30 ಕ್ಕೆ ರಥೋತ್ಸವ ನಡೆದಿದೆ. ಪರಿಣಾಮ ರಥೋತ್ಸವಕ್ಕೆ ನಿಗದಿತ ಸಮಯಕ್ಕೂ ಮೊದಲೇ ಬಂದವರು ರಥೋತ್ಸವ ಕಣ್ತುಂಬಿಕೊಂಡಿದ್ದಾರೆ. ಸೂಕ್ತ ಮಾಹಿತಿಯಿಲ್ಲದೆ ಪ್ರತಿವರ್ಷದಂತೆ 5:30 ರ ಸಮಯಕ್ಕೆ ಬಂದ ಕೆಲ ಭಕ್ತರಿಗೆ ಮಾತ್ರ ರಥೋತ್ಸವ ವೀಕ್ಷಿಸಲಾಗಿಲ್ಲ. ಹೀಗಾಗಿ, ಜೋಡಿ ಬಸವೇಶ್ವರನಿಗೆ ನಮಿಸಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.