ಕಥೆ

ಶಿವಭಕ್ತರಿಗೆ ಬಂಗಾರಕ್ಕಿಂತ ಮಹತ್ವದ್ಯಾವದು ಗೊತ್ತಾ.?

ಶಿವಭಕ್ತರಿಗೂ ಬಂಗಾರಕ್ಕಿಂತ ಮಹತ್ವದ್ದಾಗಿರುವ ಆ ವಸ್ತು ಯಾವದು.?

ದಿನಕ್ಕೊಂದು ಕಥೆ

ಶಿವಭಕ್ತರಿಗೆ ಬಂಗಾರಕ್ಕಿಂತ ಮಹತ್ವದ್ಯಾವದು ಗೊತ್ತಾ.?

ಒಪ್ಪುವ ವಿಭೂತಿಯ ನೊಸಲಲ್ಲಿ ಧರಿಸಿ,
ದೃಷ್ಟಿವಾರಿ ನಿಮ್ಮನೋಡಲೊಡನೆ
ಬೆಟ್ಟದಷ್ಟು ತಪ್ಪುಳ್ಳಡೆಯೂ ಮುಟ್ಟಲಮ್ಮವು ನೋಡಾ.
ದುರಿತ ಅನ್ಯಾಯವ ಪರಿಹರಿಸಬಲ್ಲಡೆ
‘ಓಂ ನಮಃ ಶಿವಾಯ’ ಶರಣೆಂಬುದೆ ಮಂತ್ರ.
ಅದೆಂತೆಂದಡೆ
‘ನಮಃ ಶಿವಾಯೇತಿ ಮಂತ್ರಂ ಯಃ ಕರೋತಿ ತ್ರಿಪುಂಡ್ರಕಂ|
ಸಪ್ತಜನ್ಮಕೃತಂ ಪಾಪಂ ತತ್‍ಕ್ಷಣಾದೇವ ನಶ್ಯತ್ಬಿ||
ಇಂತೆಂದುದಾಗಿ,
ಸಿಂಹದ ಮರಿಯ ಸೀಳ್ನಾಯಿ ತಿಂಬಡೆ ಭಂಗವಿನ್ನಾರದೊ ಚೆನ್ನಮಲ್ಲಿಕಾರ್ಜುನಾ ?

ಶಿವಭಕ್ತರು ತಮ್ಮ ಹಣೆ, ಎದೆ, ತೋಳುಗಳ ಮೇಲೆ ಅಡ್ಡಲಾಗಿ ಎಳೆದಿರುವ ಭಸ್ಮದ ಮೂರು ಪಟ್ಟೆಗಳು ಪ್ರಮುಖ ಲಾಂಛನವೆ ವಿಭೂತಿ. ಈ ಮೂರು ಪಟ್ಟಿಗಳು ಇಚ್ಛಾಶಕ್ತಿ, ಕ್ರಿಯಾಶಕ್ತಿ, ಮತ್ತು ಜ್ಞಾನ ಶಕ್ತಿಗಳ ಸಂಕೇತ. ಹಾಗೆಯೇ ಪರಬ್ರಹ್ಮನ ಪ್ರತೀಕವಾಗಿರುವ “ಓಂ” ಕಾರದ ಸಂಕೇತ. ಈ ಲಾಂಛನ ಮೂರು ವೇದಗಳಾದ ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳನ್ನು ಪ್ರತಿನಿಧಿಸುತ್ತದೆ.

ಹಣೆ, ಎದೆ, ತೋಳುಗಳಿಗೆ ವಿಭೂತಿ ಪಟ್ಟೆ ಬಳಿದುಕೊಳ್ಳುವುದರಿಂದ ಶಿವನು ಸಂಪ್ರೀತನಾಗುತ್ತಾನೆ, ಮಹಾ ಪಾಪಗಳಿಂದ ಮುಕ್ತಿ ಪಡೆಯಲು ಇದೊಂದು ಸುಲಭ ಹಾಗೂ ಸರಳ ಮಾರ್ಗ ಎನ್ನುತ್ತದೆ ಪುರಾಣ. ಹಾಗೆಯೇ ಪುರಾಣದಲ್ಲಿ ವಿಭೂತಿ ಮಹಿಮೆ ಕುರಿತಾಗಿ ಒಂದು ಕಥೆ ಬರುತ್ತದೆ.

ಒಮ್ಮೆ ಪಾರ್ವತಿ ಪರಮೇಶ್ವರನನ್ನು ಕುರಿತು “ಸರಸ್ವತಿ ಲಕ್ಷ್ಮಿ ಬಂಗಾರ ಹಾಕಿಕೊಂಡಿದ್ದಾರೆ, ತಾನು ಯಾಕೆ ಹಾಕಿಕೊಳ್ಳಬಾರದು” ಎಂದು “ಸ್ವಾಮಿ ನನಗೆ ಬಂಗಾರ ಹಾಕಿಕೊಳ್ಳುವ ಬಯಕೆಯಾಗಿದೆ, ನನಗೆ ಅನುಗ್ರಹಿಸು” ಎಂದು ಕೇಳಿದಳು. ಆಗ ಈಶ್ವರ ಒಂದು ಚಿಟಿಕೆ ಭಸ್ಮವನ್ನು ತೆಗೆದು ಪಾರ್ವತಿ ಕೈಗೆ ಕೊಟ್ಟ. ಆಗ ಪಾರ್ವತಿ “ಇದೇನು ಸ್ವಾಮಿ? ಬಂಗಾರ ಕೊಡಿ ಎಂದರೆ ಭಸ್ಮ ಕೊಟ್ಟಿದ್ದೀರಿ” ಎಂದು ಕೇಳಿದಳು.

ಪರಮೇಶ್ವರ, “ನನ್ನಲ್ಲಿರುವುದು ಇದೇ ಬಂಗಾರ, “ಇದನ್ನು ತೆಗೆದುಕೊಂಡು ಹೋಗಿ ಕುಬೇರನಲ್ಲಿ ಇದರ ತೂಕದ ಬಂಗಾರ ಕೊಡು” ಎಂದು ಕೇಳು
ಎಂದ ಶಿವ ಕಳಿಸಿದ ಪಾರ್ವತಿಗೆ. ಪಾರ್ವತಿಯು ಅದನ್ನು ಅಲಕಪುರಕ್ಕೆ (ಕುಬೇರನ ವಾಸಸ್ಥಳ) ಕೊಂಡು ಹೋಗಿ, ಈ ಭಸ್ಮದ ತೂಕಕ್ಕೆ ಬಂಗಾರ ಕೊಡಬೇಕು ಎಂದು ಕೇಳಿದಳು.

ಕುಬೇರ ನಗುತ್ತಾ ಇದಕ್ಕೆ ಎಷ್ಟು ತೂಕದ ಬಂಗಾರ ಕೊಡಬೇಕು? ನಿಮಗೆಷ್ಟು ಬೇಕು ತೆಗೆದುಕೊ ಎಂದ. ಇಲ್ಲ ನನಗೆ ಇದರ ತೂಕವೇ ಬೇಕು ಎಂದು ಪಾರ್ವತಿ ಕೇಳಿದಾಗ, ಕುಬೇರನು ಪಾರ್ವತಿಯ
ಅಣತಿಯಂತೆ, ತಕ್ಕಡಿಯಲ್ಲಿ ಭಸ್ಮವನ್ನು ಒಂದೆಡೆ ಇಟ್ಟ. ಮತ್ತೊಂದೆಡೆಗೆ ಬಂಗಾರ ಹಾಕಿದ. ಎಷ್ಟು ಬಂಗಾರ ಹಾಕಿದರೂ ತೂಕ ಮೇಲೆಳಲಿಲ್ಲ.

ಕುಬೇರ ಎಷ್ಟು ಬಂಗಾರ ಹಾಕಿದರೂ ತೂಕವದು ಮೇಲೇಳಲೇ ಇಲ್ಲ. ಕೊನೆಗೆ ಕುಬೇರನು ತನ್ನ ಹೆಂಡತಿಯ ಬಂಗಾರವನ್ನು ಹಾಕತೊಡಗಿದ. “ಕುಬೇರನಿಗೂ ನಾನೆಂಬ ಅಹಂಭಾವವಿತ್ತು” ಅದಕ್ಕೆ ಹೀಗಾಯಿತು. ಕೊನೆಗೆ ಕುಬೇರನು ತನ್ನ ಹೆಂಡತಿಯ ತಾಳಿಯನ್ನು ತಕ್ಕಡಿಯಲ್ಲಿ ಹಾಕಿದ ಆಗ ತಕ್ಕಡಿ ಸ್ವಲ್ಪ ಮೇಲೇರಿತು.

ಆಗ ಕುಬೇರನು, ತಾಯಿ ನಾನು ಆಹಂಕಾರದಿಂದ ನುಡಿದೆ ಕ್ಷಮಿಸಿ, ಈ ಚಿಟಿಕೆ ಭಸ್ಮವು ಎಷ್ಟು ಬಂಗಾರ ಹಾಕಿದರೂ ಸರಿದೂಗಲಾರದು ಎಂದು ಕೈ ಮುಗಿದ.
ಪಾರ್ವತಿ ತನ್ನ ಪತಿಯ ಭಸ್ಮದ ಮಹತ್ವವನ್ನು ಗಮನಿಸಿ, ನನಗೆ ಬಂಗಾರ ಬೇಡ “ಶಿವ ಕೊಟ್ಟ ಭಸ್ಮವೇ ಬಂಗಾರ” ಎಂದು ಧರಿಸಿಕೊಂಡಳು.

ನೀರಿಂಗೆ ನೈದಿಲೆಯೆ ಶೃಂಗಾರ
ಸಮುದ್ರಕ್ಕೆ ತೆರೆಯೆ ಶೃಂಗಾರ
ನಾರಿಗೆ ಗುಣವೆ ಶೃಂಗಾರ
ಗಗನಕ್ಕೆ ಚಂದ್ರಮನೆ ಶೃಂಗಾರ
ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ.

🖊️ಸಂಗ್ರಹ🖋️
*ಷ.ಬ್ರ.ಡಾ.ಅಭಿನವ ರಾಮಲಿಂಗ ಶಿವಶರಣ ಮಹಾಸ್ವಾಮೀಜಿ.*
📞 – 9341137882.

Related Articles

Leave a Reply

Your email address will not be published. Required fields are marked *

Back to top button