ಕಥೆ

ನಿಂದಿಸದಿರಿ ಪರರನ್ನು…ಈ ಕಥೆ ಓದಿ

ದಿನಕ್ಕೊಂದು ಕಥೆ

ಬಟ್ಟೆ ವ್ಯಾಪಾರಿಯೊಬ್ಬ ಕತ್ತೆ ಹಾಗೂ ಕುದುರೆಯನ್ನು ಸಾಕಿಕೊಂಡಿದ್ದ. ಕತ್ತೆಗೆ ಭಾರವಾದ ಬಟ್ಟೆ ಮೂಟೆಗಳನ್ನು ಹೊರಿಸಿ ಕುದುರೆ ಮೇಲೆ ಕುಳಿತು ಪ್ರಯಾಣ ಆರಂಭಿಸಿದ. ಮಾರ್ಗ ಮಧ್ಯೆ ದಣಿವಾರಿಸಿಕೊಳ್ಳಲು ಮರದಡಿ ವಿರಮಿಸಿದ.

ಆಗ ಕುದುರೆ ಮೆಲ್ಲನೆ ಕತ್ತೆಯ ಹತ್ತಿರ ಹೋಗಿ “ಎಂಥಾ ಜನ್ಮವಪ್ಪಾ ನಿಂದೂ? ಜೀವನ ಪೂರ್ತಿ ಭಾರವಾದ ವಸ್ತುಗಳನ್ನು ಹೊತ್ತುಕೊಂಡು ಸಾಗೋದೇ ನಿನ್ನ ಹಣೆ ಬರಹವಾಯ್ತು ಅಲ್ವಾ! ಇಂತಹ ದುರ್ಗತಿ ಯಾರಿಗೂ ಬೇಡಪ್ಪಾ. ಮುಂದಿನ ಜನ್ಮ ಅಂತ ಇದ್ರೆ ಕತ್ತೆಯಾಗಿ ಮಾತ್ರ ಹುಟ್ಟಲಾರೆ.” ಎಂದು ಪರಿಹಾಸ್ಯ ಮಾಡಿ ನಕ್ಕಿತು.

ಈ ಮಾತು ಕೇಳಿ ಕತ್ತೆಗೆ ತುಂಬಾ ಅವಮಾನವಾಯಿತು. ಸೊಕ್ಕಿನ ಕುದುರೆಗೆ ಬುದ್ಧಿ ಕಲಿಸುವ ಹುನ್ನಾರ ಮಾಡಿತು. ಕೆಲ ಹೊತ್ತಿನ ನಂತರ ವ್ಯಾಪಾರಿ ಪ್ರಯಾಣ ಮುಂದುವರಿಸಲು ಸರಕನ್ನು ಕತ್ತೆಯ ಮೇಲೆ ಏರಿಸಿದಾಗ ಕತ್ತೆ ಅದನ್ನು ಬೀಳಿಸಿ ತಾನೂ ನೆಲಕ್ಕೆ ಬಿದ್ದು ಒದ್ದಾಡತೊಡಗಿತು.

ಇದರಿಂದ ವ್ಯಾಪಾರಿ ತುಂಬಾ ದಿಗಿಲಾಯಿತು. “ಅಯ್ಯೋ ಪಾಪ! ಕತ್ತೆಯ ಆರೋಗ್ಯ ಸರಿಯಿಲ್ಲವೆಂದು ತೋರುತ್ತದೆ” ಎಂದುಕೊಂಡು ಆ ಭಾರವಾದ ಬಟ್ಟೆ ಮೂಟೆಗಳನ್ನು ಕುದುರೆ ಮೇಲೆ ಹೊರಿಸಿ ಪ್ರಯಾಣ ಮುಂದುವರಿಸಿದ. ಕತ್ತೆಯನ್ನು ನಿಂದಿಸಿದ ತಪ್ಪಿಗೆ ಕುದುರೆಗೆ ತಕ್ಕ ಶಿಕ್ಷೆಯಾಯಿತು.

ನೀತಿ :– ನಾವು ಇನ್ನೊಬ್ಬರನ್ನು ಅವಮಾನಗೊಳಿಸಿದಾಗ, ಆ ಅವಮಾನದ ಜೊತೆಗೆ ಶಿಕ್ಷೆಯನ್ನು ಸಹ ನಾವು ಒಂದು ದಿನ ಅನುಭವಿಸಬೇಕಾಗಿರುತ್ತದೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button